ಬೆಂಗಳೂರು:ಪಂಚಗ್ಯಾರಂಟಿಗಳನ್ನು ಮುಂದುವರೆಸಿಕೊಂಡು ರಾಜ್ಯದಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ, ಬಡವರು ಮತ್ತು ಶ್ರಮಿಕರು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ಉದ್ದೇಶದಿಂದ ರಾಜ್ಯದ ಸಂಪನ್ಮೂಲದ ಜೊತೆಗೆ 1.32 ಲಕ್ಷ ಕೋಟಿ ರೂ. ಸಾಲದ ಬಜೆಟ್ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಮಂಡಿಸಿದ್ದಾರೆ.
2026-27ನೇ ಸಾಲಿನ ಮುಂಗಡಪತ್ರದಲ್ಲಿ ಜನಸಾಮಾನ್ಯರ ಮೇಲೆ ಹೊಸ ತೆರಿಗೆ ಹೇರದಿದ್ದರೂ ಪರೋಕ್ಷವಾಗಿ ಅಬಕಾರಿ, ಮುಂದ್ರಾಂಕ, ಮೋಟಾರು ವಾಹನ ತೆರಿಗೆ ಮೂಲಕ ಸಂಪನ್ಮೂಲ ಕ್ರೂಡೀಕರಣಕ್ಕೆ ಮುಂದಾಗಿದ್ದಾರೆ.
ದಾಖಲೆಯ 17ನೇ ಬಜೆಟ್
ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿರುವ ಸಿದ್ದರಾಮಯ್ಯ ತಮ್ಮ ದಾಖಲೆಯ 17ನೇ ಮಂಡಿಸಿದರು, ಈಗಾಗಲೇ 16 ಬಜೆಟ್ ಮಂಡಿಸಿ ರಾಜ್ಯದಲ್ಲಿ ಅತ್ಯಧಿಕ ಮತ್ತು ದೇಶದಲ್ಲಿ ಅಧಿಕ ಬಜೆಟ್ ಮಂಡಿಸಿದ ಎರಡನೇ ವ್ಯಕ್ತಿ ಎಂಬ ದಾಖಲೆ ಮಾಡಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ದಾಖಲೆಯ 4 ಲಕ್ಷದ 48 ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದಲ್ಲದೆ, ಸಂಪನ್ಮೂಲ ಕ್ರೂಡೀಕರಣಕ್ಕೆ ಹಲವು ಮಾರ್ಗಗಳ ಜೊತೆಗೆ 1.32 ಲಕ್ಷ ಕೋಟಿ ರೂ. ಸಾಲ ಮಾಡುವ ಪ್ರಸ್ತಾವನೆ ಮಾಡಿದ್ದು ಒಟ್ಟು 22,957 ಕೋಟಿ ರೂ. ಕೊರತೆ ಬಜೆಟ್ ಮಂಡನೆ ಮಾಡಿದ್ದಾರೆ.
ಕನ್ನಡಿಗರ ಆಶೋತ್ತರಗಳಿಗೆ ಅನುಗುಣವಾಗಿ ನಡೆಯಲು ಸರ್ಕಾರ ಬದ್ಧವಾಗಿದೆ ಎಂದು ಘೋಷಿಸುವ ಮೂಲಕ ಬಜೆಟ್ ಭಾಷಣ ಆರಂಭಿಸಿದ ಅವರು, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾಣಿಜ್ಯ ಕ್ಷೇತ್ರದಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಿದೆ ಕೃತಕ ಬುದ್ಧಿಮತ್ತೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆ ಸಾಧಿಸಿದ್ದೇವೆ.
ಹೊಸ ಉದ್ಯೋಗ ಸೃಷ್ಟಿ
ಕರ್ನಾಟಕದ 50ಕ್ಕೂ ಹೆಚ್ಚು ಉತ್ಪನ್ನಗಳಿಗೆ GI ಮಾನ್ಯತೆ ಸಿಕ್ಕಿದೆ, ವ್ಯಾಪಾರ, ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಸ ಉದ್ಯೋಗ ಸೃಷ್ಟಿಗೆ ಯೋಜನೆ ಜಾರಿ ಮಾಡಿದ್ದೇವೆ ಎಂದರು.
ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ವಿಪರೀತವಾಗುತ್ತಿರುವ ಮೊಬೈಲ್ ಗೀಳು ಹಾಗೂ ಸಾಮಾಜಿಕ ಜಾಲತಾಣಗಳ ದಾಸ್ಯದಿಂದ ಎಳೆಯ ಮನಸ್ಸುಗಳನ್ನು ಪಾರುಮಾಡುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಘೋಷಿಸಿದರು.
ಶಾಲಾ ಮಕ್ಕಳಲ್ಲಿ ಸ್ಮಾರ್ಟ್ಫೋನ್ ಬಳಕೆ ಮಿತಿಮೀರುತ್ತಿದ್ದು, ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಮೇಲೆ ತೀವ್ರ ಸ್ವರೂಪದ ನಕಾರಾತ್ಮಕ ಪರಿಣಾಮ ಬೀರುತ್ತಿದೆ, ಈ ಹಿನ್ನೆಲೆಯಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದರು.
ಹಸು, ಎಮ್ಮೆ ಖರೀದಿಗೆ ಪ್ರೋತ್ಸಾಹಧನ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹೆಸರನ್ನು ಶಾಂತವೇರಿ ಗೋಪಾಲಗೌಡ ಸಾರ್ವಜನಿಕ ಆಸ್ಪತ್ರೆ ಎಂಬುದಾಗಿ ಮರುನಾಮಕರಣ, ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಮೀಣ ಪ್ರದೇಶದ ಜನರಿಗೆ ಹಸು, ಎಮ್ಮೆ ಖರೀದಿಸಲು 40 ಸಾವಿರ ರೂ. ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೀಡಲಾಗುತ್ತಿದ್ದು, ಇನ್ನು ಮುಂದೆ ಪದವಿ ಪೂರ್ವ ವಿದ್ಯಾರ್ಥಿಗಳಿಗೂ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಮಡಿವಾಳ ಸಮಾಜದ ಯುವಜನರ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ರೂ. ಸಾಲ ಸೌಲಭ್ಯವನ್ನು ಶೇಕಡ 4ರ ಬಡ್ಡಿ ದರದಲ್ಲಿ ಕಲ್ಪಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿ, ಸವಿತಾ ಸಮಾಜದವರು ಸಲೂನ್ಗಳನ್ನು ತೆರೆಯಲು ಶೇಕಡ 4ರ ಬಡ್ಡಿ ದರದಲ್ಲಿ 10 ಲಕ್ಷ ರೂ. ಸಾಲ ಮತ್ತು ಸಹಾಯಧನ ಮಂಜೂರು ಮಾಡಲಾಗುವುದು.

ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ, ಕಾಡುಗೊಲ್ಲ ನಿಗಮ
ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ ಮತ್ತು ಕಾಡುಗೊಲ್ಲ ಸಮುದಾಯದ ಜನರ ಆರ್ಥಿಕ ಏಳಿಗೆಗಾಗಿ ನೆರವು ನೀಡಲು ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಲಾಗಿದ್ದು, ಇದರ ಮೂಲಕ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.
ನಿರುದ್ಯೋಗ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಆಯವ್ಯದಲ್ಲಿ ಪ್ರಕಟಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಘೋಷಿಸಿರುವ ಅವರು, ಗ್ಯಾರಂಟಿ ಯೋಜನೆ ಜಾರಿಯಾದಾಗಿನಿಂದ ಫೆಬ್ರವರಿ 2026 ರವರೆಗೆ 1,21,598 ಕೋಟಿ ರೂ. ವೆಚ್ಚ ಮಾಡಿರುವುದಾಗಿ ತಿಳಿಸಿದರು
ಗೃಹಲಕ್ಷಿಗೆ 28,608 ಕೋಟಿ ರೂ.
ಮುಂಬರುವ ಆರ್ಥಿಕ ವರ್ಷದಲ್ಲಿ ಗೃಹಲಕ್ಷಿ ಯೋಜನೆಗೆ 28,608 ಕೋಟಿ ರೂ., ಗೃಹ ಜ್ಯೋತಿಗೆ 10578 ಕೋಟಿ ರೂ., ಶಕ್ತಿ ಯೋಜನೆಗೆ 5,300 ಕೋಟಿ ರೂ., ಅನ್ನಭಾಗ್ಯ ಯೋಜನೆಗೆ 6200 ಕೋಟಿ ರೂ., ಇಂದಿರಾ ಕಿಟ್ಗೆ 68,200 ಕೋಟಿ ರೂ. ನೀಡುವ ಘೋಷಣೆ ಮಾಡಿದ್ದಾರೆ.
ವೈಷ್ಣೋದೇವಿ ಯಾತ್ರಿಕರಿಗೆ ಸರ್ಕಾರದಿಂದ 5 ಸಾವಿರ ರೂ. ಸಹಾಯಧನ ಘೋಷಿಸಿದ್ದಾರೆ, ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ 100 ಸಂಖ್ಯಾ ಬಲದ ಎರಡು ಮಹಿಳಾ ವೃದ್ಧಾಶ್ರಮ ಪ್ರಾರಂಭ, ಅಲ್ಪ ಸಂಖ್ಯಾತ 5000 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗೆ ತಲಾ 50 ಸಾವಿರ ರೂ. ನೀಡುವುದಾಗಿ ಹೇಳಿದರು.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಘೋಷಣೆ, ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಲು ಮಾನಸಿಕ ಆರೋಗ್ಯ ಸುಧಾರಣೆಗೆ 204 ಬಿಆರ್ಸಿ ಕೇಂದ್ರಗಳಲ್ಲಿ ಆರೋಗ್ಯ ಸಲಹೆಗಾರರ ನೇಮಕ, ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಸುಧಾಮೃತ ಯೋಜನೆ ಜಾರಿ ಘೋಷಣೆ ಮಾಡಿದ್ದಾರೆ.
ಎಸ್ಸಿ, ಎಸ್ಟಿ, ಒಬಿಸಿ ಹೊಸ ಹಾಸ್ಟೆಲ್
ಕಾಲೇಜು-ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಮರುಚಾಲನೆ ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ 40 ಹೊಸ ಹಾಸ್ಟೆಲ್ ನಿರ್ಮಾಣ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ, ಶಾಲಾ-ಕಾಲೇಜುಗಳಿಗೆ 15 ಸಾವಿರ ಶಿಕ್ಷಕರ ಭರ್ತಿ.
ವಿದ್ಯಾರ್ಥಿಗಳಿಗಾಗಿ ಇಂದಿರಾ ಕ್ಯಾಂಟೀನ್ ಘೋಷಣೆ ಮಾಡಿದ್ದು ಬೆಂಗಳೂರಿನಲ್ಲಿ 2, ಧಾರವಾಡದಲ್ಲಿ 4 ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಘೋಷಣೆ ಮಾಡಿದ್ದಾರೆ.
ನೇಕಾರರಿಗೆ ಪ್ರತಿ ಯೂನಿಟ್ ವಿದ್ಯುತ್ಗೆ 3 ರೂ. ಸಹಾಯಧನ, ಉದ್ಯೋಗಸ್ಥ ಎಸ್ಸಿ, ಎಸ್ಟಿ ಮಹಿಳೆಯರಿಗೆ ಮೈಸೂರು, ಬೆಂಗಳೂರು, ಮಂಗಳೂರು ಬೆಳಗಾವಿಯಲ್ಲಿ ಹಾಸ್ಟೆಲ್.
ಗರ್ಭಿಣಿ-ಬಾಣಂತಿಯರಿಗೆ ಬಿಸಿಯೂಟ
ಗರ್ಭಿಣಿ ಮತ್ತು ಬಾಣಂತಿಯರಿಗೆ ಮನೆಗಳಿಗೆ ನೀಡಲಾಗುತ್ತಿದ್ದ ಪಡಿತರ ರದ್ದು ಮಾಡಿ, ಬಿಸಿಯೂಟ ಯೋಜನೆಯಡಿ ಅಂಗನವಾಡಿಯಲ್ಲಿ ಬಿಸಿಯೂಟ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಮ್ಮ ಬಜೆಟ್ನಲ್ಲಿ ಅವರು ಶಿಕ್ಷಣ ಇಲಾಖೆಗೆ ದಾಖಲೆಯ 47,224 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ, ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ 22,203 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 34,929 ಕೋಟಿ ರೂ., ಮೀನುಗಾರಿಕೆ ಪಶುಸಂಸೋಪನೆ ಇಲಾಖೆಗೆ 4084 ಕೋಟಿ ರೂ. ಅನುದಾನ ತೆಗೆದಿರಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ರೂ., ಇಂಧನ ಇಲಾಖೆಗೆ 29,947 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 26,559 ಕೋಟಿ ರೂ., ಲೋಕೋಪಯೋಗಿ ಮತ್ತು ಸಾರಿಗೆ ಇಲಾಖೆಗೆ 23,100 ಕೋಟಿ ರೂ., ನೀರಾವರಿಗೆ 22,436 ಕೋಟಿ ರೂ., ನಗರಾಭಿವೃದ್ಧಿ ಮತ್ತು ವಸತಿಗೆ 22,203 ಕೋಟಿ ರೂ., ಕಂದಾಯ ಇಲಾಖೆಗೆ 19,843 ಕೋಟಿ ರೂ., ಸಮಾಜ ಕಲ್ಯಾಣಕ್ಕೆ 18,612 ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ17,817 ಕೋಟಿ ರೂ., ಒಳಾಡಳಿತ ಇಲಾಖೆಗೆ 11,424 ಕೋಟಿ ರೂ., ಕೃಷಿ ಮತ್ತು ತೋಟಗಾರಿಕೆಗೆ 8,373 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 7,942 ಕೋಟಿ ರೂ. ಅನುದಾನ ನೀಡಿದ್ದು, ಇತರೆ ವಲಯಗಳಿಗಾಗಿ 1,72,757 ಕೋಟಿ ರೂ. ಅನುದಾನ ತೆಗೆದಿರಿಸಲಾಗಿದೆ ಎಂದು ತಿಳಿಸಿದ್ದಾರೆ.

