ನವದೆಹಲಿ:ಪಕ್ಷ ಸಂಘಟನೆ ಮಾಡುವಲ್ಲಿ ವಿಫಲವಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಹೊಸಬರನ್ನು ನೇಮಿಸುವಂತೆ ವರಿಷ್ಠರಿಗೆ ಬಿಜೆಪಿಯ ರಾಜ್ಯ ಮುಖಂಡರ ಒಂದು ಬಣ ಒತ್ತಾಯ ಮಾಡಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ನಾಯಕತ್ವದಲ್ಲಿ ಪಕ್ಷದ ಕೆಲವು ಮುಖಂಡರು ಮತ್ತು ಶಾಸಕರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ವಿಜಯೇಂದ್ರ ಅವರನ್ನು ಯಾವ ಕಾರಣಕ್ಕೆ ಬದಲಾವಣೆ ಮಾಡಬೇಕೆಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ವರಿಷ್ಠರ ಮನವೊಲಿಕೆ ಯತ್ನ
ಪಕ್ಷದ ಪ್ರಮುಖ ನಾಯಕರ ಭೇಟಿ ನಂತರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ, ಕಳೆದ ಒಂದು ವರ್ಷದಿಂದ ನಾವು ವಿಜಯೇಂದ್ರ ಬದಲಾವಣೆಗೆ ವರಿಷ್ಠರ ಮನವೊಲಿಕೆ ಯತ್ನದಲ್ಲಿದ್ದೇವೆ.
ರಾಜ್ಯಾಧ್ಯಕ್ಷರಾದ ನಂತರ ವಿಜಯೇಂದ್ರ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ, ಅವರು ಅಧ್ಯಕ್ಷರಾಗಿ ಸಂಘಟನೆ ಮಾಡುವಲ್ಲಿ ಯಾವ ರೀತಿ ವಿಫಲರಾಗಿದ್ದಾರೆ ಎಂಬುದನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ.
ರಾಜ್ಯಾಧ್ಯಕ್ಷರ ವಿರುದ್ಧದ ದೂರುಗಳ ಬಗ್ಗೆ ನಾವು ಬಹಿರಂಗ ಹೇಳಿಕೆ ನೀಡಲು ಸಾಧ್ಯವಿಲ್ಲ, ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡುವಲ್ಲಿ ರಾಜ್ಯ ಬಿಜೆಪಿ ಎಡವಿದೆ.
ರಾಜ್ಯದ ಜನತೆ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ, ನಾವು ಪ್ರತಿಪಕ್ಷವಾಗಿ ಯಾವ ಸಮಸ್ಯೆ ವಿರುದ್ಧವೂ ಹೋರಾಟ ಮಾಡದೆ, ಮೌನವಾಗಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಡುತ್ತಿದೆ.
ಸಾಮೂಹಿಕ ನಾಯಕತ್ವ
ಮುಂಬರುವ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕು, ಆ ಸ್ಥಾನಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸೋಣ ಎಂದಿದ್ದಾರೆ.
ಸಂಘಟನೆಯನ್ನು ಭೂತ್ಮಟ್ಟದಿಂದ ರಾಜ್ಯಮಟ್ಟದವರೆಗೆ ಬಲಪಡಿಸಬೇಕು ಎಂಬುದಾಗಿ ಅಮಿತ್ ಷಾ ಭೇಟಿ ಸಂದರ್ಭದಲ್ಲಿ ನಮಗೆ ತಿಳಿಸಿದ್ದಾರೆ.
ಮಂಡಲ ಮತ್ತು ಭೂತ್ ಮುಖ್ಯವೇ ಹೊರತು ರಾಷ್ಟ್ರ ರಾಜಕಾರಣವಲ್ಲ, ಪಕ್ಷವು ಇದೇ ತತ್ವವನ್ನು ಅನುಸರಿಸಿಕೊಂಡು ನಡೆಯುತ್ತಿದೆ, ಅದನ್ನು ರಾಜ್ಯಮಟ್ಟದಲ್ಲಿ ಮತ್ತಷ್ಟು ಬಲಪಡಿಸಿ ಎಂಬ ಸಲಹೆ ನೀಡಿದ್ದಾರೆ ಎಂದರು.

