ಬೆಂಗಳೂರು:ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ಮತ್ತು ಇಲಾಖಾ ಕಾರ್ಯದರ್ಶಿಗಳು ವಿಫಲರಾಗಿದ್ದಾರೆ ಎಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪ ನಡೆಸದೆ ಪೀಠದಿಂದಲೇ ಎದ್ದು ಹೊರನಡೆದ ಘಟನೆ ವಿಧಾನಸಭೆಯಲ್ಲಿಂದು ಜರುಗಿತು.
ರಮೇಶ್ಕುಮಾರ್ ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎರಡು-ಮೂರು ಬಾರಿ ವಿವಿಧ ಕಾರಣಗಳಿಗೆ ಬೇಸರಗೊಂಡು ತಮ್ಮ ಮುಂದಿನ ಮೇಜನ್ನು ತಳ್ಳಿ ಸದನದಿಂದ ಹೊರ ನಡೆದಿದ್ದರು.
ಸಚಿವರು, ಶಾಸಕರ ಗೈರುಹಾಜರಿ
ಬಹುವರ್ಷಗಳ ನಂತರ ಸಚಿವರು, ಶಾಸಕರ ಗೈರುಹಾಜರಿ, ಸಮಯಕ್ಕೆ ಸರಿಯಾಗಿ ಹಾಜರಾಗದ ಮಂತ್ರಿಗಳು, ಸದಸ್ಯರ ಪ್ರಸ್ತಾವಗಳಿಗೆ ಉತ್ತರಿಸದ ಘಟನೆಗಳಿಂದ ಬೇಸರಗೊಂಡು ಹೊರನಡೆದರು.
ಹಿಂದೆ ಮೂರ್ನಾಲ್ಕು ಬಾರಿ ನೀಡಿದ ಎಚ್ಚರಿಕೆಗೂ ಸ್ಪಂದಿಸದಿದ್ದರೆ ಸದನ ನಡೆಸುವುದರಲ್ಲಿ ಏನರ್ಥ ಎನ್ನುವ ಮೂಲಕ ಸಭಾಧ್ಯಕ್ಷರು ಹೊರನಡೆದರು.
ಈ ಸಂದರ್ಭದಲ್ಲಿ ಅವರು ಸದನ ಮತ್ತೆ ಯಾವಾಗ ಸಮಾವೇಶಗೊಳ್ಳಲಿದೆ ಎಂಬುದನ್ನೂ ಪ್ರಕಟಿಸಲಿಲ್ಲ.
ಅಧಿಕಾರಿಗಳ ನಿರುತ್ಸಾಹ
230 ಲಿಖಿತ ಪ್ರಶ್ನೆಗಳಲ್ಲಿ 84 ಪ್ರಶ್ನೆಗಳಿಗೆ ಮಾತ್ರ ಉತ್ತರ ಬಂದಿದ್ದವು, ಕಳೆದ ಶುಕ್ರವಾರವೇ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಆದೇಶ ಮಾಡಿದ್ದರೂ, ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳು ನಿರುತ್ಸಾಹ ತೋರಿದ್ದಾರೆ.
ಶಾಸಕರಿಗಾಗಿ ಸದನ ಇದೆಯೇ ಹೊರತು ಮಂತ್ರಿಗಳಿಗಲ್ಲ, ಪ್ರಶ್ನೆಗಳಲ್ಲದೆ, ಗಮನ ಸೆಳೆಯುವ ಪ್ರಸ್ತಾವಗಳಿಗೂ ಉತ್ತರ ನೀಡುತ್ತಿಲ್ಲ, ಸದನದಲ್ಲಿ ಉಪಸ್ಥಿತರಿರುವ ಸಚಿವರೂ ಉತ್ತರ ನೀಡಲು ಸಿದ್ಧ ಇರುವುದಿಲ್ಲ, ಇನ್ನುಳಿದವರು ಕಲಾಪ ಪಟ್ಟಿಯನ್ನೇ ನೋಡಿಲ್ಲವೇನೋ ಎನಿಸುತ್ತದೆ.
ಇಂತಹ ಸ್ಥಿತಿಯಲ್ಲಿ ಸದನ ನಡೆಸುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿ ಸಭಾಧ್ಯಕ್ಷರೇ ಸಭಾತ್ಯಾಗ ಮಾಡಿದರು.
ಸರ್ಕಾರ ಸತ್ತು ಹೋಗಿದೆ
ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ಸದಸ್ಯರು, ಮುಖ್ಯಮಂತ್ರಿ ಕುರ್ಚಿ ಕಚ್ಚಾಟದಲ್ಲಿ ಸರ್ಕಾರ ಸತ್ತು ಹೋಗಿದೆ, ಇದಕ್ಕೆ ತಿಥಿ ಮಾಡುವುದಷ್ಟೇ ಉಳಿದಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ನಾಯಕತ್ವ ಕಚ್ಚಾಟದಲ್ಲಿ ಅಧಿಕಾರಿಗಳು ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ.
ಮಂತ್ರಿಗಳು ಯಾರ ಪರ, ಯಾರ ವಿರುದ್ಧ ಎನ್ನುವುದರಲ್ಲೇ ಕಾಲ ಕಳೆದು ತಮ್ಮ ಇಲಾಖೆ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ, ಅವರಿಗೂ ಕೆಲಸ ಮಾಡುವ ಮನಸ್ಸಿಲ್ಲ, ಸಭಾಧ್ಯಕ್ಷರು ಮಾಡಿರುವ ಆದೇಶಗಳನ್ನೂ ಗಾಳಿಗೆ ತೂರಿದ್ದಾರೆ.
ಸದನ ಏಕೆ ನಡೆಸುತ್ತೀರಿ
ಸಿದ್ದರಾಮಯ್ಯ ಮತ್ತು ಸಚಿವರುಗಳಿಗೆ ಸದನಕ್ಕೆ ಗೌರವ ಕೊಡುವ ಕಿಂಚಿತ್ತೂ ಕಾಳಜಿ ಇಲ್ಲ, ಸದಸ್ಯರ ಪ್ರಸ್ತಾವಳಿಗೆ ಉತ್ತರ ಇಲ್ಲ ಎಂದ ಮೇಲೆ ಸದನ ಏಕೆ ನಡೆಸುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ನಾವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ, ಅದರಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನುಣುಚಿಕೊಂಡಿದ್ದಾರೆ.
ಪ್ರತಿದಿನ ಕೋಟ್ಯಂತರ ವೆಚ್ಚ ಮಾಡಿ ಸದನ ನಡೆಸುತ್ತಿದ್ದೀರಿ, ಸರ್ಕಾರಕ್ಕೇ ಅಧಿವೇಶನ ಬೇಡವೆಂದ ಮೇಲೆ ಸಮಾಪ್ತಿಗೊಳಿಸಿ ಎಂದು ಆಗ್ರಹಿಸಿದರು.

