ಕರ್ನಾಟಕ ಕರ -ಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಶಾಶ್ವತ ಮಳಿಗೆ
ನವದೆಹಲಿ: ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಭಾರತ ಅಂತರಾಷ್ಟ್ರೀಯ ವ್ಯಾಪಾರ ಮೇಳ 2023 ರ ಅಂಗವಾಗಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಕರ್ನಾಟಕ ಪೆವಿಲಿಯನ್ ಮಾದರಿಯಲ್ಲಿ ದೆಹಲಿಯಲ್ಲಿ ಶಾಶ್ವತವಾಗಿ 50 ಮಳಿಗೆಗಳನ್ನು ಒಳಗೊಂಡ ಒಂದು ಶಾಪಿಂಗ್ ಕಟ್ಟಡ ಸಂಕೀರ್ಣವನ್ನು ಆದಷ್ಟು ಬೇಗ ನಿರ್ಮಾಣ ಮಾಡುವುದಾಗಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಪ್ರಕಟಿಸಿದ್ದಾರೆ .
ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಿದ್ದ ಭಾರತ ಅಂತರಾಷ್ಟ್ರೀಯ ವ್ಯಾಪಾರ ಮೇಳ 2023 ರಲ್ಲಿ ಕರ್ನಾಟಕ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಮಾಡಿ ಮಾತನಾಡಿದರು.
ಕರ್ನಾಟಕ ಕರ-ಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ದೆಹಲಿಯಲ್ಲಿ 50 ಮಳಿಗೆಗಳನ್ನು ಶಾಶ್ವತವಾಗಿ ನಿರ್ಮಾಣ ಮಾಡಲಾಗುವುದು. ಇದರಿಂದ ಕರ್ನಾಟಕದ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಕರ್ನಾಟಕ ಪೆವಿಲಿಯನ್ ನಲ್ಲಿ 40ಕ್ಕೂ ಹೆಚ್ಚು ಮಳಿಗೆ
ಕರ್ನಾಟಕ ಪೆವಿಲಿಯನ್ ನಲ್ಲಿದ್ದ 40ಕ್ಕೂ ಹೆಚ್ಚು ಮಳಿಗೆಗಳನ್ನು ಜಯಚಂದ್ರ ಅವರು ವೀಕ್ಷಿಸಿದರು. ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿದ್ದ ಗ್ರಾಮೀಣ ಗುಡಿ ಕೈಗಾರಿಕೆ ವಸ್ತುಗಳು, ಚನ್ನಪಟ್ಟಣದ ಗೊಂಬೆಗಳು, ಕೆಎಸ್ಐಸಿ ಮೈಸೂರ್ ಸಿಲ್ಕ್ ಸೀರೆಗಳು, ಸಿರಿಧಾನ್ಯಗಳು, ಮರದಿಂದ ಮಾಡಿದ್ದ ಅಲಂಕಾರಿಕ ವಸ್ತುಗಳು, ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ತಯಾರಿಸಿದ್ದ ಉತ್ಪನ್ನಗಳು ಚರ್ಮದ ಉತ್ಪನ್ನಗಳು ಆಯುರ್ವೇದ ಔಷಧಿಗಳು, ವಿವಿಧ ಬಗೆಯ ತಿಂಡಿ-ತಿನಿಸುಗಳು ಸೇರಿದಂತೆ ಕರ್ನಾಟಕದಲ್ಲಿ ತಯಾರಿಸಿದ್ದ ವಿವಿಧ ಉತ್ಪನ್ನಗಳನ್ನು ವೀಕ್ಷಿಸಿ ಮಾರಟಗಾರರಿಗೆ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭವನ ನಿವಾಸಿ ಆಯುಕ್ತರಾದ ಎಂ.ಇಮ್ ಕೊಂಗ್ಲ ಜಮೀರ್ ಹಾಜರಿದ್ದರು.
