ರಾಜಕೀಯ ಸಂಧ್ಯಾಕಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ : ಡಾ.ಯತೀಂದ್ರ
ಬೆಂಗಳೂರು:ತಂದೆಯವರು ರಾಜಕೀಯ ಸಂಧ್ಯಾಕಾಲದಲ್ಲಿದ್ದು ಪರ್ಯಾಯವಾಗಿ ಸಚಿವ ಸತೀಶ್ ಜಾರಕಿಹೊಳಿ ನಮ್ಮನ್ನು ಮುನ್ನಡೆಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಭವಿಷ್ಯ ನುಡಿದಿದ್ದಾರೆ.
ನವೆಂಬರ್ನಲ್ಲಿ ಕರ್ನಾಟಕ ಕಾಂಗ್ರೆಸ್ನಲ್ಲಿ ಕ್ರಾಂತಿ ಉಂಟಾಗುತ್ತದೆ ಎಂಬ ಹೇಳಿಕೆಗಳ ಬೆನ್ನಲ್ಲೇ ಡಾ.ಯತೀಂದ್ರ ಇಂತಹ ಮಾತುಗಳನ್ನಾಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಡಾ.ಯತೀಂದ್ರ ಹೇಳಿಕೆ
ಡಾ.ಯತೀಂದ್ರ ಹೇಳಿಕೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಆಡಳಿತ ಪಕ್ಷದ ಕೆಲವು ಸಚಿವರು ಮತ್ತು ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಗಾದಿಗೇರಲು ತಮ್ಮ ರಾಜಕೀಯ ದಾಳಗಳನ್ನು ಹೂಡುತ್ತಿರುವ ಬೆನ್ನಲ್ಲೇ ಡಾ.ಯತೀಂದ್ರ, ತಮ್ಮ ತಂದೆ ಸಿದ್ದರಾಮಯ್ಯ ನಂತರ ಜಾರಕಿಹೊಳಿಯೇ ನಾಯಕರು ಎಂದು ಘೋಷಿಸಿದ್ದಾರೆ.
ತಂದೆಯವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟವರು, ಅದೇ ಸಿದ್ಧಾಂತದಲ್ಲಿ ಸತೀಶ್ ಜಾರಕಿಹೊಳಿ ಸಹಾ ನಂಬಿಕೆ ಇಟ್ಟಿದ್ದಾರೆ.
ನಮ್ಮನ್ನು ಮುನ್ನಡೆಸಲಿ
ಸೈದ್ಧಾಂತಿಕ ರಾಜಕಾರಣ ಮಾಡುವ ನಾಯಕರು ನಮ್ಮನ್ನು ಮುನ್ನಡೆಸಲಿ ಎಂಬುದಾಗಿ ಹೇಳಿದ್ದೇನೆಯೇ ಹೊರತು ಇದರಲ್ಲಿ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸತೀಶ್ ಜಾರಕಿಹೊಳಿ ಜೊತೆಗೂಡಿ ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲೇ ಇಂತಹ ಹೇಳಿಕೆ ನೀಡಿರುವ ಡಾ.ಯತೀಂದ್ರ, ನಮ್ಮ ತಂದೆ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದೆ, ಚುನಾವಣಾ ರಾಜಕೀಯದಿಂದ ದೂರ ಉಳಿಯಲಿದ್ದಾರೆ.
ಇಂತಹ ಸನ್ನಿವೇಶದಲ್ಲಿ ನಮ್ಮನ್ನು ಮುನ್ನಡೆಸಲು ಸತೀಶ್ ಸಮರ್ಥ ನಾಯಕರು, ಮುಖ್ಯಮಂತ್ರಿಯ ಪ್ರಸಕ್ತ ಅವಧಿಯನ್ನು ನಮ್ಮ ತಂದೆ ಪೂರ್ಣಗೊಳಿಸಲಿದ್ದಾರೆ ಎಂದರು.
ಸಾಮಾಜಿಕ ನ್ಯಾಯದಲ್ಲಿ ನಂಬಿಕೆ
ದೇವರಾಜ ಅರಸು ನಂತರ ಹಲವು ನಾಯಕರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ರಾಜಕೀಯ ಮಾಡಿದ್ದಲ್ಲದೆ, ಸಂಘಟನೆಯನ್ನೂ ಮಾಡಿದರು.
ತದನಂತರ ಸಿದ್ದರಾಮಯ್ಯ ಇದೇ ಸಿದ್ಧಾಂತದಲ್ಲಿ ರಾಜಕೀಯ ಮಾಡಿಕೊಂಡು ಬಡವರು, ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಸಲ್ಲಬೇಕಾದ ನ್ಯಾಯ ಕೊಡಿಸುವಲ್ಲಿ ಶ್ರಮ ವಹಿಸಿದ್ದಾರೆ.
ಇದು ನಿಂತ ನೀರಾಗಬಾರದು, ಈ ವರ್ಗದ ಜನರ ಕಲ್ಯಾಣಕ್ಕೆ ಸಿದ್ದರಾಮಯ್ಯ ಅಂತಹ ನಾಯಕರ ಅಗತ್ಯವಿದೆ, ಅಂತಹ ಗುಣವನ್ನು ಸತೀಶ್ ಅವರಲ್ಲಿ ಕಂಡು ನಿಮ್ಮಲ್ಲಿ ಬಹಿರಂಗವಾಗಿಯೇ ಹೇಳುತ್ತಿದ್ದೇನೆ.
ಸತೀಶ್ಗೆ ಚುನಾವಣಾ ನಾಯಕತ್ವ
2028ರ ವಿಧಾನಸಭಾ ಚುನಾವಣಾ ನಾಯಕತ್ವವನ್ನೂ ಸತೀಶ್ ಅವರೇ ವಹಿಸಿಕೊಳ್ಳಲಿ, ಅವರ ಹಿಂದೆ ನನ್ನಂತಹ ಲಕ್ಷಾಂತರ ಕಾರ್ಯಕರ್ತರು ಮತ್ತು ಮುಖಂಡರು ಬೆನ್ನಲುಬಾಗಿ ನಿಲ್ಲಲಿದ್ದಾರೆ ಎಂದರು.
ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಯತೀಂದ್ರ, ಪರ್ಯಾಯ ನಾಯಕ ಎಂದ ತಕ್ಷಣ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಾರೆ ಎಂಬ ಅರ್ಥದಲ್ಲಿ ಹೇಳಿಲ್ಲ.
ನವೆಂಬರ್ ಕ್ರಾಂತಿ ಊಹಾಪೋಹ
ನವೆಂಬರ್ನಲ್ಲಿ ಕ್ರಾಂತಿ ಎನ್ನುವುದು ಊಹಾಪೋಹ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಪಕ್ಷದಲ್ಲಿ ಅಂತಹ ಚರ್ಚೆಯೂ ನಡೆದಿಲ್ಲ.
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಆಗುವ ಹಲವು ಸಮರ್ಥ ನಾಯಕರಿದ್ದಾರೆ, ಶಾಸಕರು ಮತ್ತು ಪಕ್ಷದ ವರಿಷ್ಠರು, ಶಾಸಕಾಂಗ ಪಕ್ಷದ ನಾಯಕ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ, ಪ್ರಸ್ತುತ ನಡೆಯುತ್ತಿರುವ ಎಲ್ಲಾ ವಿಚಾರಗಳೂ ಊಹಾಪೋಹ ಎಂದರು.

