ಅಧಿಕಾರ ಹಸ್ತಾಂತರ ಗೊಂದಲ ನಿವಾರಣೆಗೆ ನ.29ಕ್ಕೆ ಸಭೆ ನಿಗದಿ
ಬೆಂಗಳೂರು:ಅಧಿಕಾರ ಹಸ್ತಾಂತರ ಗೊಂದಲ ನಿವಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕರ್ನಾಟಕದ ಐವರು ಮುಖಂಡರಿಗೆ ಕಾಂಗ್ರೆಸ್ ವರಿಷ್ಠರು ಶನಿವಾರ ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹಿಂತಿರುಗುತ್ತಿದ್ದಂತೆ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಜೊತೆ ಸಮಾಲೋಚನೆ ನಡೆಸಿ, ನವೆಂಬರ್ 29ಕ್ಕೆ ಸಭೆ ನಿಗದಿ ಮಾಡಿದ್ದಾರೆ.
ಸಭೆ ನಡೆಸುವ ಮಾಹಿತಿ
ರಾಹುಲ್ ಜೊತೆ ಚರ್ಚಿಸಿದ ನಂತರ ಖರ್ಗೆ ಅವರು ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಸಭೆ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಧ್ಯಕ್ಷ ಸಲಹೆಯಂತೆ ಸುರ್ಜೇವಾಲ ಅವರು, ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ಐವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಇಂದಿರಾ ಭವನದಲ್ಲಿ ನಿಗದಿಯಾಗಿರುವ ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಿದ್ದಾರೆ.
ಸಿದ್ದರಾಮಯ್ಯ ಆಡಳಿತ ಎರಡೂವರೆ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಎದ್ದಿರುವ ಅಧಿಕಾರ ಹಸ್ತಾಂತರ ಪಕ್ಷ ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ನಾಯಕರುಗಳಿಗೆ ಆಹ್ವಾನ
ಇಡೀ ರಾಷ್ಟ್ರವ್ಯಾಪಿ, ದಿನವಿಡೀ ಸುದ್ದಿಯಾಗಿ ರಾಷ್ಟ್ರೀಯ ನಾಯಕರಿಗೂ ಮುಜುಗರ ತಂದಿದೆ, ಈ ಗೊಂದಲ ನಿವಾರಣೆಗೆ ವರಿಷ್ಠರು ಕೊನೆಗೂ ಸಮಯ ನಿಗದಿ ಮಾಡಿ ನಾಯಕರುಗಳಿಗೆ ಆಹ್ವಾನ ನೀಡಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನವೆಂಬರ್ 28ಕ್ಕೆ ಭಾರತಕ್ಕೆ ಹಿಂತಿರುಗಲಿದ್ದಾರೆ, ಇದನ್ನು ಗಮನದಲ್ಲಿಟ್ಟುಕೊಂಡು ದಿನಾಂಕ ನಿಗದಿ ಪಡಿಸಲಾಗಿದೆ.
ರಾಜ್ಯ ಪ್ರವಾಸದಲ್ಲಿದ್ದ ಖರ್ಗೆ ಅವರು ದೆಹಲಿಗೆ ತೆರವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರ ಹಸ್ತಾಂತರ ಗೊಂದಲ ನಿವಾರಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಮೂರ್ನಾಲ್ಕು ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿ ಚರ್ಚೆ ಮಾಡುವುದಾಗಿ ತಿಳಿಸಿದ್ದರು.
ಎರಡು ಬಣಗಳ ಜಟಾಪಟಿ
ಮುಖ್ಯಮಂತ್ರಿ ಗಾದಿಗಾಗಿ ಎರಡು ಬಣಗಳ ನಡುವೆ ಜಟಾಪಟಿ ಬೀದಿಗೆ ಬರುತ್ತಿದ್ದಂತೆ ಕಾಂಗ್ರೆಸ್ ವರಿಷ್ಠರಿಂದ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೆ ಹೊರಬಿದ್ದಿದೆ.
ಕಾಂಗ್ರೆಸ್ ಹೈಕಮಾಂಡ್ ಏಕಾಂಗಿಯಲ್ಲ, ಅದೊಂದು ತಂಡ, ಸಮಸ್ಯೆಗಳು ಎದುರಾದಾಗ ತಂಡದ ಪ್ರಮುಖರು ಕುಳಿತು ಮಾತನಾಡಿ ನಂತರ ಸಂಬಂಧಪಟ್ಟವರನ್ನು ದೆಹಲಿಗೆ ಕರೆಸಿ ಮಾತನಾಡುವುದು ವಾಡಿಕೆ.
ಇದೀಗ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸಮಸ್ಯೆ ಎದುರಾಗಿದೆ, ರಾಹುಲ್ ಗಾಂಧಿ ಸಮ್ಮುಖದಲ್ಲೇ ಉಭಯ ನಾಯಕರನ್ನು ಕರೆಸಿ ಚರ್ಚಿಸಿ ಹೈಕಮಾಂಡ್ ತನ್ನ ನಿರ್ಧಾರ ಪ್ರಕಟಿಸಲಿದೆ.
ರಾಹುಲ್ ಉಪಸ್ಥಿತಿಯಲ್ಲಿ ತೀರ್ಮಾನ
ಇದಕ್ಕೂ ಮುನ್ನ ನಾನು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಜೊತೆಯೂ ಚರ್ಚೆ ಮಾಡುತ್ತೇನೆ, ಆ ನಂತರ ರಾಹುಲ್ ಉಪಸ್ಥಿತಿಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ, ಇವೆಲ್ಲವೂ ಇನ್ನು ಎರಡು-ಮೂರು ದಿನಗಳಲ್ಲಿ ಮುಗಿಯಲಿದೆ ಎಂದಿದ್ದರು.
ಅಧಿಕಾರ ಹಸ್ತಾಂತರ ಕುರಿತಂತೆ ಕಳೆದ ಒಂದು ವಾರದಿಂದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕುರ್ಚಿಗಾಗಿ ಹಗ್ಗ ಜಗ್ಗಾಟ ನಡೆದಿದೆ.
ಶಿವಕುಮಾರ್ ಪರ ಕೆಲವು ಶಾಸಕರು ದೆಹಲಿ ಪ್ರವಾಸ ಕೈಗೊಂಡು ವರಿಷ್ಠರನ್ನು ಭೇಟಿ ಮಾಡಿ ಈ ಹಿಂದೆ ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರ ಮಾಡಿಸಿ ಎಂದು ಮನವಿ ಮಾಡಿದ್ದಾರೆ.
ವರಿಷ್ಠರೊಂದಿಗೆ ಸಮಾಲೋಚನೆ
ಶಾಸಕರ ದಂಡು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಸಮಾಲೋಚನೆ ಮಾಡುವ ಸಮಯದಲ್ಲೇ ಎಐಸಿಸಿ ಅಧ್ಯಕ್ಷ ಖರ್ಗೆ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಹಿಂತಿರುಗಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪ್ರತ್ಯೇಕವಾಗಿ ಖರ್ಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಖರ್ಗೆ ರಾಜ್ಯದಲ್ಲಿ ಕೆಲವು ನಾಯಕರ ಜೊತೆ ಸಮಾಲೋಚನೆ ಮಾಡುವ ಸಂದರ್ಭದಲ್ಲೇ ರಾಹುಲ್ ಗಾಂಧಿ ಕರ್ನಾಟಕ ಕಾಂಗ್ರೆಸ್ನ ನಿಷ್ಠಾವಂತ ಸಚಿವರು ಮತ್ತು ಮುಖಂಡರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡೆಯುತ್ತಿದ್ದಂತೆ ಶಿವಕುಮಾರ್ ಬಹಿರಂಗವಾಗೇ, ಕೊಟ್ಟ ಭರವಸೆ ಈಡೇರಿಸಬೇಕೆಂಬ ಹೇಳಿಕೆ ಮೂಲಕ, ಸಿದ್ದರಾಮಯ್ಯ ಅಧಿಕಾರಿ ಬಿಡಿ ಎಂಬುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.

