ಬೆಂಗಳೂರು:ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ತಂದಿದೆ.
ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಕಡೆಗಣಿಸಿ ವಲಸಿಗರು ಮತ್ತು ನಾಯಕರ ಮನೆ ಬಾಗಿಲು ಕಾಯುವವರಿಗೆ ಹೆಚ್ಚು ಅವಕಾಶ ಮಾಡಿಕೊಡಲಾಗಿದೆ ಎಂಬ ದೂರುಗಳು ಬಂದಿವೆ.
ಸಿದ್ದರಾಮಯ್ಯ ಅನುಮೋದನೆ
ಎಐಸಿಸಿ ಕಳುಹಿಸಿದ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿ, ಇಲಾಖೆಗಳಿಂದ ಆದೇಶ ಹೊರಡಿಸುವ ವೇಳೆ ತಮಗೆ ಬೇಕಾದವರನ್ನು 7 ನಿಗಮ-ಮಂಡಳಿಗಳಿಗೆ ನೇಮಿಸಿದ್ದಾರೆ.
ನೇಮಕಗೊಂಡವರಲ್ಲಿ ಒಂದೇ ಸಮುದಾಯಕ್ಕೆ ಸೇರಿದವರಿದ್ದಾರೆ, ವಿಶ್ವ ವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕಾತಿ ವಿಚಾರದಲ್ಲೂ ಮುಖ್ಯಮಂತ್ರಿ ಅವರು, ಪಕ್ಷದವರನ್ನು ನಿರ್ಲಕ್ಷಿಸಿದ್ದಾರೆ.
ವಲಸಿಗರು ಮತ್ತು ನಾಯಕರ ಮನೆ ಬಾಗಿಲು ಕಾಯುವವರಿಗೆ ಅಧ್ಯಕ್ಷ ಸ್ಥಾನ ನೀಡಿ, ಪಕ್ಷಕ್ಕೆ ದುಡಿದ ಕೆಲವರನ್ನಷ್ಟೇ ನೇಮಿಸಿ ಅಪಮಾನ ಮಾಡಿದ್ದಾರೆ.
ಗೊಂದಲ ಸರಿಪಡಿಸಿ
ಈ ಗೊಂದಲ ಸರಿಪಡಿಸಿ ಕಾರ್ಯಕರ್ತರಿಗೆ ಸಲ್ಲಬೇಕಾದ ಸ್ಥಾನ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಅಸಮಾಧಾನಿತ ಕಾರ್ಯಕರ್ತರು ಇಂದು ಬೆಳಗ್ಗೆ ಶಿವಕುಮಾರ್ ಅವರ ಸದಾಶಿವನಗರದಲ್ಲಿನ ನಿವಾಸಕ್ಕೆ ತೆರಳಿ ಎಲ್ಲೆಲ್ಲಿ ಲೋಪವಾಗಿದೆ ಎಂಬುದನ್ನು ಗಮನಕ್ಕೆ ತಂದಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಬೇಡ, ನಾವು ಪಕ್ಷ ಕಟ್ಟಲು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದೇವೆ, ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ ಅವಕಾಶ ನೀಡಲಿಲ್ಲ, ಪಕ್ಷ ಅಧಿಕಾರಕ್ಕೆ ಬಂದಾಗಲೂ ನ್ಯಾಯ ಒದಗಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಶಿಫಾರಸು ಪಟ್ಟಿ
ಕೆಪಿಸಿಸಿ ಶಿಫಾರಸಿನ ಮೇರೆಗೆ ಎಐಸಿಸಿ ನಿಗಮ-ಮಂಡಳಿ ಪಟ್ಟಿಗೆ ಹಸಿರು ನಿಶಾನೆ ನೀಡಿದೆ, ಅದರಲ್ಲೂ ಸಣ್ಣ-ಪುಟ್ಟ ದೋಷಗಳಾಗಿವೆ, ನಂತರ ಹೆಚ್ಚುವರಿಯಾಗಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿಗೆ ಪಕ್ಷ ಅನುಮತಿ ನೀಡಿತ್ತೇ ಎಂದು ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲವು ವಿಚಾರಗಳಲ್ಲಿ ಪಕ್ಷವನ್ನು ಕಡೆಗಣಿಸಿ ಸರ್ಕಾರ, ತೆರೆಮರೆಯಲ್ಲೇ ಪ್ರಮುಖ ಸಂಸ್ಥೆಗಳಿಗೆ ನೇಮಕಾತಿ ಕಾರ್ಯ ನಡೆದಿದೆ, ಹೀಗಾದರೆ ನಮ್ಮ ಗತಿ ಏನು ಎಂದಿದ್ದಾರೆ.
ಬಾವುಟ ಕಟ್ಟಲು ನಾವು ಬೇಕು
ಯಾವುದಾದರೂ ಕೆಲಸ, ಕಾರ್ಯಗಳಿಗೆ ಸಚಿವರ ಬಳಿಗೆ ತೆರಳಿದರೆ, ನಮ್ಮನ್ನು ಕತ್ತೆತ್ತಿಯೂ ನೋಡುವುದಿಲ್ಲ, ಕುರ್ಚಿ ಹಾಕಲು, ಬಾವುಟ ಕಟ್ಟಲು ನಾವು ಬೇಕು, ಅಧಿಕಾರ ಮಾತ್ರ ಅವರಿಗೆ ಎಂದಿದ್ದಾರೆ.
ಕಾರ್ಯಕರ್ತರ ಅಹವಾಲನ್ನು ಸೌಮ್ಯವಾಗಿ ಆಲಿಸಿದ ಶಿವಕುಮಾರ್ ಕೆಲವು ಸಂಗತಿಗಳನ್ನು ನನ್ನ ಗಮನಕ್ಕೆ ತಂದಿದ್ದೀರಿ, ನಿಮ್ಮ ಜೊತೆ ಪಕ್ಷದ ಕಚೇರಿಯಲ್ಲಿ ಕುಳಿತು ಮತ್ತೊಮ್ಮೆ ಚರ್ಚೆ ಮಾಡುವೆ ಎನ್ನುವ ಮೂಲಕ ಯಾವುದೇ ಭರವಸೆ ನೀಡದೆ, ಮಾಗಡಿ ಪ್ರವಾಸಕ್ಕೆ ತೆರಳಿದರು.

