ಬೆಂಗಳೂರು:ಮಾಜಿ ಸಚಿವ ರಾಜಣ್ಣ ಸೇರಿದಂತೆ ಪಕ್ಷದ ಕೆಲವು ಶಾಸಕರು ಬಿಜೆಪಿ ಸೇರಲು ಮುಂದಾಗಿರುವುದನ್ನು ತಡೆಯಲು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹರಸಾಹಸ ನಡೆಸಿದ್ದಾರೆ.
ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ಅವರನ್ನು ತರುವುದಕ್ಕೆ ಸಿದ್ದರಾಮಯ್ಯ ಆಪ್ತರಿಗೆ ಸ್ವಲ್ಪವೂ ಇಷ್ಟವಿಲ್ಲ.
ದೆಹಲಿ ವರಿಷ್ಠರು ಅಧಿಕಾರ ಹಸ್ತಾಂತರ ನಿರ್ಧಾರ ಕೈಗೊಂಡಿದ್ದೇ ಆದಲ್ಲಿ, ಕಾಂಗ್ರೆಸ್ನಿಂದಲೇ ಹೊರಹೋಗಲು ಒಂದು ಗುಂಪು ಸಜ್ಜಾಗಿದೆ.
ಬಿಜೆಪಿ ಸೇರಲು ಆಸಕ್ತಿ
ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ರಾಜಣ್ಣ ಪುತ್ರ, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಕಳೆದ ವಾರ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ ಹಾಗೂ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಜೋಷಿ ಬಳಿ ಚರ್ಚೆ ವೇಳೆ ರಾಜೇಂದ್ರ, ಕರ್ನಾಟಕ ಕಾಂಗ್ರೆಸ್ನಲ್ಲಿನ ಬೆಳವಣಿಗೆ ಬಗ್ಗೆ ಪೂರ್ಣ ಮಾಹಿತಿ ನೀಡಿ ನಮ್ಮ ತಂದೆ ಸೇರಿದಂತೆ ಕೆಲವರು ಪಕ್ಷ ತೊರೆದು ಬಿಜೆಪಿ ಸೇರಲು ಆಸಕ್ತರಿದ್ದಾರೆ.
ಅದರಲ್ಲೂ ವಾಲ್ಮೀಕಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಉಭಯ ಸದನಗಳ ಸದಸ್ಯರು ಪಕ್ಷದಿಂದ ಹೊರಬರುವ ತೀರ್ಮಾನಕ್ಕೆ ಬಂದಿದ್ದಾರೆ.
ಮನವೊಲಿಕೆ ಪ್ರಯತ್ನ
ನೀವು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ನಾಯಕರ ಮನವೊಲಿಸುವ ಪ್ರಯತ್ನದಲ್ಲಿ ಮಾಡಿದ್ದಾರೆ ಎನ್ನಲಾಗಿದೆ.
ಈ ಮಾಹಿತಿ ಅರಿತ ಶಿವಕುಮಾರ್ ಪಕ್ಷ ಒಡೆಯುವುದನ್ನು ತಪ್ಪಿಸಲು ಮತ್ತು ತಮಗೆ ದಕ್ಕಬೇಕಾದ ಅಧಿಕಾರ ಪಡೆಯಲು ಯಾವುದೇ ಅಡ್ಡಿ, ಆತಂಕ ಎದುರಾಗಬಾರದೆಂಬ ಕಾರಣಕ್ಕೆ ರಾಜಣ್ಣ ಮನವೊಲಿಕೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಳೆದ ಶುಕ್ರವಾರ ನಗರದ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಅತಿಥಿ ಗೃಹದಲ್ಲಿ ರಾಜಣ್ಣ ಅವರನ್ನು ಭೇಟಿ ಮಾಡಿ ಶಿವಕುಮಾರ್ ಮುಖಾಮುಖಿ ಚರ್ಚೆ ಮಾಡಿದ್ದರಾದರೂ ಅಂದು ಅವರ ಪ್ರಯತ್ನ ಯಶಸ್ವಿಯಾಗಿರಲಿಲ್ಲ.
ಅತಿಥಿ ಗೃಹದಲ್ಲಿ ಭೇಟಿ
ನಿನ್ನೆ ಮತ್ತೆ ಭಾನುವಾರ ರಾತ್ರಿ ರಾಜಣ್ಣ ಆಪ್ತರೊಬ್ಬರನ್ನು ಮುಂದಿಟ್ಟುಕೊಂಡು ಹೈಗ್ರೌಂಡ್ಸ್ ಪ್ರದೇಶದ ಖಾಸಗಿ ಅತಿಥಿ ಗೃಹದಲ್ಲಿ ಭೇಟಿ ಮಾಡಿ, ಸಮಾಲೋಚನೆ ನಡೆಸಿ ಮನವೊಲಿಕೆ ಪ್ರಯತ್ನ ನಡೆಸಿದರು, ರಾಜಣ್ಣ ಆಪ್ತ ಉದ್ಯಮಿ ಅಶೋಕ್ ಈ ಭೇಟಿ ವ್ಯವಸ್ಥೆ ಮಾಡಿದ್ದರು.
ಶಿವಕುಮಾರ್ ತಮಗೆ ದಕ್ಕಬೇಕಾದ ಅಧಿಕಾರ ಸುಲಲಿತವಾಗಿ ನಡೆಯಬೇಕು, ಯಾವುದೇ ಅಡಚಣೆ ಆಗಬಾರದೆಂಬ ಉದ್ದೇಶದಿಂದ ಸಿದ್ದರಾಮಯ್ಯ ಆಪ್ತ ಬಳಗದಲ್ಲಿರುವ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್ ಹಾಗೂ ಬೈರತಿ ಸುರೇಶ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವರಿಷ್ಠರಿಂದ ಬಂದ ಸಂದೇಶದ ಮೇರೆಗೆ ಶಿವಕುಮಾರ್ ಅವರು ರಾಜಣ್ಣ ಮತ್ತು ಸಂಗಡಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮತ್ತು ಪಕ್ಷದಲ್ಲೇ ಉಳಿಸಿಕೊಳ್ಳಲು ಯತ್ನಿಸಿದ್ದಾರೆ.

