ಬೆಂಗಳೂರು:ಪರಿಶಿಷ್ಟರ ಹಣ ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವಂತೆ ರಾಜ್ಯ ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ.
ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅವರ ಗಮನಕ್ಕೆ ಬಾರದೆ 187.33 ಕೋಟಿ ರೂ.ಗಳನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಲು ಸಾಧ್ಯವೇ ಇಲ್ಲ ಎಂದು ರಾಜ್ಯಪಾಲರಿಗೆ ಬಿಜೆಪಿ ಮನವರಿಕೆ ಮಾಡಿಕೊಟ್ಟಿದೆ.
ರಾಜಭವನಕ್ಕೆ ಬಿಜೆಪಿ ನಿಯೋಗ
ನಿಗಮದ ಹಣ ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ ಹಾಗೂ ಇಲಾಖೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನಾಯಕತ್ವದಲ್ಲಿ ಪಕ್ಷದ ಶಾಸಕರ ನಿಯೋಗ ವಿಧಾನಸೌಧದಿಂದ ರಾಜಭವನಕ್ಕೆ ಮೆರವಣಿಗೆಯಲ್ಲಿ ತೆರಳಿ ರಾಜ್ಯಪಾಲರಿಗೆ ಮನವಿಪತ್ರ ನೀಡಿದರು.
ರಾಜ್ಯಪಾಲರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಹೈದರಾಬಾದ್ನ ಸಹಕಾರಿ ಬ್ಯಾಂಕ್ಗಳಲ್ಲಿ 18 ನಕಲಿ ಖಾತೆ ತೆರೆದು ನಗದು ವರ್ಗಾವಣೆ ಮಾಡಿದ್ದಾರೆ.

ಚುನಾವಣೆಗೆ ಪರಿಶಿಷ್ಟರ ಹಣ ದುರ್ಬಳಕೆ
ಮುಖ್ಯಮಂತ್ರಿ ಅವರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಮಾಡಲು ಸಾಧ್ಯವೇ ಇಲ್ಲ, ವರ್ಗಾವಣೆ ಮಾಡಿಕೊಂಡ ಹಣವನ್ನು ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಳ್ಳಲು ಹುನ್ನಾರ ನಡೆದಿತ್ತು, ಇದರಲ್ಲಿ ಒಂದಷ್ಟು ಹಣ ಬಳಕೆಯಾಗಿದೆ.
ಚುನಾವಣೆಗಾಗಿ ಹಣ ಬಳಸಲು ಮುಖ್ಯಮಂತ್ರಿ ಅವರ ಸಮ್ಮತಿಯೂ ದೊರೆತಂತಿದೆ, ಆದ್ದರಿಂದಲೇ ಅವರು ಸಚಿವರ ರಾಜೀನಾಮೆ ಪಡೆಯಲು ಹಿಂದೇಟು ಹಾಕುತ್ತಿರುವುದಲ್ಲದೆ, ಹಗರಣವನ್ನು ಸಿಬಿಐ ತನಿಖೆಗೆ ಕೊಡಲು ನಿರಾಕರಿಸಿದ್ದಾರೆ ಎಂದು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ.
ಪ್ರಕರಣವನ್ನು ಮುಚ್ಚಿಹಾಕಲು ಎಸ್ಐಟಿ ರಚನೆ ಮಾಡಿದ್ದಾರೆ, ಹಗರಣ ಕಣ್ಣ ಮುಂದೆ ಇರುವಾಗ ಮುಖ್ಯಮಂತ್ರಿ ಹಾಗೂ ಸಚಿವರ ರಾಜೀನಾಮೆ ಪಡೆಯಿರಿ ಎಂದು ಕೋರಿರುವುದಾಗಿ ತಿಳಿಸಿದರು.
ಸಚಿವರ ಆಪ್ತರ ಬಂಧನ
ಎಸ್ಐಟಿ ಪೊಲೀಸರು ನಡೆಸಿರುವ ತನಿಖೆಗೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ಆಪ್ತರನ್ನು ಮತ್ತು ಬಂಧುಗಳನ್ನು ವಶಕ್ಕೆ ಪಡೆಯಲಾಗಿದೆ.
ಹೈದರಾಬಾದ್ನಲ್ಲಿರುವ ಈ ಸಹಕಾರಿ ಬ್ಯಾಂಕ್ಗಳ ಬಗ್ಗೆಯೂ ನಮಗೆ ಅನುಮಾನಗಳಿವೆ, ತಕ್ಷಣವೇ ನೀವು ಕಾರ್ಯಪ್ರವೃತ್ತರಾಗಬೇಕೆಂದು ರಾಜ್ಯಪಾಲರನ್ನು ಕೋರಿದ್ದೇವೆ ಎಂದರು.


