ಬೆಂಗಳೂರು:ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದಿಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಲೋಕಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿವಕುಮಾರ್ ಸೇರಿದಂತೆ 14 ಮಂದಿಗೆ ರಾಜ್ಯಪಾಲ ಥಾವರ್ಚಂದ್ ಗಹ್ಲೋಟ್ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಭೋದಿಸಿದರು.
ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ
ಶಿವಕುಮಾರ್ ತಾವು ನಂಬಿರುವ ವೀರಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಹಾಗೂ ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಡಾ.ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇವರೊಂದಿಗೆ ಕೆ.ಎಚ್.ಮುನಿಯಪ್ಪ (ಎಸ್ಸಿ), ಕೆ.ಜೆ.ಜಾರ್ಜ್ (ಕ್ರಿಶ್ಚಿಯನ್), ಎಂ.ಬಿ.ಪಾಟೀಲ್ (ಲಿಂಗಾಯತ), ರಾಮಲಿಂಗಾರೆಡ್ಡಿ (ರೆಡ್ಡಿ ಒಕ್ಕಲಿಗ), ಸತೀಶ್ ಜಾರಕಿಹೊಳಿ (ಎಸ್ಟಿ), ಕೃಷ್ಣಬೈರೇಗೌಡ (ಒಕ್ಕಲಿಗ).
ಪ್ರಿಯಾಂಕ್ ಖರ್ಗೆ (ಎಸ್ಸಿ), ಯು.ಟಿ.ಖಾದರ್ (ಮುಸ್ಲೀಂ), ಈಶ್ವರ್ ಖಂಡ್ರೆ (ಲಿಂಗಾಯತ), ಯತೀಂದ್ರ ಸಿದ್ದರಾಮಯ್ಯ ಹಾಗೂ ಬೈರತಿ ಸುರೇಶ್ (ಕುರುಬ) ಅಲ್ಲದೆ, ಡಾ.ಶರಣಪ್ರಕಾಶ್ ಪಾಟೀಲ್ (ಲಿಂಗಾಯತ) ಮಂತ್ರಿಗಳಾಗಿ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದರು.
ಯತೀಂದ್ರ ಮೊದಲ ಬಾರಿ ಸಚಿವ
ಯತೀಂದ್ರ ಸಿದ್ದರಾಮಯ್ಯ ಹೊರತುಪಡಿಸಿ ಉಳಿದ 12 ಮಂದಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರುಗಳಾಗಿ ಕಾರ್ಯನಿರ್ವಹಿಸಿದವರು.
ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಶಿವಕುಮಾರ್ ಸಂಪುಟದಲ್ಲಿ ಮಂತ್ರಿಯಾದರು.
ಯತೀಂದ್ರ ಸಿದ್ದರಾಮಯ್ಯ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಮೊದಲ ಬಾರಿಗೆ ಮಂತ್ರಿಯಾದವರು.
14 ಸಚಿವರ ಮಂತ್ರಿಮಂಡಲ
ಶಿವಕುಮಾರ್ ತಮ್ಮನ್ನೂ ಸೇರಿದಂತೆ 14 ಸಚಿವರ ಮಂತ್ರಿಮಂಡಲದ ಸರ್ಕಾರ ರಚಿಸಿಕೊಂಡಿದ್ದಾರೆ.
ಇನ್ನು ಉಳಿದ 20 ಸ್ಥಾನಗಳನ್ನು ರಾಜ್ಯಸಭಾ ಮತ್ತು ವಿಧಾನ ಪರಿಷತ್ ಚುನಾವಣೆ ನಂತರ ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ.
ಪ್ರಮಾಣವಚನ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಆಡಳಿತವಿರುವ ಕೇರಳಂ, ತೆಲಂಗಾಣ, ಹಿಮಾಚಲಪ್ರದೇಶದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು.
ಹಲವು ಶ್ರೀಗಳ ಉಪಸ್ಥಿತಿ
ರಾಜ್ಯ ಕಾಂಗ್ರೆಸ್ ಸಂಸದರು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು, ಹಲವು ಸಮುದಾಯದ ಶ್ರೀಗಳು, ಕನಕಪುರ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ ಸಂಘಟನೆ ಮುಖಂಡರು, ಹಿಂದುಳಿದ ವರ್ಗಗಳ ಮುಖಂಡರು, ಸ್ತ್ರೀಶಕ್ತಿ ಸಂಘಗಳ ಪ್ರತಿನಿಧಿಗಳು.
ಚಲನಚಿತ್ರ, ನ್ಯಾಯಾಂಗ, ಕ್ರೀಡಾಕ್ಷೇತ್ರ, ರಂಗಭೂಮಿ ಕಲಾವಿದರು, ಸಾಹಿತಿಗಳು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಹೋಟೆಲ್ ಉದ್ಯಮಿಗಳು, ಯುವ ಮುಖಂಡರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರು ಪಾಲ್ಗೊಂಡಿದ್ದರು.


