ಬೆಂಗಳೂರು:ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡುವಂತೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನೇರವಾಗಿ ಒತ್ತಾಯಿಸಿದ್ದಾರೆ.
ಶಿವಕುಮಾರ್ ನಿನ್ನೆ ತಡರಾತ್ರಿ ಕೇರಳದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಒಂದರಲ್ಲಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಬೆನ್ನಲ್ಲೇ ಹುಸೇನ್ ಇಂದು ವಿಧಾನಸೌಧದ ಅಂಗಳದಲ್ಲೇ ಈ ಬಾಂಬ್ ಸಿಡಿಸಿದ್ದಾರೆ.
80 ರಿಂದ 89 ಶಾಸಕರ ಬೆಂಬಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಅವರಿಗೆ 80 ರಿಂದ89 ಶಾಸಕರ ಬೆಂಬಲವಿದೆ, ಪಕ್ಷದ ಬಹುಪಾಲು ಜನಪ್ರತಿನಿಧಿಗಳ ಒಲವು ಇರುವಾಗ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ನಡೆದುಕೊಳ್ಳಬೇಕು.
ಎರಡೂವರೆ ವರ್ಷ ಆಡಳಿತ ನಡೆಸಿದ ಮೇಲೆ ಸಾಕಷ್ಟು ಶಾಸಕರು ಒಬ್ಬ ನಿಷ್ಠಾವಂತ ಸಂಘಟನಕಾರ ವ್ಯಕ್ತಿ ಆಡಳಿತಕ್ಕೆ ಬರಬೇಕು ಎಂಬುದಕ್ಕೆ ಶಿವಕುಮಾರ್ ಪರ ನಿಂತಿದ್ದೇವೆ.
ಅವರ ಹೋರಾಟ, ಶ್ರಮಕ್ಕೆ ಬೆಲೆ ಸಿಗಬೇಕು ಎಂಬ ಉದ್ದೇಶದಿಂದಲೇ ನಾವು ಅವರನ್ನು ಬೆಂಬಲಿಸಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೋರಾಟ ಮಾಡುತ್ತಿದ್ದೇವೆ.
ಸಿದ್ದರಾಮಯ್ಯ ಆಡಳಿತ ಸಾಕು
ದೇವರಾಜ ಅರಸ್ ಬಳಿಕ ದಲಿತರು, ಶೋಷಿತರ ಪರವಾಗಿ ಸಿದ್ದರಾಮಯ್ಯ ಅಳಿಲು ಸೇವೆ ಮಾಡಿದ್ದಾರೆ, ಇಷ್ಟು ವರ್ಷ ಅವರು ಆಡಳಿತ ಮಾಡಿರುವುದು ಸಾಕು, ಇನ್ನು ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟು ಕೊಡಬೇಕು.
ಸಿದ್ದರಾಮಯ್ಯ ಪುತ್ರ ಯತೀಂದ್ರ ನಾಯಕತ್ವದ ಬಗ್ಗೆ ಮಾತನಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ, ಅವರಿಗೆ ಕೊನೆ ಬಾರಿಗೆ ಎಚ್ಚರಿಕೆ ನೀಡುತ್ತಿದ್ದೇವೆ, ನಮ್ಮನ್ನು ಪ್ರಚೋಧಿಸುವುದು ಬೇಡ.
ನಮ್ಮದು ಶಿಸ್ತಿನ ಪಕ್ಷ, ತಂದೆ ಪರವಾಗಿ ಈ ರೀತಿ ಪದೇ ಪದೇ ಮಾತನಾಡುವುದು ಅಸಹ್ಯವಾಗಿ ಕಾಣುತ್ತಿದೆ.
ಅಪ್ಪನ ಪರ ಮಗನ ಮಾತು
ಬೇರೆ ನಾಯಕರು ಮಾತನಾಡಿದರೆ ಬೆಲೆ ಇರುತ್ತದೆ, ಅಪ್ಪನ ಪರವಾಗಿ ಮಗನೇ ಮಾತನಾಡುತ್ತಿದ್ದರೆ, ಅದಕ್ಕೆ ಯಾವುದೇ ವ್ಯಾಲ್ಯೂ ಇರುವುದಿಲ್ಲ.
ನಾನು ವಿಧಾನಸಭಾ ಸದಸ್ಯ, ನಾನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ, ಪರಿಷತ್ ಸದಸ್ಯರೊಬ್ಬರು ಮಾತನಾಡಿದರೆ ಅವರ ಮೇಲೆ ಯಾವ ಶಿಸ್ತು ಕ್ರಮವೂ ಇಲ್ಲ, ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕೇರಳದ ಕಾಸರಗೋಡಿನಲ್ಲಿ ಭಾನುವಾರ ರಾತ್ರಿ ನಡೆದ ಅಲ್ಪಸಂಖ್ಯಾತ ಸಂಘಟನೆಯ ಶತಮಾನೋತ್ಸವ ಸಮಾರಂಭದಲ್ಲಿ ಶಿವಕುಮಾರ್ ಭಾಗವಹಿಸಿದ್ದರು.
ಪಿಣರಾಯಿ ಜೊತೆ ವೇದಿಕೆ
ಈ ಸಮಾರಂಭದಲ್ಲಿ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ವೇದಿಕೆ ಹಂಚಿಕೊಂಡಿದ್ದರು.
ಕೇರಳ ವಿಧಾನಸಭಾ ಚುನಾವಣೆ ವೇಳೆ ಶಿವಕುಮಾರ್ ಅಲ್ಲಿನ ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಂಡಿರುವುದೇ ಕಾಂಗ್ರೆಸ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಮಾರಂಭ ಮುಗಿಯುತ್ತಿದ್ದಂತೆ ಶಿವಕುಮಾರ್ ಅವರನ್ನು ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡ ವೇಣುಗೋಪಾಲ್ ಮಾತುಕತೆ ನಡೆಸಿದರು.
ತಾಳ್ಮೆ ಕಳೆದುಕೊಳ್ಳುವಂತೆ ಮಾಡಬೇಡಿ
ಭೇಟಿ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಸೂತ್ರ ಜಾರಿಗೆ ತರಬೇಕು, ನಾವು ತಾಳ್ಮೆ ಕಳೆದುಕೊಳ್ಳುವಂತೆ ಮಾಡಬೇಡಿ ಎಂದು ವೇಣುಗೋಪಾಲ್ ಅವರಿಗೆ ಶಿವಕುಮಾರ್ ನೇರವಾಗಿ ತಿಳಿಸಿದ್ದಾರಂತೆ.
ಮಾತುಕತೆಯ ಪೂರ್ಣ ಮಾಹಿತಿ ಇಲ್ಲವಾದರೂ, ಇಂದು ಹುಸೇನ್ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಬೇಕು ಎಂದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಬಿಂಬಿಸುತ್ತದೆ.

