ಬೆಂಗಳೂರು:ಹಣೆಯಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುತ್ತಾರೆ ಇಲ್ಲವಾದರೆ ತಲೆ ಕೆಡಿಸಿಕೊಳ್ಳಲಾಗದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲೇ ಎದುರಿಸುತ್ತೇವೆ, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ, ಅವರು ಪಕ್ಷಕ್ಕೆ ಚ್ಯುತಿ ಬರದಂತೆ ನಡೆದುಕೊಂಡಿದ್ದಾರೆ, ಅವರಿಗೆ ಯಾವುದೇ ಅಧಿಕಾರ ದಕ್ಕಬೇಕಾದರೆ ದೆಹಲಿ ನಾಯಕರೇ ತೀರ್ಮಾನ ಕೈಗೊಳ್ಳಬೇಕು.
ಸಹೋದರನಾಗಿ ಅವರು ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಬಯಕೆ, ಅದಕ್ಕೆ ಹಣೆಬರಹದ ಜೊತೆಗೆ ಕಾಲವೂ ಕೂಡಿ ಬರಬೇಕು.
ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಣಕ್ಕಿಳಿಯಲಿ ಅವರಿಗೆ ಅಂತಹ ವಯಸ್ಸೇನೂ ಆಗಿಲ್ಲ, ಅವರು ನಡೆದಾಡಿಕೊಂಡು ಚಾಕಚಕ್ಯತೆಯಿಂದ ಇದ್ದಾರೆ, 90-95 ವರ್ಷ ವಯಸ್ಸಿನವರೇ ಚುನಾವಣೆ ಎದುರಿಸುವಾಗ ನಮ್ಮ ಮುಖ್ಯಮಂತ್ರಿ ಅವರು ಕಣಕ್ಕೆ ಏಕೆ ಇಳಿಯಬಾರದು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮುಂದಾಳತ್ವದಲ್ಲೇ ಚುನಾವಣೆ
ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ, ಅವರು ಜನನಾಯಕ, ಮುಂದಿನ ಚುನಾವಣೆಯನ್ನು ಅವರ ಮುಂದಾಳತ್ವದಲ್ಲೇ ಎದುರಿಸುತ್ತೇವೆ.
ನವೆಂಬರ್ ಕ್ರಾಂತಿ, ಎರಡೂವರೆ ವರ್ಷ ಆಡಳಿತ ಹಂಚಿಕೆ ಮಾಹಿತಿ ಕುರಿತು ನನಗೇನೂ ತಿಳಿಯದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 135 ರಿಂದ 137 ಸ್ಥಾನ ನೀಡಿ ಕಾಂಗ್ರೆಸ್ ಅಧಿಕಾರದಲ್ಲಿ ಇರಬೇಕೆಂದು ಜನ ಮತ ನೀಡಿದ್ದಾರೆ, ಅದರಂತೆ ನಮ್ಮ ಪಕ್ಷ ಆಡಳಿತ ನಡೆಸುತ್ತಿದೆ ಎಂದರು.

