Thursday, April 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, April 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಅಂಕಣರಾಜಕೀಯರಾಜ್ಯರಾಷ್ಟ್ರವಿಶ್ಲೇಷಣೆ

ಕೈ ಪಾಳಯಕ್ಕೆ ಖರ್ಗೆ ವಾರ್ನಿಂಗು

by admin February 5, 2024
written by admin February 5, 2024 1 comment 5 minutes read
1FacebookTwitterPinterestEmail
134

ಬೆಂಗಳೂರು: ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಥವನ್ನು ತಡೆಯಲು ಮಮತಾ ಬ್ಯಾನರ್ಜಿ ಸೂತ್ರವನ್ನು ಅನುಸರಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತವರ ಟೀಮು ಫೆಬ್ರವರಿ ಏಳರಂದು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇ ಇದಕ್ಕೆ ಸಾಕ್ಷಿ.

ಅಂದ ಹಾಗೆ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯ ನಡೆಯಿತಲ್ಲ, ಇದಾದ ನಂತರ ದೇಶದಲ್ಲಿ ಪುನಃ ಎದ್ದಿರುವ ಮೋದಿ ಪರ ಅಲೆ ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ಸಹಜವಾಗಿಯೇ ಆತಂಕಕ್ಕೆ ತಳ್ಳಿದೆ. ಅಷ್ಟೇ ಅಲ್ಲ, ಸರ್ಕಾರ ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲಲು ತಯಾರಿದ್ದ ಬಹುತೇಕ ಸಚಿವರು ಹಿಂದೇಟು ಹೊಡೆಯುವಂತೆ ಮಾಡಿದೆ.

ಕೇವಲ ಸಚಿವರು ಮಾತ್ರವಲ್ಲ, ದೆಹಲಿಯ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ.ಜಯಚಂದ್ರ ಅವರಿಂದ ಹಿಡಿದು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿಯವರಂತಹ ಶಾಸಕರು ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ. ಪರಿಣಾಮ ಕರ್ನಾಟಕದ ಇಪ್ಪತ್ತೆಂಟು ಪಾರ್ಲಿಮೆಂಟ್ ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಷಯದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಖಚಿತ ತೀರ್ಮಾನಕ್ಕೆ ಬರಲಾಗುತ್ತಿಲ್ಲ.

ಹೀಗೆ ರಾಜ್ಯದ ಕಾಂಗ್ರೆಸ್ ಪಾಳಯದ ಮೇಲೆ ಆತಂಕದ ಕಾರ್ಮೋಡ ಕವಿದ ಹೊತ್ತಿನಲ್ಲೇ ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಅವರು ಮೊನ್ನೆ ಪಕ್ಷದ ಟಾಪ್ ಲೀಡರುಗಳಿಗೆ ಒಂದು ಪ್ರಪೋಸಲ್ಲು ಕೊಟ್ಟಿದ್ದಾರೆ.

ರಾಮ, ರಾಮ ಅನ್ನುತ್ತಾ ಬಿಜೆಪಿಯವರು ಅಕ್ಷತೆ ಹಿಡಿದು ಕರ್ನಾಟಕದ ಮನೆ ಮನೆಗೆ ತಲುಪಿದ್ದಾರೆ. ಆದರೆ ನಾವು ಕೂತಲ್ಲೇ ಕುಳಿತಿದ್ದೇವೆ. ಇಂತಹ ಟೈಮಿನಲ್ಲಿ ಮೇಲೆದ್ದು ನಿಂತು ಮಮತಾ ಬ್ಯಾನರ್ಜಿಯವರಂತೆ ಬಿಜೆಪಿಯನ್ನು ಎದುರಿಸದಿದ್ದರೆ ಕಷ್ಟವಾಗುತ್ತದೆ ಎಂಬುದು ಅವರ ಪ್ರಪೋಸಲ್ಲು.

ಅರ್ಥಾತ್, ಪಶ್ಚಿಮ ಬಂಗಾಳದಲ್ಲಿ ತಮ್ಮನ್ನು ಹಣಿಯಲು ಬಿಜೆಪಿ ಏನೇ ಕಸರತ್ತು ಮಾಡಿದರೂ ಮಮತಾ ಬ್ಯಾನರ್ಜಿ ತಕ್ಷಣವೇ ಬೀದಿಗಿಳಿಯುತ್ತಾರೆ. ಮೋದಿ ಸರ್ಕಾರದ ವಿರುದ್ಧ ಧರಣಿ ಮಾಡುತ್ತಾರೆ. ಇವತ್ತು ನಾವೂ ಅದೇ ರೀತಿ ಬಿಜೆಪಿಯನ್ನು ಎದುರಿಸದಿದ್ದರೆ ಪಾರ್ಲಿಮೆಂಟ್ ಚುನಾವಣೆಯ ಹೊತ್ತಿಗೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ.

ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸಚಿವರು ಮಾತ್ರವಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಎಲ್ಲ ಶಾಸಕರೂ ದಿಲ್ಲಿಗೇ ನುಗ್ಗಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಬೇಕು. ಹೀಗೆ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲು ನಮಗೆ ಬೇಕಾದಷ್ಟು ವಿಷಯಗಳಿವೆ.

ಇವತ್ತು ರಾಜ್ಯದಲ್ಲಿ ಬರಗಾಲ ಆವರಿಸುತ್ತಿರುವಾಗ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಗೆ ನೀಡುವ ನೆರವನ್ನು ಕಡಿತ ಮಾಡಿದೆ. ಉದ್ಯೋಗದ ದಿನಗಳನ್ನು ಹೆಚ್ಚಿಸಿ ಎಂದರೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹಣಕಾಸು ಆಯೋಗ ನಿಗದಿ ಮಾಡಿದ ರಾಜ್ಯದ ಪಾಲಿನ ಹಣವನ್ನು ಕೊಡುತ್ತಿಲ್ಲ. ಅಷ್ಟೇ ಏಕೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಜಾರಿಯಾಗಬೇಕಾದ ಯೋಜನೆಗಳಿಗೆ ಕೊಡುವ ಪಾಲನ್ನು ಕಡಿಮೆ ಮಾಡಲಾಗಿದೆ. ರಾಜ್ಯದಿಂದ ವಿವಿಧ ತೆರಿಗೆಗಳ ರೂಪದಲ್ಲಿ ದಂಡಿಯಾಗಿ ದಿಲ್ಲಿಗೆ ಹಣ ಹೋಗುತ್ತಿರುವಾಗ ನಮಗೆ ಆಗುತ್ತಿರುವ ಅನ್ಯಾಯವನ್ನು ದೇಶದ ಗಮನಕ್ಕೆ ತರೋಣ.

ಹೀಗೆ ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರ ತೋರಿಸುತ್ತಿರುವ ಮಲತಾಯಿ ಧೋರಣೆಯನ್ನು ದೇಶದ ಜನರಿಗೆ ತಿಳಿಸಬೇಕೆಂದರೆ ನಮ್ಮ ಹೋರಾಟ ದಿಲ್ಲಿಯ ರಣರಂಗದಲ್ಲೇ ನಡೆಯಬೇಕು ಅಂತ ಬಿ.ಆರ್.ಪಾಟೀಲ್ ಅವರು ಹೇಳಿದ ಮಾತು ವರ್ಕ್ ಔಟ್ ಆಗಿದೆ. ಅಂತಿಮವಾಗಿ ಫೆಬ್ರವರಿ ಏಳರಂದು ಸಿದ್ದರಾಮಯ್ಯ ಅಂಡ್ ಟೀಮು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ.

ಅಂದ ಹಾಗೆ ಬಿಜೆಪಿ ವಿರೋಧಿ ಒಕ್ಕೂಟದ ಪ್ರಮುಖ ಶಕ್ತಿಯಂತೆ ಮೇಲೆದ್ದು ನಿಂತಿದ್ದ ಮಮತಾ ಬ್ಯಾನರ್ಜಿ ಈಗ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಅಂತ ಟಕ್ಕರ್ ಕೊಟ್ಟಿದ್ದಾರೆ. ಆದರೆ ಹೀಗೆ ಟಕ್ಕರ್ ಕೊಟ್ಟರೂ ಬಿಜೆಪಿ ವಿರುದ್ಧದ ಹೋರಾಟಕ್ಕೆ ಮಮತಾ ಮಾದರಿಯ ಹೋರಾಟಕ್ಕೆ ನುಗ್ಗದೆ ಬೇರೆ ದಾರಿಯಿಲ್ಲ ಎಂಬ ಭಾವನೆ ರಾಜ್ಯ ಕಾಂಗ್ರೆಸ್‌ನಲ್ಲಿ ದಟ್ಟವಾಗತೊಡಗಿದೆ.

ಮಮತಾ ಮಾದರಿಯ ಹೋರಾಟಕ್ಕೆ ರಾಜ್ಯ ಕಾಂಗ್ರೆಸ್ ತಯಾರಾಗುತ್ತಿದೆ ಎಂದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಫ್ ಅಂಡ್ ಟಫ್ ರಾಜಕಾರಣಕ್ಕೆ ಸಾಕ್ಷಿಯಾಗುವುದು ನಿಶ್ಚಿತ ಮತ್ತು ಈ ಅಂಶ ರಾಜ್ಯ ರಾಜಕೀಯದ ಸ್ವರೂಪವನ್ನು ದೊಡ್ಡ ಮಟ್ಟದಲ್ಲಿ ಬದಲಿಸುವುದೂ ಖಚಿತ.

ಕೈ ಪಾಳಯಕ್ಕೆ ಖರ್ಗೆ ವಾರ್ನಿಂಗ್

ಈ ಮಧ್ಯೆ ದಿಲ್ಲಿಗೆ ಹೋದಾಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿರುವ ಮಾತು ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ಚಿಂತೆಗೀಡು ಮಾಡಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ವೋಟು ತರುತ್ತವೆ ಅಂತ ನಂಬಿಕೊಂಡು ಕೂರಬೇಡಿ. ಈ ಹಿಂದೆ ರಾಜಸ್ತಾನದಲ್ಲಿದ್ದ ಕಾಂಗ್ರೆಸ್ ಸರ್ಕಾರವೂ ಜನರಿಗೆ ಏಳು ಗ್ಯಾರಂಟಿಗಳನ್ನು ಕೊಟ್ಟಿತ್ತು. ಈ ಗ್ಯಾರಂಟಿಗಳು ಜಾರಿಯಲ್ಲಿದ್ದರೂ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಮತದಾರರು ಬಿಜೆಪಿ ಪರವಾಗಿ ಶೀಲು ಒತ್ತಿದರು, ಅಂತ ಎಚ್ಚರಿಸಿರುವ ಖರ್ಗೆಯವರು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಗುಟ್ಟು ಹೇಳಿದ್ದಾರಂತೆ.

ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಗಣನೀಯ ಸಂಖ್ಯೆಯ ಸೀಟುಗಳನ್ನು ಗೆಲ್ಲದಿದ್ದರೆ ನಾನು ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗಬಹುದು ಎಂಬುದು ಈ ಸೀಕ್ರೆಟ್ಟು.

ಅಂದ ಹಾಗೆ ಖರ್ಗೆಯವರು ಇಂತಹ ಮಾತುಗಳನ್ನಾಡಲು ಅವರಿಗಿರುವ ಫೀಡ್ ಬ್ಯಾಕು ಕಾರಣ. ಅದೆಂದರೆ, ಪಾರ್ಲಿಮೆಂಟ್ ಎಲೆಕ್ಷನ್ನಿನ ಕಣಕ್ಕಿಳಿಯಲು ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ತಯಾರಿಲ್ಲ. ಇವತ್ತು ದೇಶದಲ್ಲಿ ಬಿಜೆಪಿ ಎಬ್ಬಿಸಿರುವ ರಾಮನ ಅಲೆಯನ್ನು ಎದುರಿಸಿ ಗೆಲ್ಲುವುದು ಸಣ್ಣ ರಿಸ್ಕು ಅಲ್ಲ. ಒಂದು ವೇಳೆ ಗೆದ್ದು ಬಂದರೂ ದಿಲ್ಲಿಗೆ ಹೋಗಿ ಮಾಡುವುದೇನು ಎಂಬುದು ಅವರ ಚಿಂತೆ.

ಇವತ್ತು ಬಿಜೆಪಿ ವಿರೋಧಿ ರಾಜಕಾರಣದ ನೆಲೆ ಎಂದು ಗುರುತಿಸಲಾಗಿರುವ ಇಂಡಿಯಾ ಒಕ್ಕೂಟ ದಿನ ಕಳೆದಂತೆ ದುರ್ಬಲವಾಗುತ್ತಿದೆ. ಶುರುವಿನಲ್ಲಿ ಬಬ್ರುವಾಹನನ ಫೋಸು ಕೊಟ್ಟ ಜೆಡಿಯು ನಾಯಕ ನಿತೀಶ್‌ಕುಮಾರ್ ಈಗ ಬಿಹಾರದಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದಾರೆ. ಇನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ನಮಗೆ ಕಾಂಗ್ರೆಸ್ ಸಹವಾಸವೇ ಬ್ಯಾಡ ಎಂದಿದ್ದಾರೆ.

ಹೀಗೇ ಒಂದು ಕಡೆಯಿಂದ ನೋಡುತ್ತಾ ಹೋದರೆ ಇಂಡಿಯಾ ಒಕ್ಕೂಟದ ಹಲವು ನಾಯಕರು ಯೂ ಟರ್ನ್ ಹೊಡೆದು ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡಿದ್ದಾರೆ.

ಇಂತಹ ಟೈಮಿನಲ್ಲಿ ಇರುವ ಮಂತ್ರಿಗಿರಿಯನ್ನು ತೊರೆದು ದಿಲ್ಲಿಗೆ ಹೋಗುವುದೇ ಪ್ರಾಕ್ಟಿಕಲ್ ಅಲ್ಲ, ಹೋದರೂ ದಿಲ್ಲಿ ಗದ್ದುಗೆಯ ಮೇಲೆ ಐ.ಎನ್.ಡಿ.ಐ.ಎ ಒಕ್ಕೂಟ ಸೆಟ್ಲಾಗುವುದಿಲ್ಲ. ಹೀಗಿರುವಾಗ ಕರ್ನಾಟಕದಲ್ಲಿ ನೆಲೆ, ದಿಲ್ಲಿಯಲ್ಲಿ ಬೆಲೆ ಕಳೆದುಕೊಂಡು ರಾಜಕಾರಣ ಮಾಡುವುದು ಬಹುತೇಕ ಸಚಿವರಿಗೆ ಇಷ್ಟವಿಲ್ಲ.

ಅವರ ಈ ಪರಿಸ್ಥಿತಿ ಖರ್ಗೆಯವರಿಗೂ ಗೊತ್ತು. ಹೀಗಾಗಿ ನೀವು ಕಣಕ್ಕಿಳಿಯಿರಿ ಅಂತ ಅವರು ಯಾವ ಸಚಿವರ ಮೇಲೂ ಒತ್ತಡ ಹೇರುತ್ತಿಲ್ಲ. ಹಾಗಂತ ಕರ್ನಾಟಕದ ನೆಲೆಯಲ್ಲಿ ಹನ್ನೆರಡರಿಂದ ಹದಿನೈದು ಸೀಟುಗಳನ್ನಾದರೂ ಪಕ್ಷ ಗೆಲ್ಲದೆ ಹೋದರೆ ತಮ್ಮ ಮೇಲೆ ಅಪವಾದ ಬರುವುದಂತೂ ಗ್ಯಾರಂಟಿ. ಸ್ವಂತ ರಾಜ್ಯದಲ್ಲೇ ಪಕ್ಷಕ್ಕೆ ಶಕ್ತಿ ತುಂಬದವರು ರಾಷ್ಟ್ರಮಟ್ಟದಲ್ಲಿ ಏನು ಶಕ್ತಿ ತುಂಬುತ್ತಾರೆ ಎಂಬ ಕುಹಕ ಕೇಳಿ ಬರುತ್ತದೆ. ಹಾಗಾದಾಗ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ ಎಂಬುದು ಖರ್ಗೆಯವರ ಯೋಚನೆ.

ಹೀಗಾಗಿ ದಿಲ್ಲಿಗೆ ಬಂದು ತಮ್ಮನ್ನು ಭೇಟಿ ಮಾಡಿದ ಹಲವು ಸಚಿವರ ಮುಂದೆ ಅವರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಷಾ ಕೈಗೆ ’ಅಮಿತ’ ಕಂಪ್ಲೇಂಟು

ಇನ್ನು ಫೆಬ್ರವರಿ ಎರಡನೇ ವಾರ ಕರ್ನಾಟಕಕ್ಕೆ ಬರಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಯಡಿಯೂರಪ್ಪ ವಿರೋಧಿ ಬಣ ಕಂಪ್ಲೇಂಟು ಕೊಡಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಸೋಲಿನ ನಂತರ ಕರ್ನಾಟಕಕ್ಕೆ ಬರುವ ಆಸಕ್ತಿಯನ್ನೇ ಕಳೆದುಕೊಂಡಿದ್ದ ಅಮಿತ್ ಷಾ ಈಗ ಪಾರ್ಲಿಮೆಂಟ್ ಎಲೆಕ್ಷನ್ನಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಗೆ ಟಾನಿಕ್ ಕೊಡಲು ಬರುತ್ತಿದ್ದಾರೆ. ಹೀಗೆ ಬಂದವರ ಕೈಗೆ ಕಂಪ್ಲೇಂಟು ಕೊಡುವುದು ಯಡಿಯೂರಪ್ಪ ವಿರೋಧಿ ಬಣದ ಯೋಚನೆ.

ಕಾರಣ ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಅಧ್ಯಕ್ಷರಾದ ನಂತರ ಪಕ್ಷದಲ್ಲಿ ಅವರ ಆಪ್ತರೇ ತುಂಬಿಕೊಂಡು ಕೆಜೆಪಿ-2 ಸಿನಿಮಾದಂತೆ ಕಾಣುತ್ತಿದೆ. ಮೂರು ಜಿಲ್ಲೆಗಳಿಗೆ ಒಬ್ಬರು ಪ್ರಭಾರಿ ಮತ್ತು ಒಬ್ಬರು ಸಂಘಟನಾ ಕಾರ್ಯದರ್ಶಿ ಇರಬೇಕು ಎಂಬ ನಿಯಮವಿದ್ದರೆ ಸಂಘಟನಾ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿ ಮಾಡಲು ವಿಜಯೇಂದ್ರ ಉತ್ಸುಕತೆ ತೋರುತ್ತಿಲ್ಲ. ಈ ಸಂಬಂಧ ಸ್ವತಃ ಸಂಘ ಪರಿವಾರದ ನಾಯಕರು ಹೇಳಿದರೂ ವಿಜಯೇಂದ್ರ ಕೇರ್ ಮಾಡುತ್ತಿಲ್ಲ. ಹೀಗೆ ಪಕ್ಷದ ಪದಾಧಿಕಾರಿಗಳ ಪಟ್ಟಿಯಿಂದ ಹಿಡಿದು ಎಲ್ಲ ಹಂತಗಳಲ್ಲೂ ಕೆಜೆಪಿ-2 ತಲೆ ಎತ್ತಿರುವುದರಿಂದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹೈಕಮಾಂಡ್ ನಿರೀಕ್ಷಿಸಿದ ರಿಸಲ್ಟು ಬರುವುದಿಲ್ಲ.

ಇವತ್ತು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಸೇರಿ ಪಕ್ಷವನ್ನು ರೂಪಿಸಿರುವ ರೀತಿ ನೋಡಿದರೆ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಇವರು ಇಪ್ಪತ್ತೈದು ಸೀಟುಗಳನ್ನು ಗೆಲ್ಲುವುದಿರಲಿ, ಇಪ್ಪತ್ತರ ಬೌಂಡರಿಗೆ ತಲುಪಿದರೆ ಅದೇ ದೊಡ್ಡದು. ರಾಮಮಂದಿರದ ಅಲೆ ಏನಾದರೂ ಇಲ್ಲದೆ ಹೋಗಿದ್ದರೆ ಹದಿನೈದು ಸೀಟುಗಳನ್ನು ಗೆಲ್ಲುವುದೂ ಕಷ್ಟವಿತ್ತು ಎಂಬುದು ಈ ಬಣದ ವಾದ.

ಈ ವಾದವನ್ನು ಕೇಳಿ ಅಮಿತ್ ಷಾ ಏನು ಪರಿಹಾರ ನೀಡುತ್ತಾರೋ ಗೊತ್ತಿಲ್ಲ. ಆದರೆ ಯಡಿಯೂರಪ್ಪ ವಿರೋಧಿ ಬಣದ ಕಂಪ್ಲೇಂಟನ್ನು ಅವರು ಸಾರಾಸಗಟಾಗಿ ನಿರ್ಲಕ್ಷಿಸುವುದೂ ಕಷ್ಟ. ಯಾಕೆಂದರೆ ಹಿಂದಿನಿಂದಲೂ ಈ ಬಣಕ್ಕೆ ತಾಯಿ ಪ್ರೀತಿ ಕೊಟ್ಟವರು ಅವರೇ ಅಲ್ಲವೇ?

ಕೇಂದ್ರ ಮಂತ್ರಿಗಿರಿಗೆ ’ಕ್ಯೂ’

ಅಂದ ಹಾಗೆ ಪಾರ್ಲಿಮೆಂಟ್ ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯ ಹಲವು ನಾಯಕರಲ್ಲಿ ಕೇಂದ್ರ ಸಚಿವರಾಗುವ ಕನಸು ಹುಟ್ಟಿಕೊಂಡಿದೆ. ಮೊನ್ನೆ ಮೊನ್ನೆಯ ತನಕ ರಾಜ್ಯಸಭೆಗೆ ಹೋಗುವ ಕನಸು ಕಾಣುತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣ ಈಗ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ರೆಡಿ ಆಗುತ್ತಿರುವುದು ಇದೇ ಕಾರಣಕ್ಕಾಗಿ.

ಮೂಲಗಳ ಪ್ರಕಾರ, ತುಮಕೂರಿನಿಂದ ಸ್ಪರ್ಧಿಸುವಂತೆ ಸೋಮಣ್ಣ ಅವರ ಮನ ಒಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಹಿಂದೆ ವರುಣಾ ಕ್ಷೇತ್ರಕ್ಕೆ ನಿಮ್ಮ ಪರವಾಗಿ ಪ್ರಚಾರ ಮಾಡಲು ಬಂದಾಗ ನಾನೊಂದು ಮಾತು ಹೇಳಿದ್ದೆ. ಸೋಮಣ್ಣ ಅವರನ್ನು ತುಂಬ ಎತ್ತರದ ಸ್ಥಾನದಲ್ಲಿ ನೋಡುವುದು ನನ್ನಿಷ್ಟ ಎಂದಿದ್ದೆ. ಹೀಗೆ ಅವತ್ತು ಕೊಟ್ಟ ಮಾತನ್ನು ನಾನು ಉಳಿಸಿಕೊಳ್ಳುತ್ತೇನೆ. ಮೋದೀಜಿಯವರ ಸಂಪುಟದಲ್ಲಿ ನೀವು ಮಂತ್ರಿಯಾಗುವುದನ್ನು ನಿಶ್ಚಿತವಾಗಿ ನೋಡುತ್ತೇನೆ ಎಂದಿದ್ದಾರೆ.

ಯಾವಾಗ ಅವರು ಈ ಮಾತು ಹೇಳಿದರೋ ಇದಾದ ನಂತರ ನಂಗೆ ರಾಜ್ಯಸಭೆ ಇರ್ಲಿ ಅಂತ ಹೇಳುತ್ತಿದ್ದ ಸೋಮಣ್ಣ ಧಿಡೀರನೆ ಮನಸ್ಸು ಬದಲಿಸಿ ತುಮಕೂರು ಕ್ಷೇತ್ರದುದ್ದ ರಣರಣ ತಿರುಗಾಡತೊಡಗಿದ್ದಾರೆ.

ಇನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೂ ಕೇಂದ್ರ ಮಂತ್ರಿಯಾಗುವ ಕನಸು ಶುರುವಾಗಿದೆ. ಹೀಗಾಗಿ ಈ ಬಾರಿ ಬಾಗಲಕೋಟೆ ಕ್ಷೇತ್ರದಿಂದ ನಂಗೆ ಟಿಕೇಟು ಕೊಡಿ ಅಂತ ಪಟ್ಟು ಹಿಡಿದಿರುವ ನಿರಾಣಿ ಅವರಿಗೆ ಸ್ವತಃ ಅಮಿತ್ ಷಾ ಅವರ ಬೆಂಬಲವಿದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವುದು ನಿಶ್ಚಿತವಾದಾಗ, ಅವರ ಜಾಗಕ್ಕೆ ನಿರಾಣಿ ಅವರನ್ನು ತಂದು ಕೂರಿಸಬೇಕು ಅಂತ ಕಸರತ್ತು ಮಾಡಿದವರಲ್ಲಿ ಅಮಿತ್ ಷಾ ಮುಖ್ಯರಾದವರು. ಅಂತವರು, ಈ ಸಲ ಪಾರ್ಲಿಮೆಂಟಿಗೆ ಸ್ಪರ್ಧಿಸುತ್ತೇನೆ ಅಂತ ನಿರಾಣಿ ಹೇಳಿದಾಗಲೂ ವೈ ನಾಟ್ ನಿರಾನೀಜೀ ಅಂದಿದ್ದಾರಂತೆ.

ಇನ್ನು ರಾಜ್ಯ ಬಿಜೆಪಿಯಲ್ಲಿ ಪದೇ ಪದೇ ಗರ್ನಲ್ಲು ಸಿಡಿಸುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ಮೌನವಾಗಿದ್ದಾರಲ್ಲ ಅವರಿಗೂ ಈಗ ಕೇಂದ್ರ ಮಂತ್ರಿಯಾಗುವ ನಿರೀಕ್ಷೆ ಇದೆ. ಅವರ ನಿರೀಕ್ಷೆಗೆ ಯಥಾ ಪ್ರಕಾರ ಪಕ್ಷದ ವರಿಷ್ಟರೇ ಕಾರಣ. ಉಳಿದಂತೆ ಈ ಸಲ ಮರಳಿ ಶಿವಮೊಗ್ಗದಿಂದ ಗೆದ್ದು ಕೇಂದ್ರ ಮಂತ್ರಿಯಾಗುವ ಕನಸು ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರಲ್ಲೂ ಇದೆ.

ಇದೇ ರೀತಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ಪಡೆಯಲು ಕಸರತ್ತು ನಡೆಸಿರುವ ಮಾಜಿ ಸಚಿವ ಸಿ.ಟಿ.ರವಿ, ಚುನಾವಣೆಯಲ್ಲಿ ಗೆದ್ದು ಒಕ್ಕಲಿಗರ ಕೋಟಾದಡಿ ಕೇಂದ್ರ ಮಂತ್ರಿಯಾಗುವ ಕಸನು ಕಾಣುತ್ತಿದ್ದಾರೆ.

ಹೀಗೆ ನೋಡುತ್ತಾ ಹೋದರೆ ಇವರುಗಳಷ್ಟೇ ಅಲ್ಲ, ಇತ್ತೀಚೆಗೆ ಬಿಜೆಪಿಗೆ ವಾಪಸ್ಸಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನೂ ಹಲ ಮಂದಿ ನಾಯಕರಿಗೆ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಮಂತ್ರಿಯಾಗುವ ಕನಸು ಶುರುವಾಗಿದೆ. ಅದು ಎಷ್ಟರ ಮಟ್ಟಿಗೆ ಈಡೇರುತ್ತದೆ ಅಂತ ಕಾದು ನೋಡಬೇಕು.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
aicc presidentamith shahbjpi.n.d.i.a.looking for chance to get central ministershipmallikarjuna khargemamata byanarjiwest bengal cm
1 FacebookTwitterPinterestEmail
admin

previous post
ದಿನ ಭವಿಷ್ಯ : ಸೋಮವಾರ, 05 ಫೆಬ್ರವರಿ 2024
next post
ಕೇಂದ್ರ ಗೃಹ ಸಚಿವರಿಂದ ಶಾಮನೂರು ಅತಿಥಿ ಗೃಹ ಉದ್ಘಾಟನೆ: ಮುಖ್ಯಮಂತ್ರಿ ಅವರಿಗೆ ಆಹ್ವಾನ ಇಲ್ಲ

You may also like

ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

April 23, 2026

ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

April 21, 2026

ದಲಿತ ಒಳಮೀಸಲಾತಿ: ಏ.24ಕ್ಕೆ ವಿಶೇಷ ಸಂಪುಟ ಸಭೆ

April 20, 2026

ಬದಲಾಗದ ಮಹಿಳಾ ವಿರೋಧಿ ಕಾಂಗ್ರೆಸ್ ಮನಸ್ಥಿತಿ

April 18, 2026

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

April 17, 2026

ಪಕ್ಷ ವಿರೋಧಿ ಚಟುವಟಿಕೆ: ಸಚಿವ ಜಮೀರ್‌ಗೆ ಕಂಟಕ

April 16, 2026

ಪ್ರಧಾನಿ ಮೋದಿಗೆ ರಾಜ್ಯದ 18 ಬೇಡಿಕೆಗಳ ಪಟ್ಟಿ

April 15, 2026

ಶಾಸಕರ ಜೊತೆ ಪ್ರತ್ಯೇಕ ಸಭೆಗೆ ಶಿವಕುಮಾರ್ ಸಮರ್ಥನೆ

April 14, 2026

ಸಂಪುಟ ಪುನರ್ ರಚನೆಗೆ ಅವಕಾಶ ಕೊಡಬೇಡಿ

April 13, 2026

ಅಧಿಕಾರ ಹಸ್ತಾಂತರ ನಿರೀಕ್ಷೆಯಲ್ಲಿ ಡಿ.ಕೆ.ಶಿವಕುಮಾರ್

April 11, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (443)
  • ಅಂಕಣ (109)
  • ಉದ್ಯೋಗ (326)
  • ದಿನ ಭವಿಷ್ಯ (110)
  • ರಾಜಕೀಯ (1,937)
  • ರಾಜ್ಯ (2,252)
  • ರಾಷ್ಟ್ರ (2,222)
  • ವಿಶ್ಲೇಷಣೆ (189)
  • ಶಿಕ್ಷಣ (393)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

    April 23, 2026
  • ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

    April 21, 2026
  • ದಲಿತ ಒಳಮೀಸಲಾತಿ: ಏ.24ಕ್ಕೆ ವಿಶೇಷ ಸಂಪುಟ ಸಭೆ

    April 20, 2026

KMS Special

  • ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

    April 23, 2026
  • ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

    April 21, 2026
  • ದಲಿತ ಒಳಮೀಸಲಾತಿ: ಏ.24ಕ್ಕೆ ವಿಶೇಷ ಸಂಪುಟ ಸಭೆ

    April 20, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

April 23, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ