ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ಗೆ 20 ಮಂದಿ 10 ದಿನಗಳ ಪ್ರವಾಸ
ಬೆಂಗಳೂರು:ಪಕ್ಷದ ವರಿಷ್ಠರ ಆದೇಶಕ್ಕೂ ಮಣಿಯದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ 20 ಸಚಿವರು, ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.
ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ತೆರೆಮರೆಯಲ್ಲಿ ಭಾರೀ ಸಮರ ನಡೆದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಆಪ್ತ ಸಚಿವ, ಶಾಸಕರು ತಮ್ಮ ಕುಟುಂಬ ಸಮೇತ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗೆ 10 ದಿನಗಳ ಪ್ರವಾಸಕ್ಕೆ ಹೊರಟಿದ್ದಾರೆ.
ಆದೇಶ ಧಿಕ್ಕರಿಸಿ ಕೆಲವು ಶಾಸಕರು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಬರುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯ ಬಳಗದಲ್ಲಿರುವ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ತಮ್ಮ ನಿವಾಸಕ್ಕೆ ಕರೆಸಿ ಸಮಾಲೋಚನೆ ನಡೆಸಿದ್ದಾರೆ.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನಾಯಕತ್ವದಲ್ಲಿ ಕಳೆದ ವಾರವೇ 11 ಶಾಸಕರು ವಿದೇಶ ಪ್ರವಾಸ ಕೈಗೊಳ್ಳಬೇಕಿತ್ತು.
ಅಧಿಕಾರ ಹಸ್ತಾಂತರ ಗೊಂದಲದ ನಡುವೆ ಪಕ್ಷದ ಶಾಸಕರು ವಿದೇಶ ಪ್ರವಾಸ ಕೈಗೊಂಡರೆ ತಪ್ಪು ಸಂದೇಶ ಹೋಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ, ನಮ್ಮ ಸದಸ್ಯರು ವಿದೇಶ ಪ್ರವಾಸ ಕೈಗೊಳ್ಳದಿರಲು ಮಲ್ಲಿಕಾರ್ಜುನ ಖರ್ಗೆ ಆದೇಶಿಸಿದ್ದಾರೆ ಎಂಬ ಮಾಹಿತಿ ನೀಡಿದ್ದರು.
ಸುರ್ಜೇವಾಲ ಮುಖ್ಯಮಂತ್ರಿ ಅವರನ್ನಷ್ಟೇ ಅಲ್ಲದೆ, ವಿದೇಶ ಪ್ರವಾಸ ತೆರಳುತ್ತಿರುವವರನ್ನೂ ಸಂಪರ್ಕಿಸಿ ವರಿಷ್ಠರ ಆದೇಶ ಪಾಲಿಸುವಂತೆ ಸಲಹೆ ಮಾಡಿದ್ದರು.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆಯುತ್ತಿದ್ದಂತೆ, ಮುಖ್ಯಮಂತ್ರಿ ತಮ್ಮ ಬೆಂಬಲಿಗರ ವಿದೇಶ ಪ್ರವಾಸಕ್ಕೆ ಹಸಿರು ನಿಶಾನೆ ತೋರಿದರು.
ನಾಯಕನ ಆದೇಶದಂತೆ ಅಧ್ಯಯನ ನೆಪದಲ್ಲಿ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ.
ಶಾಸಕರ ವಿದೇಶ ಪ್ರವಾಸದ ಪೂರ್ಣ ವೆಚ್ಚವನ್ನು ಸಿದ್ದರಾಮಯ್ಯ ಬಣಕ್ಕೆ ಸೇರಿದ ಇಬ್ಬರು ಸಚಿವರು ಭರಿಸಿರುವರಲ್ಲದೆ, ಪ್ರವಾಸ ಹೊರಟವರ ಎಲ್ಲಾ ವ್ಯವಸ್ಥೆಯನ್ನು ಇವರೇ ಮಾಡಿದ್ದಾರೆ.
ಸಚಿವ ಕೆ.ವೆಂಕಟೇಶ್ ನಾಯಕತ್ವದಲ್ಲಿ ವಿಧಾನಸಭಾ ಸದಸ್ಯರಾದ ಪುಟ್ಟರಂಗ ಶೆಟ್ಟಿ, ಎಚ್.ಡಿ.ತಮ್ಮಯ್ಯ, ಹಂಪನಗೌಡ ಬಾದರ್ಲಿ, ದೇವೇಂದ್ರಪ್ಪ, ಯಶವಂತರಾಯ ಗೌಡ ಪಾಟೀಲ್.
ಬಿ.ಎಂ.ನಾಗರಾಜ್, ಜೆ.ಟಿ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬಸನಗೌಡ ದದ್ದಲ್, ಎ.ಆರ್.ಕೃಷ್ಣಮೂರ್ತಿ, ಬಸನಗೌಡ ತುರುವೇಹಾಳ್, ಬಿ.ಬಿ.ಚಿಮ್ಮನಕಟ್ಟಿ, ಮಹಂತೇಶ್ ಕೌಜಲಗಿ, ರಾಘವೇಂದ್ರ ಇಟ್ನಾಳ್, ರಘುಮೂರ್ತಿ, ಅನಿಲ್ ಚಿಕ್ಕಮಾಧು.
ವಿಧಾನ ಪರಿಷತ್ ಸದಸ್ಯರಾದ ವಸಂತಕುಮಾರ್, ಶರಣಗೌಡ ಬಯ್ಯಾಪುರ, ತಿಮ್ಮಯ್ಯ ಪ್ರವಾಸದಲ್ಲಿರುವ ಸದಸ್ಯರು.

