ಬಹಿರಂಗ ಹೇಳಿಕೆ ನೀಡುವ ಶಾಸಕರ ವಿರುದ್ಧ ಶಿಸ್ತು ಕ್ರಮ:ಶಿವಕುಮಾರ್
ಬೆಂಗಳೂರು:ಸಂಪುಟ ಪುನರ್ ರಚನೆಗೆ ಆಗ್ರಹಿಸಿ ಬಹಿರಂಗ ಹೇಳಿಕೆಗಳನ್ನು ನೀಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಎಚ್ಚರಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪಿಲ್ಲ, ಮಂತ್ರಿ ಸ್ಥಾನ ಕೇಳುವುದಕ್ಕೂ ನಮ್ಮ ಅಭ್ಯಂತರ ಇಲ್ಲ, ಆದರೆ, ಹಾದಿ ಬೀದಿಯಲ್ಲಿ ಈ ಸಂಬಂಧ ಹೇಳಿಕೆ ನೀಡಿದರೆ ಪಕ್ಷ ಕಠಿಣ ತೀರ್ಮಾನ ಕೈಗೊಳ್ಳುತ್ತದೆ.
ದೆಹಲಿಯಲ್ಲಿ ಬಿಡಾರ
ಮಂತ್ರಿ ಸ್ಥಾನಕ್ಕೆ ಒತ್ತಾಯಿಸಿ ದೆಹಲಿಯಲ್ಲಿ ಬಿಡಾರ ಹೂಡಿರುವ ಶಾಸಕರ ಭವಿಷ್ಯ ಪಕ್ಷದಲ್ಲಿದೆಯೇ ಹೊರತು ಮಾಧ್ಯಮದಿಂದಲ್ಲ.
ಮಾಧ್ಯಮಗಳಲ್ಲಿ ನಾಯಕರಾಗಲು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ, ನಿಮ್ಮ ಭವಿಷ್ಯ ಅಲ್ಲಿಲ್ಲ, ಪಕ್ಷದಲ್ಲಿದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಕೆಲವು ಶಾಸಕರು ದೆಹಲಿಗೆ ತೆರಳುವುದಕ್ಕೂ ಮುನ್ನ ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ್ದಾರೆ, ಅವರಿಗೆ ಮುಖ್ಯಮಂತ್ರಿ ಏನೋ ಹೇಳಿದ್ದಾರೆ.
ಚುನಾವಣೆ ಮಾಡೋಣ
ಇದು ಸಂಪುಟ ಪುನರ್ ರಚನೆಗೆ ಕೇಳುವ ಸಮಯ ಅಲ್ಲ, ಮೊದಲು ಚುನಾವಣೆ ಮಾಡೋಣ, ಮಂತ್ರಿಗಳಾಗಬಾರದು ಎಂಬುದೇನಿಲ್ಲ, ನಮ್ಮ ನಾಯಕರು ಪಂಚರಾಜ್ಯ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಇಂತಹ ವೇಳೆ ಮಂತ್ರಿ ಸ್ಥಾನ ಕೇಳಿ ದೆಹಲಿಗೆ ತೆರಳುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಸುದ್ದಿಗಾರರ ಭೇಟಿಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುಮಾರು 30 ನಿಮಿಷಗಳ ಕಾಲ ಮುಖಾಮುಖಿ ಚರ್ಚೆ ನಡೆಸಿದರು.
ಮಾತುಕತೆ ವೇಳೆ ಅಧಿಕಾರ ಹಸ್ತಾಂತರ ಕುರಿತ ವಿಷಯ ಬಗೆಹರಿಯುವವರೆಗೂ ಸಂಪುಟ ಪುನರ್ ರಚನೆಗೆ ಅವಕಾಶ ನೀಡಬಾರದು ಎಂದು ಖರ್ಗೆ ಅವರಲ್ಲಿ ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಅಧಿಕಾರ ಹಸ್ತಾಂತರಕ್ಕೆ ಮುಂದಾಗುತ್ತಿಲ್ಲ
ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ಬರುವ ಮೇ 20ಕ್ಕೆ ಮೂರು ವರ್ಷ ಪೂರ್ಣಗೊಳ್ಳಲಿದೆ, ಅವರು ತಮಗೆ ಕೊಟ್ಟ ಭರವಸೆಯಂತೆ ಅಧಿಕಾರ ಹಸ್ತಾಂತರ ಮಾಡಲು ಮುಂದಾಗುತ್ತಿಲ್ಲ.
ನೀವು ಮಧ್ಯಪ್ರವೇಶ ಮಾಡಿ, ನನಗೆ ಅಧಿಕಾರ ಕೊಡಿಸಿ, ಅಲ್ಲಿಯವರೆಗೂ ಸಿದ್ದರಾಮಯ್ಯ ಯಾವುದೇ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರಂತೆ.
ಇದೇ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕೆಲವು ಅಲ್ಪಸಂಖ್ಯಾತ ನಾಯಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದೂ ಸೇರಿದಂತೆ ಕೆಲವು ಮಾಹಿತಿಗಳನ್ನು ಖರ್ಗೆ ಅವರಿಗೆ ಶಿವಕುಮಾರ್ ನೀಡಿದ್ದಾರೆ.


