ಲೋಕಸಭೆ ಚುನಾವಣೆ: ಗೆದ್ದಿರುವ ಕ್ಷೇತ್ರಗಳ ಉಳಿಸಿಕೊಳ್ಳುವ ಸವಾಲು ಬಿಜೆಪಿಗೆ
ಬೆಂಗಳೂರು:ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯವನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆ ಎದುರಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ಬಿಜೆಪಿ ವರಿಷ್ಠರು ನೀಡಿದ್ದಾರೆ.
ಒಕ್ಕಲಿಗ ಸಮುದಾಯದ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎನ್ಡಿಎ ಕೂಟ ಸೇರಿರುವುದರಿಂದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಜಂಟಿಯಾಗಿ ಪ್ರಚಾರ ಮಾಡಿದಲ್ಲಿ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.
ಪಕ್ಷದಲ್ಲಿ ಒಂದು ವರ್ಗ ಎಷ್ಟೇ ವಿರೋಧ ಮಾಡಿದರೂ ತಮ್ಮಲ್ಲಿರುವ ಅಸಮಾಧಾನವನ್ನು ಬದಿಗಿಟ್ಟು ಸಂಖ್ಯಾಬಲ ದೃಷ್ಟಿಯಿಂದ ಯಡಿಯೂರಪ್ಪ ಅವರ ಪುತ್ರರಿಗೆ ಈ ಸ್ಥಾನ ಕಲ್ಪಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ವರದಿಯೇ ಪ್ರಮುಖ ಅಸ್ತ್ರ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಹಿಂದ ಓಲೈಕೆಗೆ ಹೆಚ್ಚು ಒತ್ತು ನೀಡಿದ್ದಲ್ಲದೆ, ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸ್ವೀಕರಿಸುವುದಾಗಿ ನೀಡಿರುವ ಹೇಳಿಕೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದೆ.
ಆಯೋಗದ ವರದಿಯನ್ನೇ ಕರ್ನಾಟಕದ ಮಟ್ಟಿಗೆ ಲೋಕಸಭಾ ಚುನಾವಣಾ ಅಸ್ತ್ರವಾಗಿ ಬಳಸಲು ನಿರ್ಧರಿಸಿರುವ ಬಿಜೆಪಿ ವರಿಷ್ಠರು, ಇದೇ ಸಂದರ್ಭದಲ್ಲಿ ಮುಂದುವರೆದ ಎರಡು ಸಮುದಾಯಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ವಿಜಯೇಂದ್ರ ಅವರನ್ನು ಸಾರಥಿಯನ್ನಾಗಿ ಮಾಡಿದ್ದಾರೆ.
ವಿಧಾನಸಭೆ ಚುನಾವಣೆಯ ನಂತರ ಯಡಿಯೂರಪ್ಪ ಬಣದವರು ಕಾಂಗ್ರೆಸ್ ಕಡೆಗೆ ವಾಲುತ್ತಿದ್ದರು. ಅಷ್ಟೇ ಅಲ್ಲ, ಕೆಲವರು ವರಿಷ್ಠರು ಹಾಗೂ ಪಕ್ಷವನ್ನು ಟೀಕಿಸುವ ಹಂತಕ್ಕೂ ಹೋಗಿದ್ದರು.
ಇದರ ಲಾಭ ಪಡೆದ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ಮಾಡಿ, ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಶಾಸಕರ ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ವಿಧಾನಸಭೆಯಲ್ಲಿ ತಮ್ಮ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿತ್ತು.
ಯಡಿಯೂರಪ್ಪ ವರ್ಚಸ್ಸಿಗೇ ವರಿಷ್ಠರ ಮಣೆ
ಯಡಿಯೂರಪ್ಪ ಅವರ ಕುಟುಂಬಕ್ಕೆ ಅಧ್ಯಕ್ಷ ಸ್ಥಾನ ನೀಡಿದರೆ, ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬಹುದು ಹಾಗೂ ಯಡಿಯೂರಪ್ಪ ವರ್ಚಸ್ಸಿಗೇ ರಾಜ್ಯದಲ್ಲಿ ಶೇ.5ರಷ್ಟು ಮತ ಪ್ರಮಾಣವಿರುವುದು ವರಿಷ್ಠರಿಗೆ ಮನವರಿಕೆಯಾಗಿದ್ದು, ಈ ಮತಗಳನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ತಾವು ವಿರೋಧ ಮಾಡುತ್ತಿದ್ದವರಿಗೆ ಪಟ್ಟ ಕಟ್ಟಿದ್ದಾರೆ.
ದಕ್ಷಿಣ ಭಾರತದಲ್ಲಿ ಕರ್ನಾಟಕ, ತೆಲಂಗಾಣ ಹೊರತುಪಡಿಸಿದರೆ, ಬಿಜೆಪಿಗೆ ಎಲ್ಲಿಯೂ ಅವಕಾಶವಿಲ್ಲ. ಉತ್ತರ ಭಾರತದಲ್ಲಿ ಕಳೆದ ಬಾರಿ ಗಳಿಸಿದ್ದ ಸ್ಥಾನಗಳು ಮುಂದಿನ ಚುನಾವಣೆಯಲ್ಲಿ ಕಡಿಮೆಯಾಗಬಹುದು ಎಂಬ ಮಾಹಿತಿ ಇದೆ.
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಕರ್ನಾಟಕದಲ್ಲಿ ಕಳೆದ ಬಾರಿ ಗಳಿಸಿದ್ದ ಸ್ಥಾನಗಳನ್ನು ಮುಂದಿನ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಒಕ್ಕಲಿಗ-ಲಿಂಗಾಯತ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪುತ್ರಗೆ ರಾಜ್ಯದ ಸಾರಥ್ಯ ಕ್ರಿಯಾಶೀಲರಾದ ಯಡಿಯೂರಪ್ಪ
ಪುತ್ರ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಯಡಿಯೂರಪ್ಪ ತುಂಬಾ ಕ್ರಿಯಾಶೀಲರಾಗಿದ್ದಾರೆ. ತಮ್ಮ ವಿರೋಧಿ ಬಣದ ಪ್ರಮುಖರಾದ ಮಾಜಿ ಸಚಿವರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಂಪರ್ಕಿಸಿ ವಿಜಯೇಂದ್ರ ಅವರಿಗೆ ಸಹಕಾರ ಕೊಡಿ. ಎಲ್ಲರೂ ಒಟ್ಟಾಗಿ ಹೋಗೋಣ ಎಂಬ ಮಾತುಗಳನ್ನಾಡಿದ್ದಾರೆ.
ಒಟ್ಟಾರೆ, ಅನಿರೀಕ್ಷಿತವಾಗಿ ವಿಜಯೇಂದ್ರ ಅವರ ನೇಮಕಾತಿ ಆಗುತ್ತಿದ್ದಂತೆ ಪಕ್ಷದಲ್ಲಿ ಭಿನ್ನ ಸ್ವರಗಳು ಕೇಳಿ ಬಂದರೂ ಯಾರು ಬಹಿರಂಗ ಹೇಳಿಕೆ ನೀಡುವ ಧೈರ್ಯ ತೋರುತ್ತಿಲ್ಲ. ಜತೆಗೆ ಅಭಿನಂದನೆಗಳ ಸುರಿಮಳೆಗೈದಿದ್ದಾರೆ.


