ನವದೆಹಲಿ:ಕೃಷ್ಣರಾಜ ಸಾಗರ (ಕೆಆರ್ಎಸ್) ಅಣೆಕಟ್ಟೆಗೆ ಸಮಾನಾಂತರವಾಗಿ ಮೇಕೆದಾಟು ಬಳಿ ಜಲಾಶಯ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಮಹತ್ವದ ಚರ್ಚೆ ನಡೆಸಿರುವುದು ಬೆಳಕಿಗೆ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಕರೆದಿದ್ದ ನೀತಿ ಆಯೋಗದ ಸಭೆ ನಂತರ ಉಭಯ ನಾಯಕರು, ಜಲಾಶಯ ನಿರ್ಮಾಣದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿರುವುದು ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ನದಿ ಪಾತ್ರದ ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಯೋಜನೆಯಿಂದ ಆಗಲಿರುವ ಲಾಭ
ನೀತಿ ಆಯೋಗದ ಸಭೆ ನಂತರ ಶಿವಕುಮಾರ್ ಅವರೇ ವಿಜಯ್ ಬಳಿ ತೆರಳಿ ಇಬ್ಬರೂ ಒಂದೆಡೆ ಕುಳಿತ ವೇಳೆ, ನಮ್ಮ ಮುಖ್ಯಮಂತ್ರಿ, ಯೋಜನೆ ಸಾಕಾರದಿಂದ ಆಗಲಿರುವ ಲಾಭ ಕುರಿತು ಪೂರ್ಣ ಮಾಹಿತಿ ನೀಡಿದರು.
ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಜಲಾಶಯ ನಿರ್ಮಾಣದಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಲಾಭವಾಗಲಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದ ಸಂದರ್ಭದಲ್ಲಿ ಸಮುದ್ರಕ್ಕೆ ಪೋಲಾಗುವ ನೀರನ್ನು ತಡೆಹಿಡಿದು, ಕುಡಿಯಲು ಮಾತ್ರ ಬಳಸುತ್ತೇವೆ.
ತಮಿಳುನಾಡು ರೈತರಿಗೆ ಅನುಕೂಲ
ಸಂಕಷ್ಟ ಸಂದರ್ಭದಲ್ಲಿ ಹಿಡಿದಿಟ್ಟ ನೀರು ತಮಿಳುನಾಡು ರೈತರಿಗೆ ಅನುಕೂಲವಾಗಲಿದೆ, ನಾವು ಯಾವುದೇ ಕಾರಣಕ್ಕೂ ಕೃಷಿಗೆ ಬಳಸುವುದಿಲ್ಲ, ವಾರ್ಷಿಕವಾಗಿ ನಿಮಗೆ ನಿಗದಿ ಪಡಿಸಿರುವ ನೀರಿನ ಹರಿವಿನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಮೇಕೆದಾಟು ಯೋಜನೆಗೆ ಈಗಾಗಲೇ ಹಸಿರು ನಿಶಾನೆ ತೋರಿದೆ, ಇದುವರೆಗೂ ತಮಿಳುನಾಡಿನಲ್ಲಿ ಆಳ್ವಿಕೆಯಲ್ಲಿದ್ದ ರಾಜಕೀಯ ಪಕ್ಷಗಳು ಕಾವೇರಿ ವಿಷಯವನ್ನು ರಾಜಕೀಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿವೆ.
ರೈತರಿಗಾಗಿ ಮೇಕೆದಾಟು ಯೋಜನೆ ಬಗ್ಗೆ ಮತ್ತೊಮ್ಮೆ ನಿಮ್ಮ ನಿರ್ಧಾರ ಪುನರ್ ಪರಿಶೀಲಿಸಿ ಎಂದು ವಿಜಯ್ ಅವರಿಗೆ ಶಿವಕುಮಾರ್ ಮನವಿ ಮಾಡಿದ್ದಾರೆ.
ರೈತರೊಂದಿಗೆ ಸಮಾಲೋಚನೆ
ಶಿವಕುಮಾರ್ ಮಾಹಿತಿ ಆಲಿಸಿದ ವಿಜಯ್, ಯಾವುದೇ ಸ್ಪಷ್ಟ ಭರವಸೆ ನೀಡದಿದ್ದರೂ, ಕಾನೂನು ತಜ್ಞರು ಮತ್ತು ರೈತರೊಂದಿಗೆ ಸಮಾಲೋಚಿಸಿ ನಂತರ ತಮ್ಮ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದ್ದರೂ, ಇದನ್ನು ಉಭಯ ಸರ್ಕಾರಗಳು ಅಧಿಕೃತಗೊಳಿಸಿಲ್ಲ.
ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾವೇರಿ ವಿಚಾರ ಕುರಿತು ಶಿವಕುಮಾರ್ ಹಾಗೂ ವಿಜಯ್ ಚರ್ಚೆ ಮಾಡಿರುವುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.
ವಿಜಯ್ ದಕ್ಷಿಣ ಕನ್ನಡ ಪ್ರವಾಸ
ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ವಿಜಯ್ ಕಳೆದ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ದಿನದ ಪ್ರವಾಸ ಕೈಗೊಂಡಿದ್ದರು.
ವಿಜಯ್ ಭೇಟಿ ವಿರೋಧಿಸಿ ಸ್ಥಳೀಯ ಕನ್ನಡಪರ ಸಂಘಟನೆಗಳು ಬೀದಿಗಿಳಿದಿದ್ದನ್ನು ಪ್ರಸ್ತಾಪಿಸಿದ ಖಾದರ್, ದೆಹಲಿಯಲ್ಲಿ ಮಾತುಕತೆ ನಡೆದಿರುವುದನ್ನು ಬಹಿರಂಗ ಪಡಿಸಿದ್ದಲ್ಲದೆ, ಮೇಕೆದಾಟು ವಿಚಾರದಲ್ಲಿ ಶಿವಕುಮಾರ್ ಜೊತೆ ಒಗ್ಗಟ್ಟಿನಲ್ಲಿರುವುದಾಗಿ ತಿಳಿಸಿದ್ದಾರೆ ಎಂದರು.


