ಬೆಂಗಳೂರು:ಮುಂದಿನ ಎರಡೂವರೆ ವರ್ಷಗಳ ಆಡಳಿತಾವಧಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿಯ ನೀಲಿ ನಕಾಶೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ಇಂದಿಲ್ಲಿ ಖಡಕ್ ಆದೇಶ ಮಾಡಿದ್ದಾರೆ.
ಗೃಹ ಕಚೇರಿ ಕಾವೇರಿಗೆ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಹಾಗೂ ಇಲಾಖಾ ಪ್ರಧಾನಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ, ಮುಂದಿನ ಎರಡೂವರೆ ವರ್ಷಗಳ ಆಡಳಿತದ ನೀಲಿ ನಕಾಶೆ ಸಿದ್ಧಪಡಿಸಿ ಎನ್ನುವ ಮೂಲಕ ನಾನೇ ಅಧಿಕಾರದಲ್ಲಿ ಮುಂದುವರೆಯುತ್ತೇನೆ, ನಿಮ್ಮಲ್ಲಿರುವ ಗೊಂದಲಕ್ಕೆ ತೆರೆ ಎಳೆಯಿರಿ ಎಂಬ ಸಂದೇಶವನ್ನು ಪರೋಕ್ಷವಾಗಿ ಅಧಿಕಾರಿಗಳಿಗೆ ನೀಡಿದ್ದಾರೆ.
ಗೊಂದಲದಲ್ಲಿ ಅಧಿಕಾರಿಗಳು
ಅಧಿಕಾರ ಹಂಚಿಕೆ ಗೊಂದಲದಲ್ಲಿ ಸಿಲುಕಿದ್ದ ಅಧಿಕಾರಿಗಳು ಅಭಿವೃದ್ಧಿ ಕಾರ್ಯದ ಕಡೆ ಹೆಚ್ಚು ಗಮನ ಹರಿಸದೆ, ಸಚಿವರುಗಳ ಮಾತಿಗೂ ಮತ್ತು ಕಡತಗಳಿಗೂ ಮಹತ್ವ ನೀಡುತ್ತಿರಲಿಲ್ಲ.
ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ, ಕಳೆದ ಎರಡು ವರ್ಷಗಳ ಆಡಳಿತಾವಧಿಯಲ್ಲಿ ಏನು ನಡೆದಿದೆಯೋ ಅದು ಅಂತ್ಯಗೊಂಡಿದೆ, ನನ್ನಿಂದಲೂ ಕೆಲವು ಒಪ್ಪು-ತಪ್ಪು ಆಗಿರಬಹುದು, ಮುಂದಿನ ಆಡಳಿತ ದಿನಗಳಲ್ಲಿ ನಾನು ಇದಕ್ಕೆ ಎಡೆ ಮಾಡಿಕೊಡುವುದಿಲ್ಲ.
ಕೆಲವು ಇಲಾಖಾ ವಿಷಯಗಳಲ್ಲಿ ನೀವೇ ಸ್ವಯಂ ಪ್ರೇರಿತರಾಗಿ ಆಡಳಿತಾತ್ಮಕ ತೀರ್ಮಾನಗಳನ್ನು ಕೈಗೊಂಡಿದ್ದೀರಿ, ಇನ್ನು ಮುಂದೆ ಬೆಂಗಳೂರು ಸೇರಿದಂತೆ ಯಾವುದೇ ಆಡಳಿತಾತ್ಮಕ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ನನ್ನ ಗಮನಕ್ಕೆ ತರಬೇಕು ಎಂದು ಕಟ್ಟಾದೇಶ ಮಾಡಿದ್ದಾರೆ.
ಕಚೇರಿ ಅನುಮತಿ ಪಡೆಯಬೇಕು
ಯಾವುದೇ ಸಚಿವರು, ಯಾರು ಏನೇ ಹೇಳಲಿ, ಪ್ರಮುಖ ವಿಷಯಗಳು ನನ್ನ ಕಚೇರಿ ಅನುಮತಿ ಪಡೆದೇ ಮುಂದುವರೆಯಬೇಕು.
ಬೆಂಗಳೂರಿನಲ್ಲಿ ಗುಂಡಿ, ಕಸ, ಮಳೆ, ನೀರಿನ ಸಮಸ್ಯೆ, ಅಭಿವೃದ್ಧಿ ಕಾರ್ಯ ಕುಂಠಿತ ವಿಷಯಗಳನ್ನು ಕಲಾನುಕಾಲಕ್ಕೆ ನನ್ನ ಗಮನಕ್ಕೆ ಏಕೆ ತರಲಿಲ್ಲ ಎಂದು ಮುಖ್ಯಕಾರ್ಯದರ್ಶಿ ಅವರನ್ನು ಪ್ರಶ್ನಿಸಿದ್ದಾರೆ.
ಈ ವಿಷಯವೂ ಸೇರಿದಂತೆ ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಗಳಿಗೆ ತಕ್ಷಣ ಹಣ ಬಿಡುಗಡೆ ಮಾಡುವಂತೆ ಇಲಾಖಾ ಕಾರ್ಯದರ್ಶಿಗೆ ಸ್ಥಳದಲ್ಲೇ ಆದೇಶ ಮಾಡಿದ್ದಾರೆ.
ನೀಲಿ ನಕಾಶೆ ಸಿದ್ಧಪಡಿಸಿ
ಬೆಂಗಳೂರು ಸಮಸ್ಯೆ ನಿವಾರಿಸಲು ನೀವು ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿ, ಕೆಲವು ಸಲಹೆ ನೀಡಿದ ನಂತರ ನೀಲಿ ನಕಾಶೆ ಸಿದ್ಧಪಡಿಸುವಂತೆ ತಿಳಿಸಿದರು.
ಈಗಾಗಲೇ ಸಂಪುಟದ ಬಹುತೇಕ ಸಚಿವರು, ಅಧಿಕಾರಿಗಳ ವರ್ತನೆ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದಿರುವರಲ್ಲದೆ, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡು ಸಾರ್ವಜನಿಕ ಟೀಕೆಗೆ ಒಳಗಾಗಿದ್ದೇವೆ ಎಂಬ ಮಾಹಿತಿಯನ್ನು ನೀಡಿದ್ದರು.
ಸಚಿವರಷ್ಟೇ ಅಲ್ಲದೆ, ಶಾಸಕರೂ ಸಹಾ ಪ್ರತಿಯೊಂದು ವಿಷಯಕ್ಕೂ ಮುಖ್ಯಮಂತ್ರಿ ಸಹಿಗಾಗಿ ಇಲ್ಲವೇ ಅಧಿಕಾರಿಗಳಿಗೆ ಆದೇಶ ಕೊಡಿಸಲು ಕಾಯಬೇಕಾಗಿತ್ತು.
ಐದು ವರ್ಷ ಆಡಳಿತ
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಸಿದ್ದರಾಮಯ್ಯ ಮೈಸೂರಿನಲ್ಲಿ, ಐದು ವರ್ಷ ಪೂರ್ಣ ಆಡಳಿತ ನಡೆಸುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.
ಇದಾದ ನಂತರ ಆಡಳಿತ ಪಕ್ಷದಲ್ಲೇ ಪರ-ವಿರೋಧ ಚರ್ಚೆಗಳೂ ಬಂದವು, ಇದರ ಮಧ್ಯೆ ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಬಂದು ಹೋಗಿದ್ದರು.

