ಬೆಂಗಳೂರು:ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಪೋಲಿಸರು ಧರಿಸುವ ಕ್ಯಾಪ್ ಮಾದರಿಯ ಪೀಕ್ ಕ್ಯಾಪ್ ರಾಜ್ಯ ಪೋಲಿಸರಿಗೂ ನೀಡಲಾಗಿದೆ.
ಕಳೆದ ಏಳು ದಶಕಗಳಿಂದ ನಮ್ಮ ಪೋಲಿಸರು ಧರಿಸುತ್ತಿದ್ದ ಖಾಕಿ ಟೋಪಿಗೆ ಗುಡ್ಬೈ ಹೇಳಿರುವ ರಾಜ್ಯ ಸರ್ಕಾರ ನಮ್ಮವರಿಗೂ ನೀಲಿ ಬಣ್ಣದ ಗತ್ತಿನ ಪೀಕ್ ಕ್ಯಾಪ್ ನೀಡಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಾಂಕೇತಿಕವಾಗಿ ಕೆಲವು ಪೋಲಿಸ್ ಅಧಿಕಾರಿಗಳಿಗೆ ಪೀಕ್ ಕ್ಯಾಪ್ ತೊಡಿಸುವ ಮೂಲಕ ಖಾಕಿ ಟೋಪಿಗೆ ಗುಡ್ಬೈ ಹೇಳಿದರು.
ಕಟಿಬದ್ಧ ನಿಲುವು ತಳೆಯಬೇಕು
ನಂತರ ಮಾತನಾಡಿದ ಮುಖ್ಯಮಂತ್ರಿ, ಮಾದಕದ್ರವ್ಯ ಮುಕ್ತ ಕರ್ನಾಟಕ ನಿಮ್ಮ ಗುರಿ ಆದಾಗ ಕರ್ನಾಟಕದ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತದೆ, ಯುವಶಕ್ತಿ, ವಿದ್ಯಾರ್ಥಿಗಳ ಚೈತನ್ಯ, ಸಾಮರ್ಥ್ಯ ಮಾದಕ ವಸ್ತುಗಳಿಗೆ ಬಲಿಯಾಗಬಾರದು ಎಂಬ ಕಟಿಬದ್ಧ ನಿಲುವು ಪೊಲೀಸ್ ಇಲಾಖೆಯದ್ದಾಗಬೇಕು ಎಂದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ, ರಾಜ್ಯದಲ್ಲಿ ಮಾದಕ ವಸ್ತು ಹಾವಳಿ ತಪ್ಪಿಸಿದರೆ ಕರ್ನಾಟಕ ಪೊಲೀಸ್ ಘನತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗುತ್ತದೆ.
ರಿಯಲ್ ಎಸ್ಟೇಟ್ದಾರರು, ಮಾದಕವಸ್ತು ಜಾಲದ ಜೊತೆ ಕೆಲವು ಪೊಲೀಸರು ಶಾಮೀಲು ಆಗಿರುತ್ತಾರೆ, ರೌಡಿ ಚಟುವಟಿಕೆಗಳನ್ನು ಮೊಳಕೆಯಲ್ಲೆ ಚಿವುಟಿ ಹಾಕಬೇಕು, ಪೊಲೀಸರ ಬಗ್ಗೆ ಅಪರಾಧ ಜಗತ್ತಿನಲ್ಲಿ ಭಯ ಕಡಿಮೆಯಾಗಿದೆ, ಏಕೆ ಯಾಕೆ ಹೀಗಾಯ್ತು ಎಂಬುದಾಗಿ ನಿಮ್ಮನ್ನು ನೀವೇ ಪ್ರಶ್ನಿಸಿಕೊಂಡರೆ ಉತ್ತರ ನಿಮಗೇ ಗೊತ್ತಿರುತ್ತದೆ.
ಡ್ರಗ್ ಮುಕ್ತ ಕರ್ನಾಟಕ
ಮಾದಕವಸ್ತು ಮಾರುವವರು, ತರುವವರು, ಎಲ್ಲಿಂದ ಬರುತ್ತದೆ, ಜಾಲದ ಏಜೆಂಟ್ ಯಾರ್ಯಾರು ಎಂದೂ ನಿಮಗೇ ಗೊತ್ತಿರುತ್ತದೆ, ಆದಷ್ಟು ಬೇಗ ’ಡ್ರಗ್ ಮುಕ್ತ ಕರ್ನಾಟಕ’ ಮಾಡಿ ತೋರಿಸಿ ಎಂದರು.
ಪೋಲಿಸ್ ಸಿಬ್ಬಂದಿಗೆ ಪೀಕ್ ಕ್ಯಾಪ್ ಮಾದರಿ ಆಯ್ಕೆ ಮಾಡಿದ್ದು ನಾನೇ, ಸುಮಾರು 70 ವರ್ಷಗಳಿಂದ ಇದ್ದ ಒಂದೇ ಮಾದರಿ ಟೋಪಿ ಬದಲಾಯಿಸಿದ್ದೇವೆ, ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿ ಕ್ಯಾಪ್ ಒದಗಿಸಲಾಗಿದೆ, ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಲಿ, ಕೇವಲ ಕ್ಯಾಪ್ ಬದಲಾಗುವುದಲ್ಲ, ನಿಮ್ಮ ಕಾರ್ಯಕ್ಷಮತೆಯೂ ಬದಲಾಗಬೇಕು.
ಪೊಲೀಸ್ ಇಲಾಖೆ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ, ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ ಎಂಬುದು ರಾಜ್ಯದ ಘನತೆ ಹೆಚ್ಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ತವ್ಯ ನಿಷ್ಠೆಯಲ್ಲಿ ರಾಜಿ ಬೇಡ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಯಾವ ಸರ್ಕಾರ ಬಂದರೂ ನಿಮ್ಮ ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿ ಆಗಬಾರದು, ರಾಜಿ ಮಾಡಿಕೊಂಡರೆ ವ್ಯವಸ್ಥೆ ಸಂಪೂರ್ಣ ಕುಸಿಯಲಿದೆ ಎಂದು ಕಿವಿ ಮಾತು ಹೇಳಿದರು.
ಪೊಲೀಸರ ಮೇಲೆ ಸಮಾಜ ಹಾಗೂ ಸರ್ಕಾರ ಬಹಳ ವಿಶ್ವಾಸ ಇಟ್ಟಿರುತ್ತದೆ, ನೀವು ಸಮಾಜ ರಕ್ಷಕರು, ಅಧಿಕಾರ ಪ್ರಮಾಣವಚನ ಸ್ವೀಕಾರ ವೇಳೆ ನಾನು ಸ್ವಲ್ಪ ಖಾರವಾಗಿಯೇ ಮಾತನಾಡಿದ್ದೆ.
ಕಳೆದ ಸರ್ಕಾರದ ಅವಧಿಯಲ್ಲಿ ಆಯಧಪೂಜೆ ವೇಳೆ ವಿಜಯಪುರ ಹಾಗೂ ಉಡುಪಿಯಲ್ಲಿ ಕೆಲವರು ಸಮವಸ್ತ್ರ ತೆಗೆದು ಕೇಸರಿ ವಸ್ತ್ರ ಧರಿಸಿದ್ದರು, ರಾಜಕೀಯ ಒತ್ತಡ ಹಾಗೂ ಬೇರೆಯವರನ್ನು ಮೆಚ್ಚಿಸಲು ಈ ರೀತಿ ಮಾಡಿದರೆ ನಿಮ್ಮನ್ನು ನೀವು ಮಾರಿಕೊಂಡಂತೆ.
ವ್ಯಕ್ತಿತ್ವ, ಘನತೆ ನಾಶವಾಗುತ್ತದೆ
ನಿಮ್ಮ ವ್ಯಕ್ತಿತ್ವ, ಇಲಾಖೆಗೆ ಇರುವ ಘನತೆ ನಾಶವಾಗುತ್ತದೆ, ನೀವು ರಾಜಕೀಯ ಹಿಂಬಾಲಕರಾಗುತ್ತೀರಿ, ಆಗ ನಿಮ್ಮನ್ನು ಯಾರು ನಂಬುತ್ತಾರೆ, ಇಂತಹ ಪದ್ಧತಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬೇಡಿ.
ಹೆಚ್ಚುತ್ತಿರುವ ಸೈಬರ್ ಅಪರಾಧ ಹತೋಟಿಗೆ ಮೇಲಾಧಿಕಾರಿಗಳು, ಕೆಳ ಹಂತದ ಅಧಿಕಾರಿಗಳು ತಯಾರಾಗಬೇಕು, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಮನೆಗೆಲಸದವರು, ಚಾಲಕರು, ಕಾವಲುಗಾರರ ವಿವರ ನೋಂದಾಯಿಸಿಕೊಳ್ಳಬೇಕು, ಆಗ ಬಹುಮಟ್ಟಿಗೆ ಅಪರಾಧ ನಿಯಂತ್ರಣಕ್ಕೆ ಬರುತ್ತದೆ.
ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ, ಇವರಿಬ್ಬರೂ ನಾಡಿನ ರಕ್ಷಕರು, ರಾಜ್ಯ ಪೊಲೀಸ್ ಇಲಾಖೆಗೆ ಬಹಳ ಗೌರವ ಇದೆ, ಪೊಲೀಸರ ಯಶಸ್ಸಿನಲ್ಲೇ, ಸರ್ಕಾರದ ಯಶಸ್ಸು ಇದೆ, ರಾಜ್ಯ ಪೊಲೀಸ್ ಸಿಬ್ಬಂದಿ ಸಮರ್ಥರಿದ್ದಾರೆ.
ದೇಶಕ್ಕಾಗಿ ಪೋಲಿಸ್ ಕೆಲಸ
ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ 1988ರಲ್ಲಿ ವಿಶ್ವ ಯುವ ಸಮ್ಮೇಳನಕ್ಕೆ ಉತ್ತರ ಕೊರಿಯಾದ ಪ್ಯೋಂಗ್ಯಾಂಗ್ಗೆ ತೆರಳಿದ್ದೆ, ಆಗ ಅಲ್ಲಿನ ಪ್ರಮುಖ ವೃತ್ತವೊಂದರಲ್ಲಿ ಮಹಿಳಾ ಪೊಲೀಸ್ ಒಬ್ಬರು ಏಕಾಂಗಿಯಾಗಿ ಸಂಚಾರ ದಟ್ಟಣೆ ನಿಭಾಯಿಸುತ್ತಿದ್ದರು, ನಾನು ಆಕೆಯ ಸಂಬಳ ಎಷ್ಟು ಎಂದು ಕೇಳಿದೆ, ಆಕೆ ಕೋಪಗೊಂಡು ನಾನು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ಸಂಬಳಕ್ಕಾಗಿ ಅಲ್ಲ ಎಂದರು.
ಡಾ.ಪರಮೇಶ್ವರ್ ಗೃಹ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಹೊಸ ರೂಪ ನೀಡಿದ್ದಾರೆ, ಪೋಲಿಸರಿಗಾಗಿ ವಸತಿ ನಿಲಯ, ಸೇವೆ ವೇಳೆ ಮೃತರಾದರೆ ಪರಿಹಾರ, ಸನ್ಮಿತ್ರ ಕಾರ್ಯಕ್ರಮ ತರಲಾಗುತ್ತಿದೆ, ಪೋಲಿಸ್ ಕುಟುಂಬಕ್ಕಾಗಿ ಅನೇಕ ಯೋಜನೆ ತರಲಾಗಿದೆ.
ಬೆಂಗಳೂರಿನ ಜನಸಂಖ್ಯೆ 1.40 ಕೋಟಿ, ವಾಹನಗಳ ಸಂಖ್ಯೆ 1.23 ಕೋಟಿ, ಜನತೆ ಸಾರ್ವಜನಿಕ ಸಾರಿಗೆಗಿಂತ ಸ್ವಂತ ಸಾರಿಗೆ ಮೇಲೆ ಆಸಕ್ತಿ ಹೊಂದಿದ್ದಾರೆ, ದೊಡ್ಡ ಪ್ರಮಾಣದಲ್ಲಿ ಬಿಬಿಸಿ ರಸ್ತೆ, ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್ ಸೇರಿದಂತೆ ಅನೇಕ ಯೋಜನೆ ಹಮ್ಮಿಕೊಂಡಿದ್ದೇವೆ. ಸಂಚಾರ ದಟ್ಟಣೆ ನಿವಾರಣೆಗೆ ಸಲಹೆಗಳನ್ನು ಸರ್ಕಾರಕ್ಕೆ ನೀಡಿ ಎಂದರು.

