ಬೆಂಗಳೂರು:ಪ್ರಸಕ್ತ ವರ್ಷ ಮಳೆ ಕೊರತೆ ಉಂಟಾಗಬಹುದೆಂಬ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಲ್ಲಿನ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸಲು ಸರ್ಕಾರ ತೀರ್ಮಾನಿಸಿದೆ.
ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿರುವುದಲ್ಲದೆ, ಪ್ರಸ್ತುತ ವರ್ಷ ಜೂನ್ ಜುಲೈ ತಿಂಗಳಲ್ಲಿ ವಾಡಿಕೆ ಮಳೆ ಆಗಲಿದೆ, ತದನಂತರ ಮಳೆ ಕೊರತೆ ಎದುರಾಗುವ ಸಾಧ್ಯತೆ ಇದೆ.
ತಾಪಮಾನ ಹೆಚ್ಚಾಗಲಿದೆ
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆ ಕೊರತೆಯಾಗಲಿದೆ, ಈ ಬೇಸಿಗೆಯಲ್ಲಿ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಾಗಲಿದೆ, ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಲಿದೆ, ಈ ಕಾರಣಕ್ಕಾಗಿ ಕೆರೆ-ಕಟ್ಟೆ ಮತ್ತು ಜಲಾಶಯಗಳಲ್ಲಿ ಇರುವ ನೀರನ್ನು ಕುಡಿಯಲು ಮಾತ್ರ ಬಳಸಲು ತೀರ್ಮಾನಿಸಿದೆ.
ಸಭೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಪೂರ್ವ ಮುಂಗಾರಿನಲ್ಲಿ 17 ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ, 5 ಜಿಲ್ಲೆಗಳಲ್ಲಿ ಅಧಿಕ ಮಳೆ, 6 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದ್ದರೆ, 3 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದರು.
ಮುಂಬರುವ ತಿಂಗಳು ಲಾ ನಿನಾ ಪರಿಸ್ಥಿತಿ ತಟಸ್ಥವಾಗುವ ನಿರೀಕ್ಷೆ ಇದೆ, 2026ರ ಮೇ-ಜುಲೈ ವರೆಗೆ ಲಾ ನಿನಾ ತಟಸ್ಥವಾಗಿ ಮುಂದುವರೆಯುವ ಸಾಧ್ಯತೆ.
ಲಾ ನಿನಾ ಪರಿಸ್ಥಿತಿ
2026ರ ಜೂನ್ ಆಗಸ್ಟ್ ಅವಧಿಗೆ ಲಾ ನಿನಾ ಪರಿಸ್ಥಿತಿ ತಲೆದೋರಲಿದ್ದು, ವರ್ಷಾಂತ್ಯದವರೆಗೆ ಮುಂದುವರೆಯಲಿದೆ.
ಬೇಸಿಗೆಯಲ್ಲಿ 207 ತಾಲೂಕುಗಳ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ, ಈ ಪೈಕಿ 60 ತಾಲೂಕುಗಳು ಈಗಾಗಲೇ ನೀರಿನ ಕೊರತೆ ಎದುರಿಸುತ್ತಿದೆ.
ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಮುಂಜಾಗ್ರತಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕೇಂದ್ರಕ್ಕೆ ಪ್ರಸ್ತಾವನೆ
ಕಳೆದ ಅವಧಿಯಲ್ಲಿ ಮಲೆನಾಡು ಕರಾವಳಿ ಭಾಗದಲ್ಲಿ ಭೂ ಕುಸಿತ ಉಪಶಮನ ಕಾಮಗಾರಿಗಳಿಗಾಗಿ ಅಂದಾಜು 466.63 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ, ಅಲ್ಲದೆ, ಸಮುದ್ರ ಕೊರತೆ ಉಪಶಮನಕ್ಕೆ 198.88 ಕೋಟಿ ರೂ. ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ರಾಜ್ಯ ಸರ್ಕಾರ 2025 ನವೆಂಬರ್ 17ನೇ ತಾರೀಖು ಭಾರತ ಸರ್ಕಾರಕ್ಕೆ ಎರಡು ಜ್ಞಾಪನ ಪತ್ರಗಳನ್ನು ಸಲ್ಲಿಸಲಾಗಿದೆ, ಪರಿಹಾರವಾಗಿ ಬೆಳೆ ಇನ್ಪುಟ್ ಸಬ್ಸಿಡಿಗಾಗಿ 614.90 ಕೋಟಿ ರೂ. ಮತ್ತು ಹಾನಿಗೊಳಗಾದ ಮೂಲಸೌಕರ್ಯಗಳ ಮರುಸ್ಥಾಪನೆಗಾಗಿ ಚೇತರಿಕೆ ಮತ್ತು ಪುನರ್ ನಿರ್ಮಾಣ ಅಡಿಯಲ್ಲಿ 1521.67 ಕೋಟಿ ರೂ. ಕೋರಲಾಗಿದೆ.
ಮುನ್ನೆಚ್ಚರಿಕಾ ಕ್ರಮ
ಐಎಂಟಿಸಿ ತಂಡ 2026ರ ಜನವರಿ 11 ರಿಂದ 13 ರವರೆಗೆ ಕರ್ನಾಟಕಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದೆ, ಮಳೆ ಕೊರತೆ ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಪ್ತಾಹಿಕ ಮಳೆ ಮೇಲ್ವಿಚಾರಣೆ, ಜಿಲ್ಲಾವಾರು ಬೆಳೆ ಆಕಸ್ಮಿಕ ಯೋಜನೆ ಮತ್ತು ಬರ ನಿರೋಧಕ ಬಿತ್ತನೆಬೀಜ ತಳಿಗಳ ಅಭಿವೃದ್ಧಿಪಡಿಸುವುದು.
ಮೇವು ಲಭ್ಯತೆ ಬಗ್ಗೆ ನಿರಂತರ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಮೇವಿನ ಕೊರತೆಗಾಗಿ ಆಕಸ್ಮಿಕ ಯೋಜನೆಗಳನ್ನು ಸಿದ್ಧಪಡಿಸುವುದು ಎಂದರು.


