ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ೨೦ಕ್ಕೂ ಹೆಚ್ಚು ಶಾಸಕರು 10 ದಿನಗಳ ವಿದೇಶ ಪ್ರವಾಸ ತೆರಳುತ್ತಿದ್ದಾರೆ.
ಅಧಿಕಾರ ಹಸ್ತಾಂತರದ ಹಗ್ಗ ಜಗ್ಗಾಟದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಾಸಕರ ಬಲ ಪ್ರದರ್ಶನಕ್ಕೆ ತೆರೆಮರೆಯಲ್ಲಿ ನಡೆಸುತ್ತಿರುವ ಬೆನ್ನಲ್ಲೇ ಈ ಪ್ರವಾಸ ವ್ಯವಸ್ಥೆಯಾಗಿದೆ.
ಫೆಬ್ರವರಿ 15ಕ್ಕೆ 21 ಶಾಸಕರು
ಫೆಬ್ರವರಿ 15ರಂದು 21 ಶಾಸಕರು ಕುಟುಂಬ ಸದಸ್ಯರ ಸಮೇತ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗೆ ೧೦ ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ, ಎಂಎಲ್ಎ ಮತ್ತು ಎಂಎಲ್ಸಿಗಳು ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶಿವಕುಮಾರ್ ತಮ್ಮ ಬೆಂಬಲಿತ ಶಾಸಕರನ್ನು ಗೋವಾದ ರೆಸಾರ್ಟ್ಗಳಿಗೆ ಕಳುಹಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಆಪ್ತ ಇಬ್ಬರು ಸಚಿವರು, ಶಾಸಕರ ವಿದೇಶ ಪ್ರವಾಸಕ್ಕೆ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.
ಎಲ್ಲ ಶಾಸಕರ ಸಂಪರ್ಕ
ಅಧಿಕಾರ ಹಸ್ತಾಂತರ ದಿನದಿಂದ ದಿನಕ್ಕೆ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಸಂಪುಟದ ಬಹುತೇಕ ಎಲ್ಲ ಸಹೋದ್ಯೋಗಿಗಳೂ, ಪಕ್ಷದ ಶಾಸಕರ ಭೇಟಿ, ಇಲ್ಲವೇ ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮನ್ನು ಬೆಂಬಲಿಸುವಂತೆ ಶಿವಕುಮಾರ್ ಮನವಿ ಮಾಡಿದ್ದಾರೆ.
2028 ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ಸಕ್ರಿಯರಾಗಿ ಇರುವುದಿಲ್ಲ, ನಾವು ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಮತ್ತು ಪಕ್ಷದ ಉಳಿವಿಗಾಗಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಇದರ ಸುಳಿವರಿತ ಸಿದ್ದರಾಮಯ್ಯ ಆಪ್ತ ಸಚಿವರು, ತಮ್ಮ ನಾಯಕನ ಬೆಂಬಲಿತ ಶಾಸಕರ ಮನ ಬದಲಾವಣೆ ಆಗದಂತೆ ಮತ್ತು ಉಪಮುಖ್ಯಮಂತ್ರಿ ಪರ ವಾಲದಂತೆ ನೋಡಿಕೊಳ್ಳಲು ಮೊದಲ ಹಂತದಲ್ಲಿ ೨೧ ಶಾಸಕರನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಕಳುಹಿಸಿಕೊಡುತ್ತಿದ್ದಾರೆ.
ವರಿಷ್ಠರ ಭೇಟಿ ಯತ್ನ
ಕೊಟ್ಟ ಮಾತಿನಂತೆ ಅಧಿಕಾರ ಕೊಡಿಸಿ ಎಂದು ಕಳೆದ ಎರಡು ದಿನಗಳಿಂದ ಶಿವಕುಮಾರ್ ದೆಹಲಿಯಲ್ಲಿ ವರಿಷ್ಠರ ಭೇಟಿ ಯತ್ನದಲ್ಲಿ ನಿರತರಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಣ ಈ ಶಾಕ್ ನೀಡಿದೆ.
ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಇರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ವಿದೇಶ ಪ್ರವಾಸ ನನಗೆ ತಿಳಿದಿಲ್ಲ, ಯಾವ ದೇಶಕ್ಕೆ ಹೋಗುತ್ತಿದ್ದಾರೆ ಎನ್ನುವ ಮೂಲಕ ಆಶ್ಚರ್ಯ ವ್ಯಕ್ತಪಡಿಸಿದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಬಮೂಲ್ ಅಧ್ಯಕ್ಷ ಹಾಗೂ ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್, ಶಾಸಕರ ವಿದೇಶ ಪ್ರವಾಸಕ್ಕೂ ಉಪಮುಖ್ಯಮಂತ್ರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿದೇಶ ಪ್ರವಾಸ ಪ್ರಾಯೋಜಕರು
ಶಾಸಕರನ್ನು ವಿದೇಶಕ್ಕೆ ಕಳುಹಿಸುತ್ತಿರುವ ಪ್ರಾಯೋಜಕರನ್ನು ಕೇಳಿದರೆ ಮಾಹಿತಿ ದೊರೆಯುತ್ತದೆ, ಅದನ್ನು ಬಿಟ್ಟು ನಮ್ಮನ್ನು ಕೇಳಿದರೆ ಏನೂ ತಿಳಿಯುತ್ತದೆ ಎಂದರು.
ಮಾಧ್ಯಮಗಳು ಹೇಳಿದರೆ ಶಿವಕುಮಾರ್ ಬೆಂಬಲಿಗರೂ ರೆಸಾರ್ಟ್ಗೆ ಹೋಗಬಹುದು ಎಂದು ಹಾಸ್ಯಚಟಾಕಿ ಹಾರಿಸಿದರು.

