ಬೆಂಗಳೂರು:ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಕೊರತೆ ಬಗ್ಗೆ ಆತಂಕ ಬೇಡ, ಆದರೆ, ಮಿತವಾಗಿ ಬಳಸಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ವಿಧಾನಸಭೆಯಲ್ಲಿಂದು ಮನವಿ ಮಾಡಿದ್ದಾರೆ.
ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ಯುದ್ಧ ಮುಂದುವರೆದರೂ ಕರ್ನಾಟಕದಲ್ಲಿ ಗೃಹ ಬಳಕೆ ಸಿಲಿಂಡರ್ ಪೂರೈಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಕುಟುಂಬಕ್ಕೆ ಒಂದು ಸಿಲಿಂಡರ್
ಪ್ರತಿ ತಿಂಗಳು ಕುಟುಂಬಕ್ಕೆ ಒಂದು ಸಿಲಿಂಡರ್ ಮಾತ್ರ ಲಭ್ಯವಿರಲಿದೆ, ಆದ್ದರಿಂದ ಮಿತವ್ಯಯವಾಗಿ ಬಳಸಿಕೊಳ್ಳಿ.
ತೈಲ ಸರಬರಾಜು ಕಂಪನಿಗಳ ಜೊತೆ ಇಂದು ಸಭೆ ನಡೆಸಿ ಮಾಹಿತಿ ಪಡೆದಕೊಂಡಿದ್ದೇನೆ, ಅಲ್ಲದೆ, ಗೃಹ ಬಳಕೆ ಸಿಲಿಂಡರ್ ಪೂರೈಕೆಗೆ ತೊಂದರೆ ಆಗದು ಎಂಬ ಭರವಸೆ ನೀಡಿದ್ದಾರೆ.
ಆದರೆ, ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಮೇಲೆ ಸ್ವಲ್ಪ ನಿಯಂತ್ರಣ ಹೇರಲಾಗಿದೆ, ಹೋಟೆಲ್ ಉದ್ಯಮದವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು, ಅವರಿಗೆ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಸಾರ್ವಜನಿಕ ಕಾರ್ಯಕ್ಕೆ ನಿರಂತರ ಪೂರೈಕೆ
ವಿದ್ಯಾರ್ಥಿನಿಲಯಗಳು, ಆಸ್ಪತ್ರೆ ಮತ್ತು ಸಾರ್ವಜನಿಕ ಉಪಯುಕ್ತ ಕೇಂದ್ರಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸ ಆಗುವುದಿಲ್ಲ.
ಹೋಟೆಲ್ ಮತ್ತು ಮದುವೆ ಮತ್ತು ಸಮಾರಂಭಗಳಿಗೆ ಪೂರೈಕೆ ಮಾಡಲಾಗದು ಎಂದು ಸ್ಪಷ್ಟಪಡಿಸಿದರು.
ಶೂನ್ಯವೇಳೆಯಲ್ಲಿ ಡಾ.ರಂಗನಾಥ್ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಇಲ್ಲಿಯವರಿಗೂ ಅಡುಗೆ ಅನಿಲ ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಸಂಗ್ರಹಕ್ಕೆ ಮುಂದಾದರೆ ಕಾನೂನು ಕ್ರಮ
ಸಮಸ್ಯೆ ಆಗುತ್ತದೆ ಎಂಬ ಹಿನ್ನೆಲೆಯಲ್ಲಿ ಸಿಲಿಂಡರ್ಗಳ ಸಂಗ್ರಹಕ್ಕೆ ಮುಂದಾಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇದು ಯುದ್ಧದ ಸಮಯ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ, ಕೇಂದ್ರದ ಮೇಲೆ ಆರೋಪ ಹೊರಿಸುವುದೂ ಸರಿಯಲ್ಲ.
ನಮ್ಮಲ್ಲಿಯೇ ಶೇಕಡ 35ರಷ್ಟು ಅಡುಗೆ ಅನಿಲ ಉತ್ಪಾದನೆ ಆಗುತ್ತಿದೆ, ಉಳಿದದ್ದನ್ನು ಅಮೆರಿಕ, ರಷ್ಯಾ ಹಾಗೂ ಅರಬ್ ರಾಷ್ಟ್ರಗಳಿಂದ ಪಡೆದುಕೊಳ್ಳಲಾಗುತ್ತಿದೆ.
ಹಾರ್ಮುಜ್ ಕೊಲ್ಲಿಯಲ್ಲಿ ಇರಾನ್ ಅಡ್ಡಿ
ಹಾರ್ಮುಜ್ ಕೊಲ್ಲಿಯಲ್ಲಿ ತೈಲ ಹಡಗುಗಳ ಸಂಚಾರಕ್ಕೆ ಇರಾನ್ ಅಡ್ಡಿ ಉಂಟು ಮಾಡುತ್ತಿರುವುದರಿಂದ ನಮಗೆ ಕೊರತೆ ಎದುರಾಗಿದೆ.
ನಮಗೆ ದಿನಕ್ಕೆ 3.50 ಲಕ್ಷ ಗೃಹ ಬಳಕೆ ಸಿಲಿಂಡರ್ ಅಗತ್ಯವಿದೆ, ವಾಣಿಜ್ಯ 50,000 ಸಿಲಿಂಡರ್ ಅಗತ್ಯವಿದೆ, ತೈಲ ಕಂಪನಿ ಅಧಿಕಾರಿಗಳ ಮಾಹಿತಿ ಆಧರಿಸಿ ವಿವರಣೆ ನೀಡಿದ್ದೇನೆ.
ಮುಂದೆಯೂ ನಮ್ಮ ಅಧಿಕಾರಿಗಳು ಅಡುಗೆ ಅನಿಲ ಅಭಾವ ಆಗದಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಭರವಸೆ ನೀಡಿದರು.

