ಬೆಂಗಳೂರು:ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಸ್ವಾಮಿ ನಿಷ್ಠೆಯಿಂದ ಇರುತ್ತವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಇಂದಿಲ್ಲಿ ಟಾಂಗ್ ನೀಡಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಡಾ.ಮಹದೇವಪ್ಪ, ಬೀದಿ ನಾಯಿಗಳನ್ನು ಹಿಡಿದು ಒಳಗೆ ಹಾಕಿ ಎಂದು ಹೈಕೋರ್ಟ್ ಆದೇಶ ಮಾಡಿದೆ, ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿ ಇದೆ.
ಪರ-ವಿರೋಧ ಟಾಂಗ್
ಇಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸಿದಂತಾಗಿದೆ ಎಂದು ಪರೋಕ್ಷವಾಗಿ ಅಧಿಕಾರ ಹಸ್ತಾಂತರಕ್ಕೆ ಬೆನ್ನತ್ತಿರುವ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್, ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ ಎನ್ನುವ ಮೂಲಕ, ಹೊರಗಿನಿಂದ ಬಂದವರು ನಿಯತ್ತಿನಿಂದ ಇಲ್ಲ ಎಂಬರ್ಥದಲ್ಲಿ ಹೇಳಿದರು.
ಡಾ.ಮಹದೇವಪ್ಪ ಅವರು ನಾಯಿಗಳೆಂದು ಯಾರಿಗೆ ಹೋಲಿಸಿದ್ದಾರೆ ತಿಳಿಯದು, ಆದರೆ ಕಟ್ಟಾ ಕಾಂಗ್ರೆಸ್ಸಿಗರು ಋಣ ತೀರಿಸುವ ನಾಯಿಗಳು, ಸಾಕಿದ ನಾಯಿಯೇ ಆಗಿರಬಹುದು, ಬೀದಿ ನಾಯಿಯೇ ಆಗಿರಬಹುದು, ಯಜಮಾನನ ಋಣ ತೀರಿಸುತ್ತವೆ.
’ನಾಯಿ ನಿಯತ್ತು, ನಿನಗಿಲ್ಲವಲ್ಲೋ’
’ನಾಯಿಗಿರುವ ನಿಯತ್ತು, ನಿನಗಿಲ್ಲವಲ್ಲೋ’ ಎಂಬ ನಾಣ್ನುಡಿಯೇ ಇದೆ, ಮನುಷ್ಯ ತೀರಿಸುತ್ತಾನೋ, ಬಿಡುತ್ತಾನೋ ಗೊತ್ತಿಲ್ಲ, ಆದರೆ, ನಾಯಿಗಳನ್ನು ಸಾಕುವುದೇ ಅವು ನಿಯತ್ತಿನಿಂದ ಇರುತ್ತವೆ ಎಂಬ ಕಾರಣಕ್ಕೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದಲ್ಲಿರುವ ಡಾ.ಮಹದೇವಪ್ಪ ಸೇರಿದಂತೆ ಬಹುತೇಕ ಸಚಿವರು ಜನತಾ ಪರಿವಾರ ಹಾಗೂ ಬಿಜೆಪಿಯಿಂದ ಬಂದವರಿದ್ದಾರೆ.
ಇದನ್ನು ಗಮನದಲ್ಲಿ ಇಟ್ಟುಕೊಂಡು ಸುರೇಶ್, ಈ ಹಿಂದೆ, ನಮ್ಮಲ್ಲಿ ಹೊರಗಿನಿಂದ ಬಂದವರಿಗೆ ಆದ್ಯತೆ ದೊರೆಯುತ್ತಿದೆ ಎಂಬ ಮಾತುಗಳನ್ನು ಆಡಿದ್ದರು, ಇದೀಗ ಡಾ.ಮಹದೇವಪ್ಪ ಆಡಿದ ಮಾತಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಉತ್ತರ ನೀಡುತ್ತಾರೆ
ಈ ಮಧ್ಯೆ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಯಕತ್ವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯ ಬಂದಾಗ ರಾಜ್ಯದ ಜನತೆಗೆ ಉತ್ತರ ನೀಡುತ್ತಾರೆ.
ಅಧಿಕಾರ ಹಂಚಿಕೆ ಕುರಿತು ನಾನು, ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಮಾತುಕತೆ ನಡೆದಿದೆ.
ಹೈಕಮಾಂಡ್ ನಿರ್ಧಾರ ಮಾಡುತ್ತೆ
ನಾವು ಏನು ಮಾತನಾಡಿದ್ದೇವೆ, ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ.
ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಗಿರಲಿ, ಇನ್ಯಾರೇ ಆಗಿರಲಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

