ಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟ ಪುನರ್ ರಚನೆಗೆ ಅವಕಾಶ ನೀಡದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ’ಚಿಂತಿಸಬೇಡಿ’ ಎಂಬ ಅಭಯ ನೀಡಿದ್ದಾರೆ.
ರಾಹುಲ್ ಅವರಿಂದ ಈ ಸಂದೇಶ ದೊರೆಯುತ್ತಿದ್ದಂತೆ ಶಿವಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ, ಒಂದಲ್ಲಾ ಎರಡು ಬಾರಿ ಟ್ವೀಟ್ ಮಾಡಿ, ’ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲ ಆಗುವುದಿಲ್ಲ’ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ನೆನಪಿಸಿದ ಅಧಿಕಾರ ಹಂಚಿಕೆ
ವಯನಾಡ್ ಪ್ರವಾಸ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ, ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಶಿವಕುಮಾರ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರಿಗೆ ನೆನಪಿಸಿದರು.
ವಯನಾಡಿಗೆ ತೆರಳುವ ಮುನ್ನ ಹಾಗೂ ದೆಹಲಿಗೆ ಹಿಂತಿರುಗುವ ಸಂದರ್ಭದಲ್ಲೂ ಶಿವಕುಮಾರ್ ತಮಗೆ ಸಿಕ್ಕ ಅಲ್ಪ ಸಮಯದಲ್ಲೇ, ತಾವು ಏನು ಹೇಳಬೇಕೋ ಅದನ್ನು ರಾಹುಲ್ ಕಿವಿಗೆ ಹಾಕಿದರು.
ವಿಷಯ ಕುರಿತಂತೆ ಚರ್ಚಿಸಲು ಕಳೆದ ಎರಡು ತಿಂಗಳಿಂದ ಭೇಟಿಗಾಗಿ ಹಾತೊರೆಯುತ್ತಿದ್ದೆ, ಆದರೆ, ಸಾಧ್ಯವಾಗಿರಲಿಲ್ಲ.

ಒಪ್ಪಂದದಂತೆ ಬಿಟ್ಟುಕೊಡಬೇಕಿತ್ತು
ಕರ್ನಾಟಕದಲ್ಲಿ ಪಕ್ಷ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ನಡೆದ ಒಪ್ಪಂದದಂತೆ ಸಿದ್ದರಾಮಯ್ಯ ನವೆಂಬರ್ 20ಕ್ಕೆ ಅಧಿಕಾರ ಬಿಟ್ಟುಕೊಡಬೇಕಿತ್ತು.
ದೇವರಾಜ ಅರಸು ಆಡಳಿತ ದಾಖಲೆ ಮುರಿದ ನಂತರವೂ ತಮಗೆ ಅವಕಾಶ ನೀಡದೆ, ಅಧಿಕಾರದಲ್ಲಿ ಮುಂದುವರೆಯುವ ಹಾಗೂ ಸಂಪುಟ ಪುನರ್ ರಚನೆ ಪ್ರಯತ್ನಕ್ಕೂ ಮುಂದಾಗಿದ್ದಾರೆ.
ಇದಕ್ಕೆ ಅವಕಾಶ ನೀಡದೆ ತಮಗೆ ನೀಡಿದ ವಾಗ್ದಾನದಂತೆ ನಡೆದುಕೊಳ್ಳಲು ತಿಳಿಹೇಳಬೇಕು ಎನ್ನುತ್ತಿದ್ದಂತೆ, ರಾಹುಲ್, ’ನೀವೇನೂ ಚಿಂತೆ ಮಾಡಬೇಡಿ, ನಿಮ್ಮನ್ನು ಶೀಘ್ರವೇ ದೆಹಲಿಗೆ ಕರೆಸಿಕೊಳ್ಳುತ್ತೇನೆ’ ಎಂಬ ಭರವಸೆ ನೀಡಿದ್ದಾರೆ.
ಮಾರ್ಮಿಕ ಸಂದೇಶ
ಈ ಭರವಸೆ ಹಿನ್ನೆಲೆಯಲ್ಲಿ ಶಿವಕುಮಾರ್ ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾರ್ಮಿಕ ಸಂದೇಶ ಹಾಕಿದ್ದಾರೆ.
ಶಿವಕುಮಾರ್ ಅವರಿಗೂ ಮುನ್ನ ಮುಖ್ಯಮಂತ್ರಿ ಜೊತೆಗಿನ ಸಮಾಲೋಚನೆ ವೇಳೆ, ಸಂಪುಟ ಪುನರ್ ರಚನೆಗೆ ಅವಕಾಶ ನೀಡಬೇಕೆಂಬ ಪ್ರಸ್ತಾವನೆಯನ್ನು ರಾಹುಲ್ ಮುಂದಿಟ್ಟಿದ್ದಲ್ಲದೆ, ಪಕ್ಷದ ಯಾವ ಶಾಸಕರಿಗೂ ಅಧಿಕಾರ ಹಸ್ತಾಂತರದಲ್ಲಿ ಆಸಕ್ತಿ ಇಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಮಾತು ಆಲಿಸಿದ ರಾಹುಲ್, ಸಂಪುಟ ಪುನರ್ ರಚನೆ ಕುರಿತು ತಕ್ಷಣದ ನಿರ್ಧಾರ ಬೇಡ, ಸ್ವಲ್ಪ ಸಮಯ ಕಾಯಿರಿ, ದೆಹಲಿಯಲ್ಲಿ ಚರ್ಚೆ ಮಾಡೋಣ ಎಂದು ತಿಳಿಸಿದ್ದಾರೆ.
ಇಬ್ಬರೊಂದಿಗೂ ಪ್ರತ್ಯೇಕ ಚರ್ಚೆ
ಇಬ್ಬರೊಂದಿಗೂ ಪ್ರತ್ಯೇಕವಾಗಿ ಮಾತನಾಡಿದ ನಂತರ ರಾಹುಲ್ ಒಟ್ಟಿಗೆ ಕರೆದು, ದೆಹಲಿಗೆ ಆಹ್ವಾನಿಸುತ್ತೇನೆ, ಅಲ್ಲಿ ಮಾತನಾಡೋಣ ಎಂದು ವಿಷಯಕ್ಕೆ ತೆರೆ ಎಳೆದು ಪ್ರಯಾಣ ಬೆಳೆಸಿದರು.
ರಾಹುಲ್ ಭರವಸೆಯಿಂದ ಪುಳಕಿತರಾದಂತಿರುವ ಶಿವಕುಮಾರ್ ಇಂದು ನಡೆದ ವಿಶೇಷ ಸಂಪುಟ ಸಭೆಗೂ ಮುನ್ನ ಕೆಲವು ಸಚಿವರು ಮತ್ತು ಶಾಸಕರನ್ನು ಸಂಪರ್ಕಿಸಿ, ಮೈಸೂರು ವಿಮಾನ ನಿಲ್ದಾಣದಲ್ಲಿನ ನಡೆದ ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಸೂಕ್ಷ್ಮವಾಗಿ ಮಾಹಿತಿ ನೀಡಿದರು.

