ಬೆಂಗಳೂರು:ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಶೇಕಡ 80 ಕಮೀಷನ್ ಆರೋಪ ಮಾಡಿರುವುದನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿ ಸಿದ್ದರಾಮಯ್ಯ ಸರ್ಕಾರಕ್ಕೆ ಛಾಟಿ ಬೀಸಿದೆ.
ಗುತ್ತಿಗೆದಾರರ ಆರೋಪವನ್ನು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಗಂಭೀರವಾಗಿ ತೆಗೆದುಕೊಂಡು ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನಿಸಿದ್ದಾರೆ.
ಕ್ರಮ ಕೈಗೊಳ್ಳಲು ಸೂಚನೆ
ಯಾವ ಮಂತ್ರಿಗಳು ಕಮೀಷನ್ ವ್ಯವಹಾರದಲ್ಲಿದ್ದಾರೆ ಎಂಬುದನ್ನು ನೀವು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರಾಹುಲ್ ಸೂಚಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದ ಭರಾಟೆ ಆರಂಭಕ್ಕೂ ಮುನ್ನವೇ ನಿಮ್ಮ ಸಚಿವರ ಮೂಲಕ ಗುತ್ತಿಗೆದಾರರ ಆರೋಪಗಳಿಗೆ ಸ್ಪಷ್ಟನೆ ಕೊಡಿಸಿ ಮತ್ತು ಅವರ ಬೇಡಿಕೆಗಳಿಗೆ ಸ್ಪಂದಿಸಿ ಎಂದು ಸಲಹೆ ನೀಡಿದ್ದಾರೆ.
ನವೆಂಬರ್ನಲ್ಲಿ ಅಧಿಕಾರ ಹಸ್ತಾಂತರ ಆಗುವುದೆಂಬ ಚರ್ಚೆಗಳ ವೇಳೆಯೇ ಪಕ್ಷದ ವರಿಷ್ಟರು ಸಂದೇಶ ಕಳುಹಿಸಿರುವುದು ಮುಖ್ಯಮಂತ್ರಿ ಅವರಿಗೆ ಸ್ವಲ್ಪ ಇರುಸು-ಮುರುಸು ಉಂಟು ಮಾಡಿದೆ.
ಮುಖ್ಯಮಂತ್ರಿ ಔತಣಕೂಟ ಸಭೆ
ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಚಿವರುಗಳಿಗೆ ನೀಡಿರುವ ಮುಕ್ತ ಅವಕಾಶಗಳಿಂದ ಇಂತಹ ಆರೋಪಗಳು ಎದುರಾಗಿವೆ ಎಂದು ಬೇಸರಗೊಂಡ ಮುಖ್ಯಮಂತ್ರಿ, ಔತಣಕೂಟ ಸಭೆ ಕರೆದು ಸಹೋದ್ಯೋಗಿಗಳ ಸಮ್ಮುಖದಲ್ಲೇ ಎಲ್ಲಾ ವಿಷಯವನ್ನು ಮುಕ್ತವಾಗಿ ಚರ್ಚಿಸಲು ತೀರ್ಮಾನಿಸಿದ್ದಾರೆ.
ಗುರುವಾರ ನಡೆದ ಸಂಪುಟ ಸಭೆ ನಂತರ ಪಕ್ಷದ ವರಿಷ್ಟರ ಸಂದೇಶ ರವಾನಿಸಿ, ಗುತ್ತಿಗೆದಾರರ ಆರೋಪವನ್ನು ಯಾರು ಹೊರುತ್ತೀರಿ.
ಗಂಭೀರವಾಗಿ ಪರಿಗಣಿಸಿ
ಇದರಲ್ಲಿ ನಿಮ್ಮ ಪಾತ್ರವಿದೆಯೋ ಅಥವಾ ನಿಮ್ಮ ಸುತ್ತಮುತ್ತಲಿನವರ ಪಾತ್ರವೋ ಎಂಬುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ಈ ಆರೋಪ ನನ್ನ ಸರ್ಕಾರ ಮತ್ತು ಪಕ್ಷದ ಮೇಲೆ ಪರಿಣಾಮ ಬೀರಿದೆ, ಇದಕ್ಕೆ ಕಡಿವಾಣ ಹಾಕಬೇಕು, ಮುಂದೆ ಇಂತಹ ಆರೋಪಗಳು ಎದುರಾಗದಂತೆ ಕ್ರಮ ಕೈಗೊಳ್ಳಲು ಸೋಮವಾರ ಕಾವೇರಿ ನಿವಾಸದಲ್ಲಿ ಸಭೆ ಸೇರಿ ಚರ್ಚಿಸೋಣ ಎಂದಿದ್ದಾರೆ.


