ಬೆಂಗಳೂರು:ಜಾತಿ ವ್ಯವಸ್ಥೆ, ಮೌಢ್ಯ ಹಾಗೂ ಕಂದಾಚಾರಗಳನ್ನು ಹೋಗಲಾಡಿಸುವ ಶಿಕ್ಷಣದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.
ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಹಾಗೂ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಬದಲಾವಣೆ ಮತ್ತು ಅಸಮಾನತೆ ಹೋಗಲಾಡಿಸಿ ಮುಖ್ಯವಾಹಿನಿಗೆ ತರುವಂತಹ ಶಿಕ್ಷಣ ನೀಡಬೇಕಿದೆ.
ಭದ್ರವಾಗಿ ನೆಲೆ ಊರಿದೆ
ಆದರೆ, ಜಾತಿ ವ್ಯವಸ್ಥೆ ಭದ್ರವಾಗಿ ನೆಲೆ ಊರಿರುವುದರಿಂದ ಇಂತಹ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ.
ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಶೇ.12 ರಷ್ಟಿದ್ದ ಶಿಕ್ಷಣ ಪ್ರಮಾಣ ಇಂದು ಶೇ.75ಕ್ಕೆ ತಲುಪಿದೆ, ಆದರೆ, ಸ್ವಾಸ್ಥ್ಯ ಸಮಾಜ ನಿರ್ಮಿಸುವ ಶಿಕ್ಷಣ ನೀಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ.
ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಹೇಳಿದಂತೆ, ಮಕ್ಕಳು ತರಗತಿಗಳಲ್ಲೇ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಅಲ್ಲಿಂದಲೇ ಮುಂದೆ ನಾವು ಎಂತಹ ಶಿಕ್ಷಣ ಪಡೆಯಬೇಕೆಂಬ ನಿರ್ಧಾರದೊಂದಿಗೆ ಹೆಜ್ಜೆ ಇಟ್ಟರೆ, ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.
ಎಲ್ಲರಿಗೂ ಶಿಕ್ಷಣ
ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೂ ನಾವು ಎಲ್ಲರಿಗೂ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಜಾತಿ ವ್ಯವಸ್ಥೆಯೇ ಮೂಲಕಾರಣ.
ಸಮಾಜ ಬದಲಾಗದೆ ಅಸಮಾನತೆ ಹೋಗಲಾಡಿಸಲು ಸಾಧ್ಯವಾಗದು, ತುಳಿತಕ್ಕೆ ಒಳಗಾದವರನ್ನು ಮುಖ್ಯವಾಹಿನಿಗೆ ತರಲೂ ಸಾಧ್ಯವಾಗದು ಎಂದರು.

