ಬೆಂಗಳೂರು:ಹಿಂದಿ ಸೇರಿದಂತೆ ಎಸ್ಎಸ್ಎಲ್ಸಿ ತೃತೀಯ ಭಾಷೆ ಪರೀಕ್ಷೆಯಲ್ಲಿ ಗ್ರೇಡ್ ಬದಲಿಗೆ ಅಂಕ ನೀಡುವ ಪದ್ಧತಿಯನ್ನೇ ಮುಂದುವರೆಸುವಂತೆ ರಾಜ್ಯ ಹೈಕೋರ್ಟ್ ಇಂದಿಲ್ಲಿ ಮಹತ್ವದ ಆದೇಶ ನೀಡಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಏಪ್ರಿಲ್ 24ಕ್ಕೆ ಪ್ರಕಟಿಸಲು ಸಿದ್ಧತೆ ನಡೆಸಿತ್ತು.
ಫಲಿತಾಂಶ ವಿಳಂಬ ಸಾಧ್ಯತೆ
ನ್ಯಾಯಾಲಯದ ಈ ಆದೇಶದ ಹಿನ್ನೆಲೆಯಲ್ಲಿ ಫಲಿತಾಂಶ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಗ್ರೇಡ್ ಬದಲಿಗೆ ಅಂಕ ನೀಡುವ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್, ಪ್ರಸಕ್ತ ಶೈಕ್ಷಣಿಕ ಸಾಲಿಗೆ ಅಂಕ ಪದ್ಧತಿಯನ್ನೇ ಮುಂದುವರೆಸುವಂತೆ ಸೂಚಿಸಿದೆ.
ಸರ್ಕಾರದ ನಿಲುವಿನ ಬಗ್ಗೆ ಕಿಡಿಕಾರಿದ ಪೀಠ, ಹಿಂದಿ ಭಾಷೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣ ಆಗುತ್ತಾರೆ ಎಂಬ ಕಾರಣಕ್ಕೆ ಅಂಕ ಬದಲಿಗೆ ಗ್ರೇಡ್ ನೀಡುವುದು ಸರಿಯಲ್ಲ, ಹಾಗಿದ್ದರೆ, ಪರೀಕ್ಷೆ ಬರೆದ ಎಲ್ಲರನ್ನೂ ತೇರ್ಗಡೆ ಮಾಡಿ ಎಂದು ಖಾರವಾಗಿ ಹೇಳಿತು.
ಸೂಕ್ತ ನಿಯಮ ರಚಿಸಿ
ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗುವುದಕ್ಕೂ ಮುನ್ನವೇ ಸರ್ಕಾರ ಸೂಕ್ತ ತಿದ್ದುಪಡಿ ನಿಯಮಗಳನ್ನು ರಚಿಸಿ ಪ್ರಕಟಿಸಬೇಕಿತ್ತು.
ಆದರೆ, ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುವ ಸಮಯದಲ್ಲಿ ಸರ್ಕಾರದ ಈ ನಿರ್ಧಾರ ಸರಿಯಲ್ಲ.
2025-26 ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಂಕ ನೀಡುವುದನ್ನೇ ಮುಂದುವರೆಸಿ, ಬೇಕಿದ್ದರೆ 2026-27ನೇ ಸಾಲಿಗೆ ಪರೀಕ್ಷಾ ವೇಳಾಪಟ್ಟಿ ಪ್ರಕಟಕ್ಕೂ ಮುನ್ನವೇ ನಿಯಮಗಳನ್ನು ಜಾರಿಗೆ ತನ್ನಿ ಎಂದು ನ್ಯಾಯಪೀಠ ಸೂಚಿಸಿತು.
ಪಿಐಎಲ್ ವಜಾಗೊಂಡಿದೆ
ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ವಿಭಾಗೀಯ ಪೀಠದ ಮುಂದೆ ಸಲ್ಲಿಸಿದ್ದ ಪಿಐಎಲ್ ವಜಾಗೊಂಡಿದೆ.
ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ, ಇದರಿಂದ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಸೂಕ್ತ ತಿದ್ದುಪಡಿಯೊಂದಿಗೆ ನಿಯಮ ರೂಪಿಸಲು ಸರ್ಕಾರ ಕರಡು ಸಿದ್ಧಪಡಿಸಿ ಅಂಕಗಳ ಬದಲು ಗ್ರೇಡ್ ನೀಡಲಾಗುತ್ತಿದೆ ಎಂದು ವಾದ ಮಂಡಿಸಿದರು.
ಮಧ್ಯೆಪ್ರವೇಶಿಸಿದ ಪೀಠ, ಪರೀಕ್ಷೆ ಅಧಿಸೂಚನೆ ಹೊರಡುವುದಕ್ಕೂ ಮುನ್ನವೇ ಗ್ರೇಡ್ ಪದ್ಧತಿ ಜಾರಿಗೊಳಿಸಬೇಕಿತ್ತು, ಈಗ ಅನುಷ್ಟಾನ ಮಾಡುತ್ತಿದ್ದೀರಿ.
ಪರೀಕ್ಷೆಯನ್ನೇ ರದ್ದು ಮಾಡಿ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 83ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ, ಪರೀಕ್ಷೆಯನ್ನೇ ರದ್ದು ಮಾಡಿ ಎಂದು ಪೀಠ ಸಲಹೆ ನೀಡಿತು.
ಸೂಕ್ತ ನಿಯಮಗಳನ್ನು ಮುಂದಿನ ಸಾಲಿಗೆ ತಂದು ಅಂಕದ ಬದಲಿಗೆ ಗ್ರೇಡ್ ನೀಡಿ ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರೆಸುವಂತೆ ಸೂಚಿಸಿ ಅರ್ಜಿ ಇತ್ಯರ್ಥಗೊಳಿಸಲಾಯಿತು.


