ಬೆಂಗಳೂರು:ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಹಾಗೂ ಮನೆಗಳನ್ನು ಹೊಂದಿರುವ ಲಕ್ಷಾಂತರ ಕುಟುಂಬಗಳಿಗೆ ’ಬಿ’ ಖಾತಾದಿಂದ ’ಎ’ ಖಾತಾ ನೀಡುವ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.
’ಬಿ’ ಖಾತಾದಿಂದ ’ಎ’ ಖಾತಾ ವರ್ಗಾವಣೆಗೆ ಇದ್ದ ಆತಂಕ ಮತ್ತು ಗೊಂದಲ ನಿವಾರಣೆಗೆ ಸರ್ಕಾರ ಇಂದು ವಿಧಾನಸಭೆಯಲ್ಲಿ ಕರ್ನಾಟಕ ನಗರಪಾಲಿಕೆಗಳ ವಿಧೇಯಕ 2026ಕ್ಕೆ ಅಂಗೀಕಾರ ಪಡೆದುಕೊಂಡಿತು.
ಬೆಂಗಳೂರಿನಲ್ಲಿ ಯಶಸ್ವಿ ಜಾರಿ
ಈ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯದ ಎಲ್ಲಾ ನಗರಪಾಲಿಕೆಗಳು, ಪುರಸಭೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ವಿಸ್ತರಿಸಲಾಗುತ್ತಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕೃಷ್ಣಬೈರೇಗೌಡ ವಿಧೇಯಕ ಮಂಡಿಸಿ, ರಾಜ್ಯಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಆಸ್ತಿ ಒಡೆತನದ ಹಕ್ಕು ನೀಡಲು ಈ ತಿದ್ದುಪಡಿ ಸಹಕಾರಿ ಆಗಲಿದೆ ಎಂದು ವಿವರಿಸಿ ಅಂಗೀಕಾರ ಪಡೆದರು.
ಸರ್ಕಾರದ ಈ ನಿರ್ಧಾರದಿಂದ ರಾಜ್ಯಾದ್ಯಂತ ಕಳೆದ 30-40 ವರ್ಷಗಳಿಂದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಹಾಗೂ ಮನೆಗಳನ್ನು ಹೊಂದಿದ ’ಬಿ’ ಖಾತಾದಾರರು ದೊಡ್ಡ ಸಂಕಷ್ಟದಿಂದ ಹೊರಬಂದಂತಾಗಿದೆ ಎಂದು ಬಣ್ಣಿಸಿದರು.
ಆಸ್ತಿ ಮಾಲೀಕತ್ವ ಹಕ್ಕು
ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಸಂಪೂರ್ಣ ಮಾಲೀಕತ್ವದ ಹಕ್ಕು ಕಲ್ಪಿಸಿ ಪಕ್ಕಾ ’ಎ’ ಖಾತಾ ನೀಡುವ ತೀರ್ಮಾನ ಕೈಗೊಂಡಿದ್ದೇವೆ.
ರಾಜ್ಯದಲ್ಲಿ ಪ್ರತಿಯೊಬ್ಬ ಆಸ್ತಿ ಮಾಲೀಕನಿಗೂ ಆಸ್ತಿ ಭದ್ರತೆ ನೀಡುವುದು ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭೂಗ್ಯಾರಂಟಿ ಸಂಕಲ್ಪವಾಗಿದೆ.
ಅನಧಿಕೃತ ಬಡಾವಣೆಗಳ ಮೂಲಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರಪಾಲಿಕೆಗಳ ಕಾಯಿದೆ ನಿಯಮ 284ಕ್ಕೆ ತಿದ್ದಪಡಿ ತರಲಾಗುವುದು ಎಂದರು.
ಹಲವು ಅನಧಿಕೃತ ಬಡಾವಣೆ
ರಾಜ್ಯಾದ್ಯಂತ ನಗರ ಭಾಗಗಳಲ್ಲಿ ಹಲವಾರು ಅನಧಿಕೃತ ಬಡಾವಣೆಗಳು ತಲೆ ಎತ್ತಿವೆ, ಅಕ್ರಮ ನಡೆಯುತ್ತಿದೆ ಎಂದು ತಿಳಿದೂ ಹಿಂದಿನ ಸರ್ಕಾರಗಳು ಅಕ್ರಮಗಳ ತಡೆಗೆ ಮುಂದಾಗಲಿಲ್ಲ, ಕಾನೂನು ಕಡೆಗಣಿಸಿ ಬಡಾವಣೆ ನಿರ್ಮಿಸಬಾರದು ಎಂಬ ಸಾಮಾನ್ಯ ಪ್ರಜ್ಞೆ ಬಡಾವಣೆ ನಿರ್ಮಾಣದಾರರಿಗೂ ಇಲ್ಲದ ಕಾರಣ ಆಸ್ತಿ ಮಾಲೀಕರಿಗೆ ಹತ್ತಾರು ತೊಂದರೆಗಳು ಎದುರಾಗಿವೆ.
ಅನಧಿಕೃತವಾಗಿ ನಿರ್ಮಾಣಗೊಂಡ ಕಡೆಗಳಲ್ಲಿ ಅಗಲ ರಸ್ತೆಗಳಿಲ್ಲ, ಡಾಂಬರೀಕರಣ ಮಾಡಿಲ್ಲ, ವಿದ್ಯುತ್ ಸೌಕರ್ಯ ಕೊಟ್ಟಿಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಮಳೆ ನೀರು ಹೋಗಲು ದಾರಿ ಮಾಡಿಲ್ಲ, ಸರಿಯಾಗಿ ಸಂಪರ್ಕ ರಸ್ತೆಗಳೂ ಇಲ್ಲ.
ಅವ್ಯವಸ್ಥೆಗಳ ಆಗರಗಳನ್ನು ನಿರ್ಮಾಣ ಮಾಡಿ ಮಾಲೀಕರಿಗೆ ಸರಿಯಾಗಿ ಆಸ್ತಿ ಮಾಲೀಕತ್ವವೂ ಸಿಗದಂತಾಗಿದ್ದು, ಸಂಕಷ್ಟದಲ್ಲಿ ಸಿಲುಕಿದ್ದಾರೆ,2024ರಲ್ಲಿ ನಮ್ಮ ಸರ್ಕಾರ ಬಹಳ ಕಟುವಾದ ನಿಲುವು ತೆಗೆದುಕೊಳ್ಳಲು ಸಂಕಲ್ಪ ಮಾಡಿತ್ತು, ಅನಧಿಕೃತ ಬಡಾವಣೆಗಳಿಗೆ ಸಂಪೂರ್ಣ ವಿರಾಮ ಹಾಕಿ, ಅಕ್ರಮ ತಡೆಗಟ್ಟೋ ಕೆಲಸ ಮಾಡಿದ್ದೇವೆ.
ದಶಕಗಳ ಹಿಂದಿನ ಬಡಾವಣೆ
ದಶಕಗಳ ಹಿಂದೆ ನಿರ್ಮಾಣವಾದ ಬಡಾವಣೆಗಳ ಆಸ್ತಿ ಮಾಲೀಕರಿಗೂ ಸೂಕ್ತ ಪರಿಹಾರ ನೀಡಲು ಮುಂದಾಗಿದ್ದೇವೆ, ಅಂತಹ ಆಸ್ತಿ ಮಾಲೀಕರಿಗೆ ಬಿ ಖಾತಾ ನೀಡಲಾಗಿತ್ತು, ಎ ಖಾತಾ ನೀಡಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ, ಆದರೆ, ಎ ಖಾತಾ ಕೊಟ್ಟರೆ ಮಾತ್ರ ಅವರ ಮಾಲೀಕತ್ವದ ಗ್ಯಾರಂಟಿಗೆ ತೂಕವಿರುತ್ತದೆ ಎಂಬ ಕಾರಣಕ್ಕಾಗಿ ಇದೀಗ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವಾಗ ಬಿಡಲಾಗಿರುವ ರಸ್ತೆಗಳು ಈಗಲೂ ಮೂಲ ಜಮೀನು ಮಾಲೀಕರ ಹೆಸರಿನಲ್ಲೇ ಇವೆ, ಹೊಸ ತಿದ್ದುಪಡಿ ಪ್ರಕಾರ, ರಸ್ತೆಗಳನ್ನು ಸ್ಥಳೀಯ ನಗರಪಾಲಿಕೆ ಅಥವಾ ಮುನ್ಸಿಪಾಲಿಟಿ ದಾಖಲೆಗಳಲ್ಲಿ ’ಸಾರ್ವಜನಿಕ ರಸ್ತೆ’ ಎಂದು ಅಧಿಕೃತವಾಗಿ ಘೋಷಿಸಲು ಕಾನೂನು ಅವಕಾಶ ಸಿಗಲಿದೆ.
ಬ್ಯಾಂಕ್ಗಳಿಂದ ಸುಲಭ ಸಾಲ
ಎ-ಖಾತಾ ದೊರೆಯುವುದರಿಂದ ಆಸ್ತಿ ಮಾಲೀಕರಿಗೆ ಬ್ಯಾಂಕುಗಳಿಂದ ಸುಲಭವಾಗಿ ಗೃಹ/ಆಸ್ತಿ ಸಾಲ ಸಿಗಲಿದೆ, ಜೊತೆಗೆ ಕಟ್ಟಡ ನಕ್ಷೆ ಮಂಜೂರಾತಿ ಮತ್ತು ವಾಸಯೋಗ್ಯ ಪ್ರಮಾಣಪತ್ರ ಪಡೆಯಲು ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.
ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆ ಕಾಪಾಡುವ ಹಾಗೂ ಅವರಿಗೆ ಶಾಸನಬದ್ಧ ಹಕ್ಕು ಒದಗಿಸಲು 2026ನೇ ಸಾಲಿನ ‘ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ ಮಂಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಅಪಾರ್ಟ್ಮೆಂಟ್ ಸಂಸ್ಕೃತಿ, ನಿವಾಸಿಗಳು ಎದುರಿಸುತ್ತಿರುವ ನಿರಂತರ ಆಡಳಿತಾತ್ಮಕ ಗೊಂದಲಗಳು ಹಾಗೂ ಡೆವಲಪರ್ಗಳ ಮಿತಿಮೀರಿದ ಧೋರಣೆಗೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.


