ನವದೆಹಲಿ:ಕರ್ನಾಟಕದಲ್ಲಿನ ಅಧಿಕಾರ ಹಸ್ತಾಂತರ ವಿವಾದ ನಿಭಾಯಿಸುವ ಅಧಿಕಾರವನ್ನು ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಕಾಂಗ್ರೆಸ್ ವರಿಷ್ಠರು ವಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಎರಡೂವರೆ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಳಿದ ಅವಧಿಗೆ ತಮಗೆ ನಾಯಕತ್ವ ನೀಡಬೇಕೆಂದು ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.
ಪರ-ವಿರೋಧ ಹೇಳಿಕೆ
ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬೆಂಬಲಿಗರು ಪರ ಹಾಗೂ ವಿರೋಧ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುತ್ತಾ ಗೊಂದಲ ಸೃಷ್ಟಿ ಮಾಡಿದ್ದಾರೆ.
ಶಿವಕುಮಾರ್ ಪಕ್ಷದ ಅಧಿನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೆಹಲಿ ಮಟ್ಟದ ಪ್ರಮುಖ ನಾಯಕರನ್ನು ಪದೇ ಪದೇ ಭೇಟಿ ಮಾಡಿ ತಮ್ಮ ಹಕ್ಕೋತ್ತಾಯ ಮಂಡಿಸಿದ್ದಾರೆ.
ಕರ್ನಾಟಕದಲ್ಲಿ ಪಕ್ಷ ಅಧಿಕಾರ ಉಳಿಸಿಕೊಂಡು, ನಾಯಕತ್ವ ಗೊಂದಲವನ್ನು ಬಗೆಹರಿಸಲು ರಾಹುಲ್ ಮತ್ತು ಖರ್ಗೆ ಅವರು ವೇಣುಗೋಪಾಲ್ ಅವರಿಗೆ ಅಧಿಕಾರ ನೀಡಿದ್ದಾರೆ.
ಬಿಹಾರ ಚುನಾವಣೆ
ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವೇಣುಗೋಪಾಲ್ ಇತ್ತ ಕಡೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರವನ್ನು ವೇಣುಗೋಪಾಲ್ ಅವರಿಗೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಿದ್ದರಾಮಯ್ಯ ಬಣದ ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ ಸೇರಿದಂತೆ ಕೆಲವರು ಕಳೆದ ವಾರ ದೆಹಲಿಗೆ ತೆರಳಿ ರಾಜಕೀಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ್ದಾರೆ.
ಈ ಭೇಟಿ ವೇಳೆ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿಗೆ ಅಧಿಕಾರದಲ್ಲಿ ಮುಂದುವರಿಸುವುದೂ ಸೇರಿದಂತೆ ನಾಯಕತ್ವ ಬದಲಾವಣೆ ನಂತರ ಆಗಬಹುದಾದ ರಾಜಕೀಯ ಸನ್ನಿವೇಶಗಳನ್ನು ಬಿಡಿಸಿಟ್ಟಿದ್ದಾರೆ.
ವರಿಷ್ಠರ ಪ್ರತ್ಯೇಕ ಭೇಟಿ
ಖಾಸಗಿ ಕಾರ್ಯಕ್ರಮ ನಿಮಿತ್ತ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು, ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಅವರು ವಿಶೇಷ ವಿಮಾನದಲ್ಲಿ ತಡರಾತ್ರಿಯೇ ನಗರಕ್ಕೆ ಹಿಂತಿರುಗಲಿದ್ದು, ಶಿವಕುಮಾರ್ ದೆಹಲಿಯಲ್ಲಿಯೇ ಕೆಲವು ದಿನ ಉಳಿಯಲಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನವೆಂಬರ್ 20ಕ್ಕೆ ಎರಡೂವರೆ ವರ್ಷ ಪೂರೈಸಲಿದೆ.
ನವೆಂಬರ್ನಲ್ಲೇ ನಾಯಕತ್ವ
ನವೆಂಬರ್ನಲ್ಲೇ ತಾವು ನಾಯಕತ್ವ ವಹಿಸಿಕೊಳ್ಳಬೇಕೆಂದು ಪಣತೊಟ್ಟಂತಿರುವ ಶಿವಕುಮಾರ್, ಅಧಿನಾಯಕ ರಾಹುಲ್ ಮತ್ತು ಉಳಿದ ನಾಯಕರನ್ನು ಭೇಟಿ ಮಾಡಿ ತಮ್ಮ ಹಕ್ಕೋತ್ತಾಯ ಮಾಡಲಿದ್ದಾರೆ.
ದೆಹಲಿಗೆ ತೆರಳುವುದಕ್ಕೂ ಮುನ್ನ ತಮ್ಮ ಆಪ್ತರ ಬಳಿ ಖಾಸಗಿ ಚರ್ಚೆ ಮಾಡುತ್ತಾ ಮುಖ್ಯಮಂತ್ರಿ ಆಗುವುದು ಖಚಿತ ಎಂಬ ಸಂದೇಶ ನೀಡಿದ್ದಾರೆ.
ನಾಯಕತ್ವ ವಿಚಾರ
ವೇಣುಗೋಪಾಲ್ ಅವರಿಗೆ ರಾಹುಲ್ ಪೂರ್ಣ ಅಧಿಕಾರ ನೀಡಿದ್ದಾರೆ, ಆದರೆ, ಅವರಿನ್ನೂ ನಾಯಕತ್ವದ ಬಗ್ಗೆ ಯಾವುದೇ ವಿಚಾರ ಕೈಗೊಂಡಿಲ್ಲ.
ಬಿಹಾರ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಮುಗಿದಿರುವುದರಿಂದ ಕರ್ನಾಟಕ ವಿಚಾರವನ್ನು ಕೈಗೆತ್ತಿಕೊಳ್ಳುವ ಅವಕಾಶ ಇದ್ದು, ದೆಹಲಿ ಪ್ರವಾಸ ಸಂದರ್ಭದಲ್ಲಿ ವೇಣುಗೋಪಾಲ್ ಸೇರಿದಂತೆ ಇತರ ವರಿಷ್ಠರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ.

