ಬೆಂಗಳೂರು:ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದಾರೆ.
ಗುರುವಾರ ಮಧ್ಯಾನ್ಹ ತಮ್ಮ ಸಹೋದ್ಯೋಗಿಗಳೊಂದಿಗೆ ಲೋಕಭವನಕ್ಕೆ ತೆರಳಿದ ಮುಖ್ಯಮಂತ್ರಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಪತ್ರ ಸ್ವೀಕರಿಸಿದ ಕಾರ್ಯದರ್ಶಿ, ರಾಜೀನಾಮೆ ವಿಷಯವನ್ನು ಇಂದೋರ್ ಪ್ರವಾಸದಲ್ಲಿರುವ ರಾಜ್ಯಪಾಲರ ಗಮನಕ್ಕೆ ತಂದು, ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಾಜ್ಯಪಾಲರ ಅನುಪಸ್ಥಿತಿ
ರಾಜ್ಯಪಾಲರು ಬುಧವಾರ ತಡರಾತ್ರಿ ಮುಂಬೈಗೆ ತೆರಳಿ ಅಲ್ಲಿನ ಲೋಕಭವನದಲ್ಲಿ ತಂಗಿ ಇಂದು ಬೆಳಗ್ಗೆ ಇಂದೋರ್ಗೆ ಪ್ರಯಾಣಿಸಿದ್ದಾರೆ.
ರಾಜ್ಯಪಾಲರ ಹಠಾತ್ ಪ್ರವಾಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ನಲ್ಲಿ ಅನೇಕ ವಂದತಿಗಳು ಕೇಳಿಬಂದವಾದರೂ, ಪಕ್ಷದ ವರಿಷ್ಠರ ಆದೇಶದಂತೆ ಸಿದ್ದರಾಮಯ್ಯ ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿ ಹಿಂತಿರುಗಿದರು.
ರಾಜೀನಾಮೆ ಪತ್ರ ನೀಡುವುದಕ್ಕೂ ಮುನ್ನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ ಮತ್ತು ಕಾವೇರಿಯಲ್ಲಿ ಅನೇಕ ನಾಟಕೀಯ ಬೆಳವಣಿಗೆಗಳು ನಡೆದವು.
ಶಿವಕುಮಾರ್ ಜೊತೆ ಚರ್ಚೆ
ತಮ್ಮ ಸಹೋದ್ಯೋಗಿಗಳಿಗೆ ಉಪಹಾರ ಕೂಟ ಏರ್ಪಡಿಸಿದ್ದ ಮುಖ್ಯಮಂತ್ರಿ, ಅದಕ್ಕೂ ಮುನ್ನ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಸುಮಾರು 30 ನಿಮಿಷ ಮುಖಾಮುಖಿ ಚರ್ಚೆ ನಡೆಸಿದರು.
ಸಿದ್ದರಾಮಯ್ಯ ಭೇಟಿ ಮಾಡುತ್ತಿದ್ದಂತೆ ಅವರನ್ನು ಶಿವಕುಮಾರ್ ಅಪ್ಪಿಕೊಂಡು, ಕಾಲಿಗೆರಗಿ ಆಶೀರ್ವಾದ ಪಡೆದರು.
ನಂತರ ಉಪಹಾರ ಕೂಟದಲ್ಲಿ ಸಿದ್ದರಾಮಯ್ಯ ಸ್ವಯಂ ಪ್ರೇರಿತರಾಗಿ ಪಕ್ಷದ ಆದೇಶದ ಮೇರೆಗೆ ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಿದ್ದೇನೆ.

ಅಸಮಾಧಾನ ಇಲ್ಲ
ಈ ಬೆಳವಣಿಗೆಯಿಂದ ನನಗೆ ಯಾವುದೇ ಅಸಮಾಧಾನ ಇಲ್ಲ, ಮನಃಪೂರ್ವಕವಾಗಿಯೇ ಅಧಿಕಾರದಿಂದ ಕೆಳಗಿಯುತ್ತಿದ್ದೇನೆ, ಎನ್ನುತ್ತಾ ಪಕ್ಕದಲ್ಲೇ ಕುಳಿತಿದ್ದ ಶಿವಕುಮಾರ್ ಹೆಗಲು ತಟ್ಟಿ ಒಳ್ಳೆಯದಾಗಲಿ ಎನ್ನುವ ಮೂಲಕ ಪರೋಕ್ಷವಾಗಿ, ಇವರೇ ಮುಂದಿನ ನಮ್ಮ ನಾಯಕರು ಎಂಬುದನ್ನು ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿದರು.
ನಾನು ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ದೆಹಲಿ ವರಿಷ್ಠರ ಮುಂದೆ ಆಗಿದ್ದ ಒಪ್ಪಂದದಂತೆ ಅಧಿಕಾರದಿಂದ ಕೆಳಗಿಳಿಯುತ್ತಿದ್ದೇನೆ.
ವರಿಷ್ಠರು ಸೂಚಿಸದ್ದನ್ನು ಪಾಲಿಸುವುದು ನನ್ನ ಕರ್ತವ್ಯ ಎಂದರಾದರೂ, ತಮ್ಮ ನಂತರ ಯಾರು ಮುಖ್ಯಮಂತ್ರಿ ಎಂಬುದನ್ನು ಬಹಿರಂಗ ಪಡಿಸಲಿಲ್ಲ.
ಮುಂದಿನ ನಾಯಕನನ್ನು ನಿರ್ಧರಿಸುತ್ತೇವೆ
ದೆಹಲಿಯಲ್ಲಿ ಮಂಗಳವಾರ ನಡೆದ ಮಾತುಕತೆ ವೇಳೆ, ನೀವು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ, ನಂತರ ಯಾರು ನಾಯಕರು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂಬುದಾಗಿ ತಿಳಿಸಿದ್ದಾರೆ ಎಂದರು.
ಸಿದ್ದರಾಮಯ್ಯ ರಾಜೀನಾಮೆ ಪದ ಬಳಸುತ್ತಿದ್ದಂತೆ ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಬಾವುಕರಾದರು.
ಉಪಹಾರದ ನಂತರ ಕಾವೇರಿ ನಿವಾಸದಲ್ಲಿ ಸಚಿವರು, ಶಾಸಕರು ಮತ್ತು ಮುಖಂಡರೊಂದಿಗೆ ಸಮಾಲೋಚಿಸಿ, ಮಧ್ಯಾನ್ಹ ರಾಜೀನಾಮೆ ನೀಡಲು ಲೋಕಭವನಕ್ಕೆ ತೆರಳಲು ಸಜ್ಜಾದರು.
ಅಭಿಮಾನಿಗಳ ಕೋರಿಕೆ
ಈ ವೇಳೆ ಕೆಲವು ಶಾಸಕರು ಮತ್ತು ಅಭಿಮಾನಿಗಳು ಬಾಗಿಲಲ್ಲಿ ಅಡ್ಡ ನಿಂತು ’ನೀವು ರಾಜೀನಾಮೆ ನೀಡಬೇಡಿ’ ಎಂದು ಬೇಡಿಕೊಂಡರು.
ಆದರೆ, ಸಿದ್ದರಾಮಯ್ಯ ಏನನ್ನೂ ಪ್ರತಿಕ್ರಿಯಿಸದೆ, ಅವರನ್ನು ದೂರ ಸರಿಸಿ ಲೋಕಭವನಕ್ಕೆ ತೆರಳಿದರು.
ವರಿಷ್ಠರ ಭೇಟಿಗೆ ದೆಹಲಿಗೆ
ಲೋಕಭವನದಿಂದ ಹಿಂತಿರುಗಿ, ಪತ್ರಿಕಾಗೋಷ್ಠಿ ನಡೆಸಿದ ತಕ್ಷಣವೇ ಪಕ್ಷದ ವರಿಷ್ಠರ ಭೇಟಿಗಾಗಿ ದೆಹಲಿಗೆ ದೌಢಾಯಿಸಿದರು.
ಈ ಮಧ್ಯೆ, ಸಿದ್ದರಾಮಯ್ಯ ತಮ್ಮ ರಾಜೀನಾಮೆ ಪತ್ರ ನೀಡುತ್ತಿದ್ದಂತೆ ಉಪಮುಖ್ಯಮಂತ್ರಿಗಳ ಕಾರ್ಯಾಲಯ ಐದಾರು ಪುಟಗಳ ವ್ಯಕ್ತಿ ಪರಿಚಯ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿತು.


