ಬೆಂಗಳೂರು:ಕೇಂದ್ರ ಚುನಾವಣಾ ಆಯೋಗ ಪ್ರಾಯೋಜಿತ ಮತಗಳ್ಳತನ ಅಕ್ರಮ ವಿರುದ್ಧ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ರಾಷ್ಟ್ರದ ಜನತೆಯ ಗಮನ ಸೆಳೆಯಲು ನಾಳೆ (ಶುಕ್ರವಾರ) ನಗರದಲ್ಲಿ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು ಮತ್ತು ವಿವಿಧ ಸಮುದಾಯಗಳ ಗಣ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸಮಾವೇಶದಲ್ಲಿ ಹಲವು ನಾಯಕರು
ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಬೆಂಗಳೂರು ಸಮಾವೇಶದ ನಂತರ ಇಡೀ ರಾಷ್ಟ್ರಾದ್ಯಂತ ಸಭೆ, ಸಮಾರಂಭ ನಡೆಸಿ ಚುನಾವಣಾ ಆಯೋಗದ ಮತಗಳ್ಳತನವನ್ನು ಜನರ ಮುಂದಿಡಲು ಹೊರಟಿದ್ದಾರೆ.
ಮತಗಳ್ಳತನಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಸಮಾರಂಭದಲ್ಲೇ ಬಹಿರಂಗಪಡಿಸಿ, ನಂತರ ಕೆಲವು ಮುಖಂಡರೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ರಾಜ್ಯ ಮುಖ್ಯಚುನಾಚವಣಾ ಆಯುಕ್ತರಿಗೆ ಸಲ್ಲಿಸಲಿದ್ದಾರೆ.
ಬೃಹತ್ ಸಮಾವೇಶ
ಮತಗಳ್ಳತನಕ್ಕೆ ಸಂಬಂಧಿಸಿದಂತೆ ರಾಹುಲ್ ಇದುವರೆಗೂ ಹೇಳಿಕೆಗಳನ್ನು ನೀಡುತ್ತಿದ್ದರಾದರೂ ಬೃಹತ್ ಸಮಾವೇಶ ನಡೆಸಿ, ದಾಖಲೆಗಳನ್ನು ಜನರ ಮುಂದಿಡುವ ಕೆಲಸ ಮೊದಲ ಬಾರಿಯಾಗಿದೆ.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬುದಕ್ಕೆ ಕೆಲವು ಪುರಾವೆಗಳನ್ನು ಸಂಗ್ರಹಿಸಿರುವ ರಾಹುಲ್, ಅವುಗಳನ್ನು ಅದೇ ಕ್ಷೇತ್ರದ ವ್ಯಾಪ್ತಿಗೆ ಬರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜನರ ಮುಂದಿಡುತ್ತಿದ್ದಾರೆ.
ಸಮಾವೇಶ ಯಶಸ್ವಿಗಾಗಿ ಪಕ್ಷ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ, ಜೊತೆಗೆ ಹೆಚ್ಚಿನ ಬಿಗಿ ಬಂದೋಬಸ್ತ್ಗಾಗಿ ಸರ್ಕಾರ ಹೆಚ್ಚುವರಿ ಪೋಲಿಸರನ್ನು ನಿಯೋಜಿಸಿದೆ.

ಕಾರ್ಯಕ್ರಮ ಯಶಸ್ವಿಗೆ ಶ್ರಮ
ಕಾರ್ಯಕ್ರಮ ಯಶಸ್ವಿಗೊಳಿಸುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ತಮ್ಮ ಹೈದರಾಬಾದ್ ಪ್ರವಾಸ ರದ್ದುಪಡಿಸಿ ಪಕ್ಷದ ಕಚೇರಿಯಲ್ಲಿ ಕುಳಿತು ಸಮಾವೇಶ ವ್ಯವಸ್ಥೆ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿದ್ದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಮತಗಳ್ಳತನ ವಿಚಾರವನ್ನು ನಮ್ಮ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು ಮತದಾರರ ಹಕ್ಕಿನ ರಕ್ಷಣೆಗಾಗಿ ಹೊರಟಿದ್ದಾರೆ.
ಆಯೋಗಕ್ಕೆ ಪುರಾವೆ ಸಲ್ಲಿಕೆ
ಆಗಸ್ಟ್ 8ರಂದು ಬೆಳಗ್ಗೆ 10-30ಕ್ಕೆ ಆಗಮಿಸುವ ರಾಹುಲ್, ನೇರವಾಗಿ ಸಮಾವೇಶ ಸ್ಥಳ ತಲುಪಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಪುರಾವೆಗಳ ಸಮೇತ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಿದ್ದಾರೆ ಎಂದರು.
ಈ ಮಧ್ಯೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಭಟನೆ ವೇಳೆ ಎಲ್ಲ ಪೊಲೀಸ್ ಭದ್ರತೆ ಕೈಗೊಂಡಿದ್ದು, ಕೇಂದ್ರದಿಂದ ಎಸ್ಪಿಜಿ ಬಂದಿದೆ, ಅವರೊಂದಿಗೆ ನಮ್ಮ ಪೊಲೀಸರು ಸಂಪರ್ಕದಲ್ಲಿದ್ದಾರೆ, ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರಿಗೂ ಭದ್ರತೆ ಒದಗಿಸಲಾಗುವುದು ಎಂದರು.


