ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಸಹೋದರರಿದ್ದಂತೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೆ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.
ವಿಧಾನಸೌಧ ಕಟ್ಟಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿ ದಿನವಾದ ಇಂದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ, ಮಾಧ್ಯಮದವರ ಕಾಟಕ್ಕೆ ಉಪಹಾರ ಸಭೆ ನಡೆಸಬೇಕಾಯಿತು ಎಂದರು.
ನಮ್ಮಲ್ಲಿ ಗುಂಪುಗಾರಿಕೆ ಇಲ್ಲ
ಹುಟ್ಟವಾಗ ಒಬ್ಬರೇ, ಸಾಯುವಾಗಲೂ ಒಬ್ಬರೇ, ಆದರೆ, ಕಾಂಗ್ರೆಸ್ ಒಂದು ಸಂಘಟನೆ, ನಾನು 140 ಶಾಸಕರ ಜೊತೆಯೂ ಇದ್ದೇನೆ, ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ.
ನೀವೆಲ್ಲಾ ಏನೇನೋ ತೋರಿಸುತ್ತೀರಿ, ಬರೀತೀರಿ, ಸಿದ್ದರಾಮಯ್ಯನವರದು ಒಂದು ಗುಂಪು, ಶಿವಕುಮಾರ್ ಅವರದು ಒಂದು ಗುಂಪು ಎನ್ನುತ್ತೀರಿ, ಅದ್ಯಾವುದೂ ಇಲ್ಲ, ನಾವೆಲ್ಲಾ ಒಟ್ಟಾಗಿದ್ದೇವೆ ಎಂಬುದಕ್ಕೇ ಉಪಹಾರ ಸಭೆ ಮಾಡಿದ್ದು.
ಕೆಂಪೇಗೌಡ ಬೆಂಗಳೂರನ್ನು, ಹನುಮಂತಯ್ಯ ವಿಧಾನಸೌಧ, ಎಸ್.ಎಂ.ಕೃಷ್ಣ ವಿಕಾಸಸೌಧ ಕಟ್ಟಿದ್ದಾರೆ, ಅಧಿಕಾರ ಸಿಕ್ಕಾಗ ಈ ರೀತಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು, ನಾವು ಬ್ರದರ್ಸ್ ಇಂತಹ ಕೆಲಸ ಮಾಡಿ ತೋರಿಸುತ್ತೀವಿ ಎಂದರು.
ಗಾಂಧಿ ಕುಟುಂಬದ ಆಸ್ತಿಯಲ್ಲ
ನ್ಯಾಷನಲ್ ಹೆರಾಲ್ಡ್ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಆಸ್ತಿಯಲ್ಲ, ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದ ಕಾರಣಕ್ಕೆ ಈ ಸಂಸ್ಥೆಯ ಷೇರುಗಳ ಪಾಲಕರಾಗಿದ್ದರು, ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರಾಜಕೀಯ ದ್ವೇಷಕ್ಕಾಗಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ, ಇದು ಅನ್ಯಾಯ, ಯಾರಿಗೇ ಆಗಲಿ ಕಿರುಕುಳ ನೀಡುವುದಕ್ಕೂ ಒಂದು ಮಿತಿ ಇದೆ.
ನಾನು ಹಾಗೂ ಮುಖ್ಯಮಂತ್ರಿ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾಗಿದ್ದೇವೆ, ಅಧ್ಯಕ್ಷರಾದವರ ಹೆಸರಿನಲ್ಲಿ ಕನಿಷ್ಠ 1-2 ಷೇರುಗಳು ಇರುತ್ತವೆ, ನಮ್ಮ ಅಧಿಕಾರ ಮುಗಿದ ನಂತರ ಈ ಷೇರುಗಳು ವರ್ಗಾವಣೆಯಾಗುತ್ತದೆ, ಅದೇ ರೀತಿ ನಮ್ಮ ನಾಯಕರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾರಣ, ಜವಹಾರ್ಲಾಲ್ ನೆಹರೂ ಕಾಲದಿಂದ ನಡೆದುಕೊಂಡು ಬಂದಿರುವ ಪ್ರತೀತಿಯಂತೆ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಜವಾಬ್ದಾರಿ ಹೊತ್ತಿರುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದ ಆಸ್ತಿ
ಯಂಗ್ ಇಂಡಿಯಾ ಆಗಲಿ, ನ್ಯಾಷನಲ್ ಹೆರಾಲ್ಡ್ ಆಗಲಿ, ನಮ್ಮ ವೈಯಕ್ತಿಕ ಆಸ್ತಿಯಲ್ಲ ಎಂಬುದಾಗಿ ಈಗಾಗಲೇ ಘೋಷಿಸಿದ್ದಾರೆ, ಇದು ಕಾಂಗ್ರೆಸ್ ಪಕ್ಷದ ಆಸ್ತಿ, ಅದರ ಪಾಲಕರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಆಗಿದ್ದಾರೆ.
ಇದರಲ್ಲಿ ಅನೇಕ ಸದಸ್ಯರುಗಳೂ ಇದ್ದಾರೆ, ಮೊರಾರ್ಜಿ, ಅಹ್ಮದ್ ಪಟೇಲ್ ಕಾಲದಲ್ಲಿ ಕಾಂಗ್ರೆಸ್ ಹಿತಕ್ಕಾಗಿ ಕೆಲವು ನಿರ್ಧಾರ ಕೈಗೊಳ್ಳಲಾಗಿತ್ತು, ಸೀತಾರಾಂ ಕೇಸರಿ ಕಾಲದಲ್ಲಿ ಪಕ್ಷ ಸಂಕಷ್ಟದ ಸಮಯದಲ್ಲಿದ್ದಾಗ, ನಾವುಗಳು ಸೋನಿಯಾ ಗಾಂಧಿ ಅವರೇ ಜವಾಬ್ದಾರಿ ವಹಿಸಿಕೊಳ್ಳುವಂತೆ ಬೇಡಿಕೊಂಡೆವು.
ಈಗ ರಾಜಕೀಯವಾಗಿ ಕಿರುಕುಳ ನೀಡಲಾಗುತ್ತಿದೆ, ಇತಿಹಾಸ ಮರುಕಳಿಸಲಿದೆ, ರಾಹುಲ್ ಗಾಂಧಿಯನ್ನು ಜೈಲಿಗೆ ಹಾಕಿದರೂ ತಲೆಕೆಡಿಸಿಕೊಳ್ಳುವುದಿಲ್ಲ, ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ ಸರಿಯಲ್ಲ.
ಚುನಾವಣೆಯಲ್ಲಿ ಹೋರಾಡೋಣ
ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದಾಗಿ ಕೇಂದ್ರ ಸರ್ಕಾರಕ್ಕೆ ಹೇಳಲು ಬಯಸುತ್ತೇನೆ, ಕೇಂದ್ರದ ನೈತಿಕತೆಯನ್ನಷ್ಟೇ ಕುಗ್ಗಿಸಲಿದೆ, ನೇರಾನೇರವಾಗಿ ಜನರ ಮಧ್ಯೆ ರಾಜಕೀಯ ಮಾಡೋಣ, ಚುನಾವಣೆಯಲ್ಲಿ ಹೋರಾಡೋಣ, ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿ ಕಿರುಕುಳ ನೀಡುವುದು ಸರಿಯಲ್ಲ ಎಂದರು.
ಸಂಸತ್ ಅಧಿವೇಶನ ಆರಂಭವಾಗಿದ್ದು, ರಾಜ್ಯದ ಹಿತರಕ್ಷಣೆ ವಿಚಾರವಾಗಿ ಸಂಸದರಿಗೆ ಕೆಲವು ಜವಾಬ್ದಾರಿಗಳ ಬಗ್ಗೆ ಹೇಳಬೇಕಿದೆ.
ಎಕ್ಸ್ ಖಾತೆಯಲ್ಲಿ ಬೆಂಗಳೂರಿನಲ್ಲಿ ಅತ್ಯಂತ ಕೆಟ್ಟ ಟ್ರಾಫಿಕ್ ಜಾಮ್ ಎಂದು ಬರೆದಿರುವ ಉತ್ತರ ಪ್ರದೇಶ ಸಂಸದ ರಾಜೀವ್ ರಾಯ್ ನನ್ನನ್ನು ದೆಹಲಿಯಲ್ಲಿ ಭೇಟಿ ಮಾಡಲಿ, ಅಲ್ಲಿನ ಟ್ರಾಫಿಕ್ ಸಮಸ್ಯೆ ಏನು ಎಂಬುದನ್ನು ಅವರಿಗೆ ತೋರಿಸುತ್ತೇನೆ ಎಂದರು.

