ಬೆಂಗಳೂರು:’ಆಡಳಿತ ವಿಕೇಂದ್ರೀಕರಣ ಹಾಗೂ ಜನರ ಮನೆ ಬಾಗಿಲಿಗೆ ಸರ್ಕಾರ’ ಧ್ಯೇಯದೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ಸಭೆಯನ್ನು ಕರಾವಳಿ ತೀರದ ಮಂಗಳೂರಿನಲ್ಲಿ ನಾಳೆ, ಶುಕ್ರವಾರ ನಡೆಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಪ್ರಜಾಸೌಧದಲ್ಲಿ ಮಂತ್ರಿಮಂಡಲ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ, ಮಲೆನಾಡು ಮತ್ತು ಕರಾವಳಿ ತೀರದ ಜನರಿಗೆ ಸ್ಪಂದಿಸುವ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಿದ್ದಾರೆ.
ಪ್ರಜಾಸೇವಾ ಇಲಾಖೆ
ಜನರ ಮನೆ ಬಾಗಿಲಿಗೆ ಸರ್ಕಾರ ಕೊಂಡೊಯ್ಯಬೇಕೆಂಬ ಗುರಿಯೊಂದಿಗೆ ಪ್ರತ್ಯೇಕ ಪ್ರಜಾಸೇವಾ ಇಲಾಖೆ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಹಾಗೂ ಶಾಸಕರು ಜಿಲ್ಲಾ, ತಾಲ್ಲೂಕು ಕೇಂದ್ರ, ಹೋಬಳಿ ಹಾಗೂ ಪಂಚಾಯತ್ ಮಟ್ಟದಲ್ಲಿ ತಿಂಗಳಲ್ಲಿ ಎರಡು ಬಾರಿ ಸಭೆಗಳನ್ನು ನಡೆಸಿ ಜನಸಾಮಾನ್ಯರ ಕಷ್ಟಗಳನ್ನು ಆಲಿಸಿ, ಪರಿಹಾರ ಒದಗಿಸುವ ಉದ್ದೇಶ ಈ ಇಲಾಖೆಯದ್ದಾಗಿದೆ.
ಈಗಾಗಲೇ ಮುಖ್ಯಮಂತ್ರಿ ಸ್ವತಃ ವಿಜಯನಗರ ಜಿಲ್ಲೆಯಲ್ಲಿ ಪ್ರಜಾಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಇದುವರೆಗೂ 50,000ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವುಗಳಲ್ಲಿ ಶೇ.60ರಷ್ಟು ವಿಲೇವಾರಿಯಾಗಿದೆ.
ಜಿಲ್ಲಾ ಮಟ್ಟಕ್ಕೆ ವಿಧಾನಸೌಧ
ಈ ಯಶಸ್ಸಿನಿಂದ ಉತ್ತೇಜಿತರಾಗಿ ಮುಖ್ಯಮಂತ್ರಿ ಅವರು, ವಿಧಾನಸೌಧವನ್ನೇ ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯುವ ತೀರ್ಮಾನಕ್ಕೆ ಬಂದಿದ್ದಾರೆ.
ಇದರ ಮೊದಲ ಭಾಗವಾಗಿ ಮಂಗಳೂರಿನಲ್ಲಿ ಮೊದಲ ಸಂಪುಟ ಸಭೆ ನಡೆಯುತ್ತಿದೆ.
ನಂತರದ ದಿನಗಳಲ್ಲಿ, ಎಲ್ಲಿ ಸಮಸ್ಯೆಗಳು ಹೆಚ್ಚು ಇರುವುದೋ ಅಲ್ಲಿ ಮಂತ್ರಿಮಂಡಲ ಸಭೆ ನಡೆಸಿ, ಅಲ್ಲಿಯೇ ಪರಿಹಾರ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
ಬರ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲೆಂದೇ ಸೆಪ್ಟೆಂಬರ್ 21 ರಿಂದ ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದಿದ್ದಾರೆ.
ಮುಖ್ಯಮಂತ್ರಿ ಖುದ್ದು ಪ್ರವಾಸ
ಅದಕ್ಕೂ ಮುನ್ನ ಹೈದರಾಬಾದ್ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ತಾವೇ ಖುದ್ದಾಗಿ ಸಂಚರಿಸಿ ಸಮಸ್ಯೆಗಳನ್ನು ಆಲಿಸಲು ಬುಧವಾರದಿಂದ ಪ್ರವಾಸ ಪ್ರಾರಂಭಿಸಿದ್ದಾರೆ.
ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದ ವೇಳೆ ವಿಧಾನಸೌಧವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯಬೇಕೆಂಬ ಉದ್ದೇಶದಿಂದ ಮೊದಲ ಬಾರಿಗೆ ರಾಜಧಾನಿಯಿಂದ ಹೊರಗೆ ಮಂತ್ರಿಮಂಡಲ ಸಭೆಗಳನ್ನು ನಡೆಸಿದ ಖ್ಯಾತಿ ಸಲ್ಲುತ್ತದೆ.
ನಂತರದ ದಿನಗಳಲ್ಲಿ ಜೆ.ಎಚ್.ಪಟೇಲರು, ’ನಾನಿದ್ದಲ್ಲೇ ಸರ್ಕಾರ ಮತ್ತು ಆಡಳಿತ’ ಎಂಬ ಧ್ಯೇಯವಾಕ್ಯದೊದಿಗೆ, ಅನಾರೋಗ್ಯದಿಂದ ಬಳಲುತ್ತಿದ್ದರೂ ಪ್ರಮುಖ ನಿರ್ಧಾರಗಳನ್ನು ತುಮಕೂರು ರಸ್ತೆಯ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲೇ ಹೆಚ್ಚು ಸಂಪುಟ ಸಭೆಗಳನ್ನು ನಡೆಸುವ ಮೂಲಕ ತಮ್ಮ ಜನಸೇವಾ ಕೈಂಕರ್ಯ ಕೈಗೊಂಡಿದ್ದರು.
ನಿಸರ್ಗದ ಮಡಿಲಲ್ಲಿ ಸಭೆ
ಅಲ್ಲದೆ, ಅಧಿಕಾರಿಗಳು ಮತ್ತು ಸಚಿವರನ್ನು ಒಳಗೊಂಡ ಸಂಪುಟ ಸಭೆಗಳನ್ನು ತಿಪ್ಪಗೊಂಡನಹಳ್ಳಿ ಅಣೆಕಟ್ಟೆಯ ನಿಸರ್ಗದ ಮಡಿಲಲ್ಲಿ ನಡೆಸಿದ ಖ್ಯಾತಿ ಪಟೇಲ್ ಅವರದು.
ನಂತರ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರುಗಳು ಬೆಳಗಾವಿ, ಕಲಬುರಗಿ, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧೆಡೆ ಮಂತ್ರಿಮಂಡಲ ಸಭೆಗಳನ್ನು ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಕಾರ್ಯ ಮಾಡಿದ್ದರು.
ಇದೀಗ ಶಿವಕುಮಾರ್ ಮೊದಲ ಹಂತದಲ್ಲಿ ಎಲ್ಲಾ ವಿಭಾಗಮಟ್ಟದಲ್ಲೂ ಸಂಪುಟ ಸಭೆ ನಡೆಸಲು ನಿರ್ಧರಿಸಿದ್ದು, ಮೊದಲ ಸಭೆ ಕರಾವಳಿ ತೀರದಲ್ಲಿ ನಡೆಯುತ್ತಿದೆ.


