ಸಿದ್ದರಾಮಯ್ಯ ವಿರುದ್ಧ ಬಲ ಪ್ರದರ್ಶನಕ್ಕೆ ಶಾಸಕರ ತಂಡ ದೆಹಲಿಗೆ
ಬೆಂಗಳೂರು:ಪ್ರಭಾವಿ ಸಚಿವರೂ ಸೇರಿದಂತೆ 63 ಶಾಸಕರು ಸದ್ಯಕ್ಕೆ ಶಿವಕುಮಾರ್ ಬೆಂಬಲಕ್ಕೆ ಇದ್ದಾರೆಂದು ಉನ್ನತ ಮೂಲಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ಮತ್ತು ಪಟ್ಟಿ ತಲುಪಿಸಿದೆ.
ಶಿವಕುಮಾರ್ ಬೆಂಬಲಕ್ಕೆ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಕೇವಲ ಒಬ್ಬ ಶಾಸಕರನ್ನು ಹೊರತುಪಡಿಸಿ ಹೆಚ್ಚಿನ ಬೆಂಬಲಿತರು ಇಲ್ಲ, ಉತ್ತರ ಕರ್ನಾಟಕ ಭಾಗದ ವೀರಶೈವ ಶಾಸಕರು ಉಪ ಮುಖ್ಯಮಂತ್ರಿ ಪರ ನಿಂತಿದ್ದಾರೆ.
ಗೌಪ್ಯ ಭೇಟಿ-ಮಾತುಕತೆ
ಈಗಾಗಲೇ ಬಹುತೇಕ ಸಚಿವರು ಮತ್ತು ಶಾಸಕರು ಗೌಪ್ಯವಾಗಿ ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದಲ್ಲದೆ, ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ತಮಗೆ ಶಾಸಕರ ಬೆಂಬಲ ದೊರೆಯುತ್ತಿದ್ದಂತೆ, ಶಿವಕುಮಾರ್ ವರಿಷ್ಠರ ಮುಂದೆ ಬಲ ಪ್ರದರ್ಶನಕ್ಕೆ ತಂಡೋಪ ತಂಡವಾಗಿ ಬೆಂಬಲಿತ ಶಾಸಕರನ್ನು ದೆಹಲಿಯ ವರಿಷ್ಠರ ಭೇಟಿಗೆ ಕಳುಹಿಸುತ್ತಿದ್ದಾರೆ.
ಸಚಿವ ಚಲುವರಾಯಸ್ವಾಮಿ ನಾಯಕತ್ವದಲ್ಲಿ ಕಳೆದ ಗುರುವಾರ ಆಯ್ದ ಶಾಸಕರು ದೆಹಲಿಗೆ ತೆರಳಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ವರಿಷ್ಠರ ಸೂತ್ರದಂತೆ ಶಿವಕುಮಾರ್ ಅವರಿಗೆ ಅಧಿಕಾರ ಕೊಡಬೇಕೆಂದು ಮನವಿ ಮಾಡಿದ್ದರು.
9 ಶಾಸಕರು ತಡರಾತ್ರಿ ದೆಹಲಿಗೆ
ಇದೀಗ ಶರತ್ ಬಚ್ಚೇಗೌಡ ನಾಯಕತ್ವದಲ್ಲಿ 9 ಶಾಸಕರು ಭಾನುವಾರ ತಡರಾತ್ರಿ ದೆಹಲಿಗೆ ತೆರಳಿ, ಇಂದು ವರಿಷ್ಠರನ್ನು ಭೇಟಿ ಮಾಡಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಕೋರಿದ್ದಾರೆ.
ಬಚ್ಚೇಗೌಡ ಜೊತೆ ಶ್ರೀನಿವಾಸ ಮಾನೆ, ನಯನಾ ಮೋಟಮ್ಮ, ಬಸವರಾಜ್ ಶಿವಗಂಗಾ, ಕದಲೂರು ಉದಯ್, ಬಾಲಕೃಷ್ಣ, ಇಕ್ಬಾಲ್ ಹುಸೇನ್ ಸೇರಿದಂತೆ 9 ಮಂದಿ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ.
ಮಂಥರ್ ಗೌಡ ಹಾಗೂ ತಮ್ಮಯ್ಯ ನಾಯಕತ್ವದಲ್ಲಿ 13 ಮಂದಿ ಮೊದಲ ಬಾರಿಗೆ ಆಯ್ಕೆಗೊಂಡಿರುವ ಶಾಸಕರು ಸೋಮವಾರ ತಡರಾತ್ರಿ ಅಥವಾ ಮಂಗಳವಾರ ದೆಹಲಿ ಯಾತ್ರೆ ಕೈಗೊಂಡು ವರಿಷ್ಠರನ್ನು ಭೇಟಿ ಮಾಡಿ ಶಿವಕುಮಾರ್ ಅವರಿಗೆ ಅಧಿಕಾರ ಕೊಡಿ ಎಂದು ಒತ್ತಾಯಿಸಲಿದ್ದಾರೆ.
ಅವರ ಬಳಿ ಬೆರಳೆಣಿಕೆ ಶಾಸಕರು
ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ, ಅವರ ಬಳಿ ಬೆರಳೆಣಿಕೆಯಷ್ಟು ಸದಸ್ಯರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಮುಖ್ಯಮಂತ್ರಿ ಹೇಳಿಕೆ ಸುಳ್ಳು ಮಾಡುವುದು, ತಮಗೆ ಶಾಸಕಾಂಗ ಪಕ್ಷದಲ್ಲಿ ಬಹುಮತ ಇದೆ ಎಂದು ಸಾಬೀತುಪಡಿಸಲು, ಪರೋಕ್ಷವಾಗಿ ತಂಡೋಪ ತಂಡದಲ್ಲಿ ತಮ್ಮ ಬೆಂಬಲಿತ ಶಾಸಕರನ್ನು ದೆಹಲಿಗೆ ತೆರಳುವಂತೆ ಶಿವಕುಮಾರ್ ಮಾಡುತ್ತಿದ್ದಾರೆ.
ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವರಿಷ್ಠರ ನಿರ್ಧಾರವೇ ಅಂತಿಮ ಎಂಬುದಾಗಿ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರೂ ಉಪಮುಖ್ಯಮಂತ್ರಿ ಮಾತ್ರ ಶಾಸಕರ ಬಲ ಹೆಚ್ಚಿಸಿಕೊಳ್ಳುವ ಕಸರತ್ತು ಮುಂದುವರೆಸಿದ್ದಾರೆ.
ಮುಖ್ಯಮಂತ್ರಿಗೆ 50 ಶಾಸಕರ ಪಟ್ಟಿ
ಸಂಪುಟದ 13 ಸಚಿವರು ಶಿವಕುಮಾರ್ ಪರ ಇದ್ದಾರೆ ಎಂದಿರುವ ಉನ್ನತ ಮೂಲಗಳು, ಕೆಲವರ ಹೆಸರು ಸೇರಿಸಿ 50 ಶಾಸಕರ ಪಟ್ಟಿಯನ್ನು ಮುಖ್ಯಮಂತ್ರಿ ಅವರಿಗೆ ನೀಡಿದೆ.
ಮುಂದಿನ ಒಂದು ವಾರದಲ್ಲಿ ಈ ಸಂಖ್ಯೆ ಹೆಚ್ಚುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂಬ ಮಾಹಿತಿ ನೀಡಲಾಗಿದೆ..
ಮುಖ್ಯಮಂತ್ರಿ ಅವರಿಗೆ ತಲುಪಿಸಿರುವ ಪಟ್ಟಿಯಲ್ಲಿ ಶಿವಕುಮಾರ್ ಪರವಾಗಿ ಬಾಲಕೃಷ್ಣ (ಮಾಗಡಿ), ಉದಯಕುಮಾರ್ (ಮದ್ದೂರು), ರವಿಕುಮಾರ್ ಗೌಡ (ಗಣಿಗ) (ಮಂಡ್ಯ), ಎಚ್.ಎ.ಇಕ್ಬಾಲ್ ಹುಸೇನ್ (ರಾಮನಗರ), ಮಂಥರ್ ಗೌಡ (ಮಡಿಕೇರಿ), ಶರತ್ ಬಚ್ಚೇಗೌಡ (ಹೊಸಕೋಟೆ) ಶಿವಣ್ಣ (ಆನೇಕಲ್), ಶ್ರೀನಿವಾಸ್ (ಪುಲಿಕೇಶಿನಗರ).
ಲಕ್ಷ್ಮೀ ಹೆಬ್ಬಾಳ್ಕರ್, ಸಿ.ಪಿ.ಯೋಗೇಶ್ವರ್
ಎನ್.ಎ.ಹ್ಯಾರಿಸ್ (ಶಾಂತಿನಗರ), ರಾಜೇಗೌಡ (ಶೃಂಗೇರಿ), ತಮ್ಮಯ್ಯ (ಚಿಕ್ಕಮಗಳೂರು), ಡಿ.ಸುಧಾಕರ್ (ಹಿರಿಯೂರು), ಬಸವರಾಜ ಶಿವಗಂಗಾ (ಚನ್ನಗಿರಿ), ವೀರೇಂದ್ರ ಪಪ್ಪಿ (ಚಿತ್ರದುರ್ಗ), ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ), ಸಿ.ಪಿ.ಯೋಗೇಶ್ವರ್ (ಚನ್ನಪಟ್ಟಣ).
ಜಯಚಂದ್ರ (ಶಿರಾ), ತನ್ವೀರ್ ಸೇಠ್ (ನರಸಿಂಹರಾಜ), ಗಣೇಶ್ ಹುಕ್ಕೇರಿ (ಚಕ್ಕೋಡಿ ಸದಲಗಾ), ಯಶವಂತರಾಯಗೌಡ ಪಾಟೀಲ್ (ಇಂಡಿ), ಲಕ್ಷ್ಮಣ ಸವದಿ (ಅಥಣಿ), ವಿನಯ್ ಕುಮಾರ್ (ಧಾರವಾಡ ಗ್ರಾಮೀಣ).
ರಂಗನಾಥ್ (ಕುಣಿಗಲ್), ರಾಜುಕಾಗೆ (ಕಾಗವಾಡ), ಮಹೇಂದ್ರ ತಮ್ಮಣ್ಣವರ್ (ಕುಡಚಿ), ಶರಣಬಸಪ್ಪ ದರ್ಶನಾಪುರ (ಶಹಪುರ), ಶಿವಾನಂದ ಪಾಟೀಲ್ (ಬಸವನ ಬಾಗೇವಾಡಿ), ಅಶೋಕ್ ಎಂ. ಮನಗೋಳಿ (ಸಿಂಧಗಿ), ಶ್ರೀನಿವಾಸ (ಗುಬ್ಬಿ).
ನಯನಾ ಮೋಟಮ್ಮ, ಚಲುವರಾಯಸ್ವಾಮಿ
ನಯನಾ ಮೋಟಮ್ಮ (ಮೂಡಿಗೆರೆ), ಶ್ರೀನಿವಾಸಯ್ಯ (ನೆಲಮಂಗಲ), ನಾ.ರಾ.ಭರತರೆಡ್ಡಿ (ಬಳ್ಳಾರಿ), ಗಣೇಶ್ (ಕಂಪ್ಲಿ), ರಾಮಲಿಂಗಾ ರೆಡ್ಡಿ (ಬಿಟಿಎಂ ಲೇಔಟ್), ಚಲುವರಾಯಸ್ವಾಮಿ (ನಾಗಮಂಗಲ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ).
ಅಶೋಕ್ ಕುಮಾರ್ ರೈ (ಪುತ್ತೂರು), ದೇವೇಂದ್ರಪ್ಪ (ಜಗಳೂರು), ಪ್ರಕಾಶ್ ಕೋಳಿವಾಡ (ರಾಣೆಬೆನ್ನೂರು), ಖಾನಿಜಾ ಫಾತಿಮಾ (ಕಲಬುರಗಿ ಉತ್ತರ), ಚೆನ್ನಾರೆಡ್ಡಿ (ಯಾದಗಿರಿ).
ಮಧು ಬಂಗಾರಪ್ಪ (ಸೊರಬ), ಭೀಮಣ್ಣ ನಾಯಕ್ (ಶಿರಸಿ), ಅಲ್ಲಮಪ್ರಭು ಪಾಟೀಲ್ (ಕಲಬುರಗಿ ದಕ್ಷಿಣ), ಜಿ.ಎಸ್.ಪಾಟೀಲ್ (ರೋಣ), ಸಂಗಮೇಶ್ (ಭದ್ರಾವತಿ), ಶಾಂತನಗೌಡ (ಹೊನ್ನಾಳಿ), ಬಸವನಗೌಡ ದದ್ದಲ್ (ರಾಯಚೂರು), ಕೆ.ಎಚ್.ಪುಟ್ಟಸ್ವಾಮಿಗೌಡ (ಗೌರಿಬಿದನೂರು) ಹೆಸರುಗಳು ಉನ್ನತ ಮೂಲಗಳು ನೀಡಿರುವ ಪಟ್ಟಿಯಲ್ಲಿದೆ ಎನ್ನಲಾಗಿದೆ.

