ಬಹುತೇಕ ಕರ್ನಾಟಕ ಬರಗಾಲಕ್ಕೆ ತುತ್ತಾಗಿದ್ದರೂ
ಕೇಂದ್ರ ಇದುವರೆಗೂ ಒಂದು ನಯಾಪೈಸೆ ನೀಡಿಲ್ಲ
ಬೆಂಗಳೂರು:ಕೇಂದ್ರ ಸರ್ಕಾರದ ಮಲತಾಯಿ ದೋರಣೆ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಫೆಬ್ರವರಿ 7ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ.
ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಕ್ಕೆ ಪರಿಹಾರ ನೀಡದಿರುವುದು ಸೇರಿದಂತೆ ಕೇಂದ್ರ ಸರ್ಕಾರ ಎಲ್ಲಾ ಹಂತದಲ್ಲೂ ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂದು ಕೇಂದ್ರದ ಗಮನ ಸೆಳೆಯಲು ಒಂದು ದಿನದ ಧರಣಿ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಜೊತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪುಟದ ಎಲ್ಲಾ ಸಹೋದ್ಯೋಗಿಗಳು ಹಾಗೂ ಕಾಂಗ್ರೆಸ್ನ ಎಲ್ಲಾ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಸಂಕಷ್ಟ ರಾಷ್ಟ್ರದ ಗಮನಕ್ಕೆ ತರಲು ಯತ್ನ
ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯವನ್ನು ಇಡೀ ರಾಷ್ಟ್ರದ ಗಮನಕ್ಕೆ ತರಲು ಮುಖ್ಯಮಂತ್ರಿ ಅವರು ಸಜ್ಜಾಗಿದ್ದಾರೆ.
ಕಾಂಗ್ರೆಸ್ನ ದೆಹಲಿ ನಾಯಕರು ಇಂದು ಬೆಳಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ ಚರ್ಚಿಸಿದ ನಂತರ, ರಾಜ್ಯ ಪ್ರವಾದಲ್ಲಿದ್ದ ಸಿದ್ದರಾಮಯ್ಯ ಅವರು, ಧರಣಿ ಮಾಡುವ ನಿರ್ಧಾರ ಕೈಗೊಂಡಿದ್ದಲ್ಲದೆ, ವಿಷಯವನ್ನು ಎಲ್ಲ ಶಾಸಕರಿಗೂ ಮುಟ್ಟಿಸುವಂತೆ ಸೂಚಿಸಿದರು.
ಕರ್ನಾಟಕದ ಬಹುತೇಕ ಭಾಗ ಬರಗಾಲಕ್ಕೆ ತುತ್ತಾಗಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ಒಂದು ನಯಾಪೈಸೆಯನ್ನೂ ನೀಡಿಲ್ಲ, ಕೋಟ್ಯಂತರ ರೂ. ಬೆಳೆ ನಷ್ಟವಾಗಿದ್ದು ರೈತರಿಗೂ ಪರಿಹಾರ ಕಲ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವಿಫಲವಾಗಿದೆ.
ಮೇಕೆದಾಟು ಅಣೆಕಟ್ಟೆಗೂ ಮಂಜೂರಾತಿ ನೀಡಿಲ್ಲ
ಕುಡಿಯುವ ನೀರು ಹಾಗೂ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಅನುಕೂಲವಾಗುವಂತೆ ಕೆಆರ್ಎಸ್ ಜಲಾಶಯಕ್ಕೆ ಸಮಾನಾಂತರವಾಗಿ ಮೇಕೆದಾಟು ಸಮೀಪ ಅಣೆಕಟ್ಟೆ ನಿರ್ಮಿಸಲು ಇದುವರೆಗೂ ಮಂಜೂರಾತಿ ನೀಡಿಲ್ಲ.
ಹದಿನೈದನೇ ಹಣಕಾಸು ಆಯೋಗ ರಾಜ್ಯಕ್ಕೆ ನಿಗದಿ ಮಾಡಿರುವ ಅನುದಾನದಲ್ಲಿ 5,495 ಕೋಟಿ ರೂ.ಗಳನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಬೆಂಗಳೂರಿನ ವರ್ತುಲ ರಸ್ತೆಗೆ ನೀಡಬೇಕಿದ್ದ ಆರು ಸಾವಿರ ಕೋಟಿ ರೂ.ಗಳನ್ನು ನೀಡಿಲ್ಲ.
ಜನರ ಮುಂದೆ ಭರವಸೆಯ ಮಹಾಪೂರವನ್ನೇ ಹರಿಸಿರುವ ಕೇಂದ್ರ, ನಂತರ ಯಾವುದೇ ಯೋಜನೆಗಳಿಗೆ ಮಂಜೂರಾತಿ ಮತ್ತು ಆರ್ಥಿಕ ನೆರವು ನೀಡಿಲ್ಲ.
ಭದ್ರಾ ಮೇಲ್ದಂಡೆ ಯೋಜನೆಗೆ ನೀಡಬೇಕಾದ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಲ್ಲ, ರಾಜ್ಯದಿಂದ ಸಂಗ್ರಹವಾಗುತ್ತಿರುವ ಜಿ.ಎಸ್.ಟಿ ಪಾಲಿನ ವಿಷಯದಲ್ಲೂ ಅನ್ಯಾಯವಾಗುತ್ತಿದ್ದು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ನೀಡಿದ್ದ ಒಂದು ಸಾವಿರ ಕೋಟಿ ರೂ.ಗಳನ್ನು ಈಗ ಹಿಡಿದುಕೊಂಡಿದೆ.
ಕೇಂದ್ರದ ಯೋಜನೆಗಳಿಗೆ ಪಾಲನ್ನು ಕಡಿಮೆ ಮಾಡಲಾಗಿದೆ
ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಲು ನೀಡುವ ಬೆಂಬಲ ಬೆಲೆ ಯೋಜನೆಯಡಿ 1,800 ಕೋಟಿ ರೂ.ಗಳನ್ನು ಇದುವರೆಗೆ ನೀಡಿಲ್ಲ, ಇದೇ ರೀತಿ ರಾಜ್ಯದಲ್ಲಿ ಜಾರಿಯಾಗುವ ಕೇಂದ್ರದ ಯೋಜನೆಗಳಿಗೆ ನೀಡುವ ಪಾಲನ್ನು ಕಡಿಮೆ ಮಾಡಲಾಗಿದ್ದು ಶೇಕಡಾ 10 ಮತ್ತು 25ಕ್ಕೆ ಇಳಿಸಲಾಗಿದೆ.
ಕೇಂದ್ರದ ಪ್ರಾಯೋಜಿತ ಯೋಜನೆಗಳಿಗೆ ಈ ಮೊದಲು ಶೇ. 75ರಷ್ಟು ಹಣವನ್ನು ನೀಡಲಾಗುತ್ತಿತ್ತು, ಉಳಿದ ಶೇ.25ನ್ನು ರಾಜ್ಯ ಸರ್ಕಾರಗಳು ಭರಿಸುತ್ತಿದ್ದವು. ನಂತರದ ದಿನಗಳಲ್ಲಿ ಶೇ.50 ಕ್ಕೆ ನಿಂತಿತು, ಇದೀಗ ಕೇವಲ ಶೇ.10 ರಷ್ಟು ಮಾತ್ರ ಭರಿಸುತ್ತಿದೆ, ಉಳಿದದ್ದನ್ನು ರಾಜ್ಯ ಭರಿಸಬೇಕಿದೆ.
ಕೆಲವು ವಿಶೇಷ ಯೋಜನೆಗಳಿಗೆ ಮಾತ್ರ ಕೇಂದ್ರ ಶೇ.25 ರಷ್ಟು ಅನುದಾನವನ್ನು ನೀಡುತ್ತದೆ, ಉಳಿದಂತೆ ಎಲ್ಲಾ ಯೋಜನೆಗಳಿಗೆ ರಾಜ್ಯವೇ ಹಣ ಹೊಂದಿಸಬೇಕಿದೆ.
ಕೊರತೆ ಬಜೆಟ್ ಸರಿದೂಗಿಸಲು ಕೇರಳಕ್ಕೆ 15 ಸಾವಿರ ಕೋಟಿ ರೂ. ನೀಡಿರುವ ಕೇಂದ್ರ, ಕರ್ನಾಟಕದಲ್ಲಿ ಕೊರತೆ ಬಜೆಟ್ ಮಂಡನೆಯಾಗಿದ್ದರೂ ನೆರವು ನೀಡುವುದಿಲ್ಲ ಎಂಬುದು ಸೇರಿದಂತೆ ಹಲವು ವಿಷಯಗಳನ್ನು ರಾಷ್ಟ್ರದ ಗಮನಕ್ಕೆ ತರುವ ಮೂಲಕ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ತಂಡ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಪ್ರತಿಭಟನೆ ಮೂಲಕ ಬಿಜೆಪಿಗೆ ಶಾಕ್ ನೀಡುವುದೇ ಗುರಿ
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ನಂತರ ಅದರ ಅಲೆಯಲ್ಲಿ ತೇಲುತ್ತಿರುವ ಬಿಜೆಪಿಗೆ ಈ ಪ್ರತಿಭಟನೆಯ ಮೂಲಕ ಶಾಕ್ ನೀಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಾಚಾರ.
ಭಾವನಾತ್ಮಕ ವಿಷಯಗಳನ್ನು ಹಿಡಿದುಕೊಂಡು ರಾಜಕೀಯ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ, ರಾಜ್ಯಕ್ಕೆ ಮಾಡಿರುವ ಅನ್ಯಾಯವನ್ನು ಎಳೆ ಎಳೆಯಾಗಿ ದೇಶಕ್ಕೆ ವಿವರಿಸುವುದು ಸಿದ್ದರಾಮಯ್ಯ ಅವರ ಯೋಚನೆ.
ನವದೆಹಲಿಯಲ್ಲಿ ಫೆಬ್ರವರಿ 7 ರಂದು ನಡೆಸಲಿರುವ ಪ್ರತಿಭಟನೆಯಲ್ಲಿ ತಾವು ಮತ್ತು ತಮ್ಮ ಸಂಪುಟದ ಸದಸ್ಯರಲ್ಲದೆ ರಾಜ್ಯ ಕಾಂಗ್ರೆಸ್ ಪಕ್ಷದ ಶಾಸಕರೂ ಭಾಗವಹಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಕೇಂದ್ರದ ಅನ್ಯಾಯದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರ ರೀತಿಯಲ್ಲೇ ಬೀದಿಗಿಳಿದು ಹೋರಾಟಕ್ಕಿಳಿಯುವ ಮೂಲಕ ದೇಶದ ಗಮನ ಸೆಳೆಯಬಹುದು, ಆ ಮೂಲಕ ಬಿಜೆಪಿಗೆ ತಿರುಗೇಟು ನೀಡಬಹುದು ಎಂಬುದು ಸಿದ್ದರಾಮಯ್ಯ ಅವರ ಆಲೋಚನೆಯಾಗಿದೆ.


