ಬೆಂಗಳೂರು:ಕರ್ನಾಟಕದಲ್ಲಿ ಹೆಚ್ಚುತ್ತಿರುವ ಎಲ್ಪಿಜಿ ಕೊರತೆ ನೀಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು, ನಮ್ಮ ರಾಜ್ಯಕ್ಕೆ ಅಗತ್ಯವಿರುವ ಸಿಲಿಂಡರ್ಗಳನ್ನು ಪೂರೈಸುವಂತೆ ಒತ್ತಾಯಿಸಿದ್ದಾರೆ.
ಅಡುಗೆ ಅನಿಲ ಪೂರೈಸಿ
ಅಡುಗೆ ಅನಿಲ ಹೊತ್ತು ಎರಡು ಹಡಗುಗಳು ರಾಷ್ಟ್ರಕ್ಕೆ ತಲುಪಿದ್ದು ಅದರಲ್ಲಿ ಕರ್ನಾಟಕಕ್ಕೆ ಅಗತ್ಯವಾಗಿರುವ ಎಲ್ಪಿಜಿ ಪೂರೈಸಿ.
ಗೃಹ ಬಳಕೆದಾರರಿಗೆ ಎಲ್ಪಿಜಿ ಪೂರೈಕೆಗೆ ಆದ್ಯತೆ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶವನ್ನು ಉಲ್ಲೇಖಿಸಿರುವ ಮುಖ್ಯಮಂತ್ರಿ, ನಿಮ್ಮ ಮಾರ್ಗಸೂಚಿಗಳ ಅನುಸಾರ ನಾವು ಎಲ್ಪಿಜಿ ಪೂರೈಕೆ ಮಾಡುತ್ತಿದ್ದೇವೆ.
ಅದರಲ್ಲೂ, ಅಗತ್ಯ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದೇವೆ, ಆದರೆ, ಹೋಟೆಲ್ ಮತ್ತು ರೆಸ್ಟೋರೆಂಟ್, ಕ್ಯಾಟರಿಂಗ್ ಹಾಗೂ ಪಿಜಿ ಇತ್ಯಾದಿಗಳಿಗೆ ನಮಗೆ ದಿನನಿತ್ಯ 50,000 ಸಿಲಿಂಡರ್ ಅಗತ್ಯವಿದೆ.

ಭಾರೀ ತೊಂದರೆ ಆಗಿದೆ
ಆದರೆ, ನಮ್ಮಿಂದ ದಿನಕ್ಕೆ 1,000 ಸಿಲಿಂಡರ್ಗಳನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದ್ದು ಉಳಿದದ್ದನ್ನು ಭರಿಸಲಾಗುತ್ತಿಲ್ಲ, ಇದರಿಂದ ಭಾರೀ ತೊಂದರೆ ಆಗಿದೆ.
ವಿದ್ಯಾರ್ಥಿಗಳು ಮತ್ತು ಐಟಿ ವೃತ್ತಿಪರರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ವಾಣಿಜ್ಯ ಕ್ಷೇತ್ರಕ್ಕೆ ಅಗತ್ಯ ಇರುವ ಎಲ್ಪಿಜಿ ಪೂರೈಸಲು ತಕ್ಷಣವೇ ಕ್ರಮ ಕೈಗೊಳ್ಳಿ.
ಕೆಲವು ಭಾಗಗಳಲ್ಲಿ ಕೊರತೆ
ರಾಜ್ಯದ ಕೆಲವು ಭಾಗಗಳಲ್ಲಿ ಗೃಹ ಬಳಕೆದಾರರಿಗೂ ಸಮರ್ಪಕವಾಗಿ ಎಲ್ಪಿಜಿ ಪೂರೈಸಲು ಸಾಧ್ಯವಾಗುತ್ತಿಲ್ಲ, ನಿಮ್ಮ ಮಾರ್ಗಸೂಚಿ ಅನುಸರಿಸಿದರೂ ಕೊರತೆ ಇದೆ.
ತಕ್ಷಣವೇ ನಮಗೆ ಬೇಕಾಗಿರುವ ಅಡುಗೆ ಸಿಲಿಂಡರ್ಗಳನ್ನು ಒದಗಿಸಲು ಕ್ರಮ ಕೈಗೊಳ್ಳಿ ಎಂದು ತಾವು ಬರೆದಿರುವ ಎರಡು ಪುಟಗಳ ಪತ್ರದಲ್ಲಿ ವಿವರಿಸಿದ್ದಾರೆ.


