ನವದೆಹಲಿ:ಅಧಿಕಾರ ಹಂಚಿಕೆ ಸಂಬಂಧ ಕೊನೆಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಕುಮಾರ್ ಮನವಿ ಆಲಿಸಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಚರ್ಚಿಸುವ ಭರವಸೆ ನೀಡಿದ್ದಾರೆ.
ಸೋನಿಯಾ ಸಮ್ಮುಖದಲ್ಲೇ ಚರ್ಚೆ
ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿದ್ದ ಶಿವಕುಮಾರ್ ಇಂದು ಬೆಳಗ್ಗೆ 10 ಜನಪಥ್ಗೆ ತೆರಳಿ, ಸೋನಿಯಾ ಗಾಂಧಿ ಸಮ್ಮುಖದಲ್ಲೇ ರಾಹುಲ್ ಗಾಂಧಿ ಭೇಟಿ ಮಾಡಿ ಸುಮಾರು ೧೫ ನಿಮಿಷಗಳವರೆಗೆ ಚರ್ಚೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ, ನೀವು ಮಧ್ಯಪ್ರವೇಶಿಸಿ ಇತ್ಯರ್ಥಪಡಿಸಿ ಎಂದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಪಕ್ಷದ ಪ್ರಧಾನಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹಾ ಉಪಸ್ಥಿತರಿದ್ದು, ಶಿವಕುಮಾರ್ ಮನವಿ ಆಲಿಸಿದರು.
ನಡೆದ ಒಪ್ಪಂದ ಪಾಲಿಸುತ್ತಿಲ್ಲ
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಡೆದ ಒಪ್ಪಂದ ಪಾಲಿಸುವಲ್ಲಿ ಸಿದ್ದರಾಮಯ್ಯ ಹಿಂದೆ ಸರಿಯುತ್ತಿದ್ದಾರೆ.
ಒಪ್ಪಂದದಂತೆ ನಡೆದುಕೊಳ್ಳದಿರುವುದು ಪಕ್ಷದಲ್ಲಿ ಶಾಸಕರ ಒಂದು ಗುಂಪಿಗೆ ತೀವ್ರ ಬೇಸರ ತರಿಸಿದ್ದು, ನಾಯಕತ್ವ ವಿರುದ್ಧವೇ ಧ್ವನಿ ಎತ್ತಲು ಮುಂದಾಗಿದ್ದಾರೆ.
ಅದರಲ್ಲೂ ಕೆಲವು ಶಾಸಕರು ನನ್ನ ಮಾತಿಗೂ ಓಗೊಡದೆ, ಬಹಿರಂಗವಾಗಿಯೇ ಅಧಿಕಾರ ಹಸ್ತಾಂತರ ಕುರಿತು ಪ್ರಸ್ತಾಪಿಸುತ್ತಿದ್ದಾರೆ.
ಪಕ್ಷದ ಹಿತದೃಷ್ಠಿಯಿಂದ ಮನವೊಲಿಕೆ
ಸರ್ಕಾರ ಮತ್ತು ಪಕ್ಷದ ಹಿತದೃಷ್ಠಿಯಿಂದ ಅವರುಗಳ ಮನವೊಲಿಕೆಗೆ ಇಷ್ಟು ದಿನ ಯತ್ನಿಸಿದ್ದು, ಈ ಪರಿಸ್ಥಿತಿ ಹೆಚ್ಚು ಸಮಯ ಮುಂದುವರಿಯದಂತೆ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ನಿಷ್ಠರಿಗೆ ಬೆಲೆ ಸಿಗುತ್ತಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿದೆ, ನೀವುಗಳು ತಕ್ಷಣವೇ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಬುಧವಾರ ರಾತ್ರಿ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡದೆ ನಡೆಸುತ್ತಿರುವ ತಂತ್ರಗಾರಿಕೆ ಬಗ್ಗೆ ವಿವರಿಸಿದ್ದಾರೆ.
ಹಾದಿಬೀದಿಯಲ್ಲಿ ಹೇಳಲು ಆಗದು
ರಾಹುಲ್ ಮತ್ತು ಸೋನಿಯಾ ಗಾಂಧಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಪಕ್ಷದ ನಾಯಕಿ ಹಾಗೂ ಅಲ್ಲಿದ್ದ ಇತರ ನಾಯಕರೊಂದಿಗೆ ಏನು ಚರ್ಚಿಸಿದೆ ಎಂಬುದನ್ನು ಹಾದಿಬೀದಿಯಲ್ಲಿ ಹೇಳಲು ಆಗುವುದಿಲ್ಲ ಎಂದರು.
ಏನು ಮಾತನಾಡಬೇಕೋ, ಅದನ್ನು ಮಾತನಾಡಿದ್ದೇನೆ, ದೆಹಲಿಗೆ ಬಂದಿದ್ದೇ ರಾಜಕೀಯ ಮಾಡಲು, ಎಲ್ಲಾ ವಿಚಾರ ಮಾತನಾಡದೆ ಇಲ್ಲಿಂದ ಹೋಗುತ್ತೇನೆಯೇ, ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂಬುದಾಗಿ ತಿಳಿಸಿ, ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಇಚ್ಚಿಸಲಿಲ್ಲ.

