ಬೆಂಗಳೂರು:ಕರ್ನಾಟಕ ಕಾಂಗ್ರೆಸ್ನಲ್ಲಿನ ಅಧಿಕಾರ ಹಂಚಿಕೆ ಗೊಂದಲ ನಿವಾರಿಸಲು ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಕೊನೆಗೂ ಸಮಯ ನಿಗದಿಪಡಿಸಿದ್ದಾರೆ.
ಫೆಬ್ರವರಿ 8ರಂದು ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳಿಗೆ ಆಹ್ವಾನ ನೀಡಿದ್ದಾರೆ.
ವಾಟ್ಸ್ ಆಪ್ ಸಂದೇಶ
ಉಭಯ ನಾಯಕರಿಗೂ ವಾಟ್ಸ್ ಆಪ್ ಸಂದೇಶ ಕಳುಹಿಸಿ, ದೆಹಲಿಯ ಇಂದಿರಾ ಭವನಕ್ಕೆ ಬರುವಂತೆ ಸೂಚಿಸಿದ್ದಾರೆ.
ರಾಹುಲ್ ಆಹ್ವಾನ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ನಲ್ಲಿನ ವೀರಶೈವ/ಲಿಂಗಾಯತ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದ ಸಚಿವರು, ಶಾಸಕರು ದಿಢೀರ್ ಪ್ರತ್ಯೇಕ ಸಭೆ ಸೇರಿ ಹಠಾತ್ ಬೆಳವಣಿಗೆ ಕುರಿತು ಚರ್ಚಿಸಿದ್ದಾರೆ.
ಕಳೆದ ರಾತ್ರಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಸಚಿವರು, ಶಾಸಕರು ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿ, ಸಿದ್ದರಾಮಯ್ಯ ಬದಲಾವಣೆ ಮಾಡುವುದೇ ಆದರೆ, ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬೇಕೆಂಬ ನಿರ್ಣಯ ಕೈಗೊಂಡಿದ್ದು, ವರಿಷ್ಠರಿಗೆ ತಿಳಿಸುವ ತೀರ್ಮಾನ ಕೈಗೊಂಡಿದ್ದಾರೆ.
ಶಾಸಕರ ಸಭೆ
ಸಭೆಯಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಶಿವರಾಜ್ ತಂಗಡಗಿ, ಮಾಜಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.
ಸಿದ್ದರಾಮಯ್ಯ ಬದಲಿಸಿದರೆ, ನಮ್ಮ ಸಮುದಾಯಕ್ಕೆ ಅವಕಾಶ ನೀಡಬೇಕು, ಜೊತೆಗೆ ಎಸ್ಟಿಪಿಎಸ್/ಟಿಎಸ್ಪಿ ಅನುದಾನ ಬಳಕೆ, ಮುಂಗಡಪತ್ರದಲ್ಲಿ ದಲಿತರಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲು ಸಭೆ ನಿರ್ಣಯಿಸಿತು.
ಸೋಮಾವಾರ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ನ ವೀರಶೈವ/ಲಿಂಗಾಯತ ಸಮುದಾಯಕ್ಕೆ ಸೇರಿದ 28 ಶಾಸಕರು ಸಭೆ ಸೇರಿ, ಮುಂದೆ ಆಗಲಿರುವ ರಾಜಕೀಯ ಬೆಳವಣಿಗೆ ಕುರಿತು ಸುದೀರ್ಘ ಸಮಾಲೋಚನೆ ನಡೆಸಿ, ಹೊಸ ಸರ್ಕಾರ ರಚನೆ ಅಥವಾ ಸಂಪುಟ ಪುನರ್ ರಚನೆ ವೇಳೆ ತಮ್ಮ ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡಬೇಕೆಂಬ ನಿರ್ಣಯ ಮಾಡಿ ವರಿಷ್ಠರಿಗೆ ಕಳುಹಿಸಲು ತೀರ್ಮಾನಿಸಿದರು.
ಒಗ್ಗಟ್ಟಿನ ಪ್ರದರ್ಶನ
ಸಮುದಾಯದ ದೃಷ್ಟಿಯಿಂದ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದೇವೆಯೇ ಹೊರತು ಯಾವುದೇ ನಾಯಕರ ಪರ ಅಥವಾ ವಿರೋಧಕ್ಕಲ್ಲ.
ಸಿದ್ದರಾಮಯ್ಯ ಅವರ ಬದಲಾವಣೆ ಮಾಡುವುದೇ ಆದರೆ, ನಮ್ಮ ಸಮುದಾಯ ಆ ಸ್ಥಾನ ಪಡೆಯಲು ಮುಂದಾಗುವುದಿಲ್ಲ, ಆದರೆ, ನಮಗೆ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು.
ಅಲ್ಲದೆ, ಸಮುದಾಯದ ಅಭಿವೃದ್ಧಿಗೆ ಮುಂಗಡಪತ್ರದಲ್ಲಿ ಹೊಸ ಕಾರ್ಯಕ್ರಮ ರೂಪಿಸಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.
ಆಪ್ತ ಶಾಸಕರಿಗೆ ಮಾಹಿತಿ
ದೆಹಲಿಯಲ್ಲಿ ಭಾನುವಾರ ನಡೆಯಲಿರುವ ಸಭೆಯ ಮಾಹಿತಿಯನ್ನು ಶಿವಕುಮಾರ್ ಅವರೇ ತಮ್ಮ ಆಪ್ತ ಶಾಸಕರಿಗೆ ಖಚಿತ ಪಡಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಆಪ್ತ ಶಾಸಕರೊಂದಿಗಿನ ಸಮಾಲೋಚನೆ ವೇಳೆ ಕೆಲವರು, ಅಧಿಕಾರ ಪಡೆಯುವಲ್ಲಿ ಕಠಿಣ ನಿಲುವು ಕೈಗೊಳ್ಳುವಂತೆ ಶಿವಕುಮಾರ್ ಅವರನ್ನು ಒತ್ತಾಯಿಸಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸಭೆ ಕರೆಯುವಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೆ, ಇದಕ್ಕೆ ಸ್ಪಂದಿಸಿದ ಅವರು ವಾಟ್ಸ್ ಆಪ್ ಮೂಲಕವೇ ಫೆಬ್ರವರಿ 8ರಂದು ಸಭೆ ನಿಗದಿಪಡಿಸಿರುವುದಾಗಿ ತಿಳಿಸಿದ್ದಾರೆ.
ಸಭೆ ನಂತರ ತೀರ್ಮಾನ
ಭಾನುವಾರದ ಸಭೆ ನಂತರ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂಬುದಾಗಿ ಆಪ್ತರಿಗೆ ಶಿವಕುಮಾರ್ ಹೇಳಿದ್ದಾರೆ.
ಉನ್ನತ ಮೂಲಗಳ ಪ್ರಕಾರ ಮುಂದಿನ ಎಂಟು-ಹತ್ತು ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್ನಲ್ಲಿನ ಗೊಂದಲ ಪರಿಹಾರವಾಗಲಿದೆ.

