ಬೆಂಗಳೂರು:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳಜಗಳದಿಂದ ಅಧಃಪತನವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.
ಮುಂದಿನ ಆರೇಳು ತಿಂಗಳಲ್ಲಿ ಕರ್ನಾಟಕದ ರಾಜಕೀಯ ಚಿತ್ರಣವೇ ಬದಲಾಗಲಿದೆ, ಅದು ಯಾವ ರೀತಿ, ಹೇಗೆ ಎಂಬುದನ್ನು ಹೇಳಲು ಮತ್ತು ಊಹಿಸಲೂ ಸಾಧ್ಯವಿಲ್ಲ.
ಕಾಂಗ್ರೆಸ್ನಲ್ಲಿ ಬಹಿರಂಗ ಕಚ್ಚಾಟ
ಕಳೆದ ಎರಡು ದಿನಗಳಿಂದ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನಲ್ಲಿ ಬಹಿರಂಗ ಕಚ್ಚಾಟ ಆರಂಭಗೊಂಡಿದೆ.
ಈ ವಾತಾವರಣ ಎಲ್ಲಿಗೆ ಮುಟ್ಟುತ್ತದೆ ಎಂಬುದು ತಿಳಿಯದು, ಸರ್ಕಾರ ಅಧಃಪತನಗೊಂಡು ಮಧ್ಯಂತರ ಚುನಾವಣೆ ಎದುರಾದರೂ ಆಶ್ಚರ್ಯವಿಲ್ಲ ಎಂದರು.
ನನಗೆ ತಿಳಿದಿರುವುದನ್ನು ಇಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ, ಆದರೆ, ಇಂದಿನಿಂದಲೇ ಕಾರ್ಯಕರ್ತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ಸರ್ಕಾರದ ದುರಾಡಳಿತದ ಬಗ್ಗೆ ಮನದಟ್ಟು ಮಾಡುವ ಕೆಲಸ ಮಾಡಿ.
ಭೂಮಿಕೆ ಸಿದ್ಧ ಮಾಡಿ
ಅಲ್ಲದೆ, ಪಕ್ಷ ಸಂಘಟನೆ ಜೊತೆಗೆ ಸದಸ್ಯತ್ವ ನೋಂದಣಿ ಚುರುಕುಗೊಳಿಸಿ, ನಾವು ಮತ್ತೆ ಅಧಿಕಾರಕ್ಕೆ ಬರಲು ಇಂದಿನಿಂದಲೇ ಭೂಮಿಕೆ ಸಿದ್ಧ ಮಾಡಿ ಎಂದರು.
ಜೆಡಿಎಸ್ 25 ವರ್ಷ ರಜತ ಮಹೋತ್ಸವ ಸಂಭ್ರಮಾಚರಣೆಯ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, ಎನ್ಡಿಎ ಮೈತ್ರಿಕೂಟದಲ್ಲೇ ಮುಂಬರುವ ಚುನಾವಣೆಯನ್ನೂ ಎದುರಿಸುತ್ತೇವೆ.
ಬಿಜೆಪಿ ಜೊತೆ ಸೀಟು ಹೊಂದಾಣಿಕೆಯಲ್ಲಿ 85ರಿಂದ 90 ಸ್ಥಾನಗಳನ್ನು ಪಡೆಯುವ ವಿಶ್ವಾಸವಿದೆ, ಆದರೆ, ನಾವು ಈ ಕ್ಷೇತ್ರಗಳಲ್ಲಿ ಸ್ಪರ್ಧಿಸಲು, ನಮ್ಮ ಬಲವನ್ನು ತೋರಿಸಬೇಕಿದೆ.
ಎಲ್ಲಾ ಕ್ಷೇತ್ರ ಗೆಲ್ಲುವ ಭರವಸೆ
ಇದನ್ನು ಅರಿತು ನೀವು ಈಗಿನಿಂದಲೇ ಕ್ಷೇತ್ರದಲ್ಲಿ ಸಂಘಟನೆ ಮಾಡಿ, ನಮಗೆ ನೀಡುವ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುವ ಭರವಸೆ ಇದೆ, ಕರ್ನಾಟಕದ ರಾಜಕೀಯ ಚಿತ್ರಣ ಏನಾದರೂ ಆಗಬಹುದು, ನಾವು ಚುನಾವಣೆಗೆ ಸಿದ್ಧರಾಗಬೇಕು.
ಈಗಾಗಲೇ ನಿಖಿಲ್ ಕುಮಾರಸ್ವಾಮಿ 60ರಿಂದ 65 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಸಂಘಟನೆ ಮತ್ತು ಸದಸ್ಯತ್ವ ನೋಂದಣಿ ಕಾರ್ಯ ಮಾಡಿದ್ದಾರೆ, ಇದು ಮತ್ತಷ್ಟು ಚುರುಕುಗೊಳ್ಳಬೇಕು.
ಮುಂಬರುವ ಚುನಾವಣೆ ಬಿಹಾರ ಮಾದರಿಯಲ್ಲಿ ಆಗಲಿದೆ, ನಮ್ಮನ್ನು ನಾಲ್ಕು ಸ್ಥಾನಕ್ಕೆ ತಳ್ಳುವುದಾಗಿ ಹೇಳುವ ಕಾಂಗ್ರೆಸ್ಸನ್ನೇ ಆ ಸ್ಥಾನದಲ್ಲಿ ಕೂರಿಸೋಣ, ನಾವು ಒಗ್ಗಟ್ಟಿನಿಂದ ಶ್ರಮಿಸಿದರೆ ಎಲ್ಲವೂ ಸಾಧ್ಯವಿದೆ ಎಂದರು.

