ಬೆಂಗಳೂರು:ಸರ್ಕಾರದ ಸ್ಪಷ್ಟ ಕೈಗಾರಿಕಾ ನೀತಿಗಳು, ಸರಳೀಕೃತ ಅನುಮತಿ, ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣ, ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸಮರ್ಥಿಸಿಕೊಂಡಿದ್ದಾರೆ.
‘ಬೆಂಗಳೂರು ಟೆಕ್ ಸಮ್ಮಿಟ್’ 28ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, ಬಾಹ್ಯಾಕಾಶ ತಂತ್ರಜ್ಞಾನ ನೀತಿ, ಸ್ಟಾರ್ಟ್ಅಪ್ನಂತಹ ಪ್ರಮುಖ ನೀತಿ ರಚಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಡಲಾಗಿದೆ ಎಂದರು.
25,000 ಸ್ಟಾರ್ಟ್ಅಪ್ ಗುರಿ
ಕರ್ನಾಟಕವನ್ನು 2034ರ ವೇಳೆಗೆ ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸುವ ಗುರಿಗೆ ಬಾಹ್ಯಾಕಾಶ ತಂತ್ರಜ್ಞಾ ನೀತಿ ಸಹಕಾರಿಯಾಗಲಿದೆ, ಹೊಸ ಸ್ಟಾರ್ಟ್ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಬಂಡವಾಳ ನೆರವು, ಮಾರುಕಟ್ಟೆ ಅವಕಾಶ, ಮೂಲಸೌಲಭ್ಯ, ಕೌಶಲ್ಯಾಭಿವೃದ್ಧಿ ಕ್ರಮಗಳ ಮೂಲಕ 25,000 ಸ್ಟಾರ್ಟ್ಅಪ್ಗಳ ಸ್ಥಾಪನೆ ಗುರಿ ಸರ್ಕಾರ ಹೊಂದಿದೆ.
ಈ ವರ್ಷದ ಶೃಂಗಸಭೆಯ ಧ್ಯೇಯವಾಕ್ಯ, ’ಭವಿಷ್ಯೀಕರಣಗೊಳ್ಳಿ-ಅಜ್ಞಾತವನ್ನು ರೂಪಿಸುತ್ತಾ, ಊಹಿಸಿಲಾಗದ್ದನ್ನು ಅಳೆಯುತ್ತಾ, ಜಗತ್ತನ್ನು ಮುಂದೆ ಕೊಂಡೊಯ್ಯುವುದು” ಎಂಬುದಾಗಿದೆ.
ಕರ್ನಾಟಕ ಜ್ಞಾನಕಾಶಿಯಾಗಿದ್ದು 85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸುಮಾರು 1,800 ಐಟಿಐಗಳಿಗೆ ನೆಲೆಯಾಗಿದೆ, ರಾಜ್ಯದ ನಿರುದ್ಯೋಗ ಪ್ರಮಾಣ 4.3% ರಷ್ಟು ಮಾತ್ರ ಇದ್ದು, ರಾಜ್ಯದ ಸಮರ್ಥ ಉತ್ಪಾದಕತೆ ಮತ್ತು ಉದ್ಯೋಗಾವಕಾಶಗಳನ್ನು ಎತ್ತಿ ತೋರಿಸುತ್ತದೆ.
16,000ಕ್ಕೂ ಹೆಚ್ಚು ನವೋದ್ಯಮ ನೆಲೆ
ಕರ್ನಾಟಕ 16,000ಕ್ಕೂ ಹೆಚ್ಚು ನವೋದ್ಯಮಗಳ ನೆಲೆಯಾಗಿದೆ, ಭಾರತದ ಒಟ್ಟು ನವೋದ್ಯಮ ನಿಧಿಗೆ 47% ರಷ್ಟು ರಾಜ್ಯದ ಕೊಡುಗೆಯಾಗಿದೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, 200 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಲಿದ್ದು, ಘಟಕ ಸ್ಥಾಪಿಸುವ ಕಂಪನಿಗಳಿಗೆ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.
ಸೆಮಿಕಂಡಕ್ಟರ್ ಪಾರ್ಕ್ ದೇಶ ಮತ್ತು ರಾಜ್ಯ ಮಟ್ಟದಲ್ಲಿ ಎಲ್ಲ ನಾವೀನ್ಯತಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ, ಡ್ರೋನ್, ಸೆಮಿಕಂಡಕ್ಟರ್ ಸಾಧನಗಳು ಮತ್ತು ಸೌರ ವಿದ್ಯುತ್ ಉತ್ಪಾದನೆಯನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ, ಜೊತೆಗೆ ಇಂಡಸ್ಟ್ರಿ-5.0 ಮತ್ತು ಇತರ ಅತ್ಯಾಧುನಿಕ ಕೈಗಾರಿಕಾ ವಿಧಾನಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ.
18,300 ನವೋದ್ಯಮಗಳಿವೆ
ಕೈಗಾರಿಕೆಗಳು ಬೆಳೆಯಬೇಕು, ಹೂಡಿಕೆದಾರರು ನಮ್ಮಲ್ಲಿಗೆ ಬರಬೇಕೆಂದರೆ, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಪರಿಸರ ಉತ್ತಮವಾಗಿರಬೇಕು, ನಮ್ಮಲ್ಲಿ 800ಕ್ಕೂ ಹೆಚ್ಚು ಆರ್ ಅಂಡ್ ಡಿ ಕೇಂದ್ರಗಳು, 100ಕ್ಕೂ ಅಧಿಕ ಚಿಪ್ ವಿನ್ಯಾಸ ಕಂಪನಿಗಳು, 18,300 ನವೋದ್ಯಮಗಳಿವೆ.
ಉದ್ದೇಶಿತ ಕ್ವಿನ್ ಸಿಟಿಯ 5,000 ಎಕರೆ ಜಾಗದಲ್ಲಿ ಆರ್ ಅಂಡ್ ಡಿ ಕೇಂದ್ರಗಳಿಗೆ ಅಗತ್ಯವಿರುವ ಸ್ಥಳ ಮೀಸಲಿಟ್ಟು, ಸೂಕ್ತ ಕಾರ್ಯಪರಿಸರ ಅಭಿವೃದ್ಧಿ ಪಡಿಸಲಿದ್ದೇವೆ.
ರಾಜ್ಯದಲ್ಲಿ ಹಲವು ತಂತ್ರಜ್ಞಾನ ಕಂಪನಿಗಳು ಎಐ, ಎಂಎಲ್ (ಮಷೀನ್ ಲರ್ನಿಂಗ್), ಕ್ವಾಂಟಂ, ರೋಬೋಟಿಕ್ಸ್, ಆಧುನಿಕ ತಯಾರಿಕೆ ಮತ್ತು ಸುಸ್ಥಿರ ನಾವೀನ್ಯತಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿವೆ, ಈ ಕಂಪನಿಗಳಿಗೆ ಬೆಂಬಲಿಸಲು ಸರ್ಕಾರ 600 ಕೋಟಿ ರೂ. ಒದಗಿಸಿದೆ.
ಪುರೋಗಾಮಿ ನೀತಿ
ಜೈವಿಕ ತಂತ್ರಜ್ಞಾನ, ಸೈಬರ್ ಸೆಕ್ಯೂರಿಟಿಯಂತಹ ಕ್ಷೇತ್ರಗಳಿಗೆ ಸಂಬಂಧಿಸಿದ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದು, ರಾಜ್ಯವು ಇಎಸ್ಡಿಎಂ, ಸಂಚಾರ ವ್ಯವಸ್ಥೆ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮ ಪರಿಪೋಷಣೆಗೆ ಪುರೋಗಾಮಿ ನೀತಿ ಹೊಂದಿದ್ದು, ಜಪಾನ್, ಅಮೆರಿಕ, ಜರ್ಮನಿ ಮತ್ತು ಸಿಂಗಪುರ ರಾಷ್ಟ್ರಗಳೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ವಿವಿಧ ದೇಶದ ಉದ್ಯಮಿಗಳು ಮುಂದೆ ಬಂದಿದ್ದಾರೆ, ಜಾಗತಿಕ ಉದ್ಯಮಿಗಳು ಘಟಕ ಆರಂಭಕ್ಕೆ ಉತ್ಸುಕರಾಗಿದ್ದು, ಬೆಂಗಳೂರು ಟೆಕ್ ಸಮಾವೇಶದಲ್ಲಿ 1,500 ದೊಡ್ದ ಕಂಪೆನಿಗಳು ಭಾಗವಹಿಸುತ್ತಿವೆ ಎಂದರು.
ಅರವತ್ತು ದೇಶಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 50 ಸಾವಿರ ಪ್ರಮುಖರು ಭಾಗವಹಿಸಲಿದ್ದಾರೆ, ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

