ಅಧಿಕಾರ ಹಸ್ತಾಂತರ ಗೊಂದಲ ಕಾಂಗ್ರೆಸ್ ವರಿಷ್ಠರು ನಿವಾರಿಸಲಿ
ಬೆಂಗಳೂರು:ಅಧಿಕಾರ ಹಸ್ತಾಂತರ ಗೊಂದಲ ನಿವಾರಿಸಲು ಕಾಂಗ್ರೆಸ್ ವರಿಷ್ಠರು ಮಧ್ಯಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಮನವಿ ಮಾಡಿದ್ದಾರೆ.
ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಎರಡೂವರೆ ವರ್ಷ ಆಡಳಿತದ ನಂತರ ಏನಾಗಬೇಕು ಎಂಬುದರ ಬಗ್ಗೆ ದೆಹಲಿಯಲ್ಲಿ ಐದಾರು ಮಂದಿ ನಡುವೆ ನಡೆದ ಮಾತುಕತೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕೆಲವು ಶಾಸಕರ ಅಭಿಪ್ರಾಯ
ಸುದ್ದಿಗಾರರೊಂದಿಗೆ ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಅವರು, ಪಕ್ಷದ ಕೆಲವು ಶಾಸಕರು ದೆಹಲಿಗೆ ತೆರಳಿ ವರಿಷ್ಠರ ಮುಂದೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿದ್ದಾರೆ.
ಶಾಸಕರಿಗೆ ಅವರ ಅಭಿಪ್ರಾಯ ಮಂಡಿಸಲು ಸ್ವಾತಂತ್ರ್ಯ ಇದೆ, ವರಿಷ್ಠರು ಏನು ಹೇಳುತ್ತಾರೋ ನೋಡೋಣ ಎಂದರು.
ಅಂತಿಮವಾಗಿ ಈ ಎಲ್ಲಾ ಗೊಂದಲಗಳಿಗೆ ಮುಕ್ತಾಯ ಹಾಡಲು ವರಿಷ್ಠರು ತ್ವರಿತವಾಗಿ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದರು.
ರಾಹುಲ್ ಗಾಂಧಿ ಭೇಟಿ ಇಲ್ಲ
ಇಂತಹ ಸನ್ನಿವೇಶದಲ್ಲಿ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಇರಾದೆ ಸದ್ಯಕ್ಕಿಲ್ಲ.
ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆಗೆ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇನೆ, ಎಲ್ಲವೂ ದೆಹಲಿ ನಾಯಕರೇ ನಿರ್ಧರಿಸಬೇಕು ಎಂದರು.
ಕನಕಪುರದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಕೆಲವು ಶಾಸಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುತ್ತಿರುವ ವಿಚಾರ ನನಗೆ ತಿಳಿದಿಲ್ಲ.
ಶಾಸಕರನ್ನು ದೆಹಲಿಗೆ ಕಳುಹಿಸಿಲ್ಲ
ನನ್ನನ್ನು ಮುಖ್ಯಮಂತ್ರಿ ಮಾಡಬೇಕೆಂದು ಯಾರನ್ನೂ ಕೇಳುತ್ತಿಲ್ಲ, ಯಾವ ಶಾಸಕರನ್ನೂ ದೆಹಲಿಗೆ ಕಳುಹಿಸಿಲ್ಲ, ಅಷ್ಟೇ ಅಲ್ಲ, ಯಾರ ಜೊತೆಯೂ ಚರ್ಚೆಯೂ ಮಾಡಿಲ್ಲ.
ಪಕ್ಷದ ಶಾಸಕರಿಗೆ ಸ್ವಾತಂತ್ರ್ಯವಿದೆ ಅವರು ತಮ್ಮ ಅಭಿಪ್ರಾಯ ಮತ್ತು ನಿಲುವುಗಳನ್ನು ವರಿಷ್ಠರ ಮುಂದೆ ಹೇಳಿಕೊಳ್ಳಬಹುದು, ನಾಯಕನ ಆಯ್ಕೆ ಮತ್ತು ಅಧಿಕಾರ ಹಸ್ತಾಂತರ ವಿಷಯದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಶಿವಕುಮಾರ್, ಅದು ನಾಲ್ಕು ಗೋಡೆ ಮಧ್ಯೆ ನಮ್ಮ ನಾಯಕರು ಮಾತನಾಡಿದ ವಿಚಾರ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತೇನೆ, ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುವುದಿಲ್ಲ, ಪಕ್ಷ, ಕಾರ್ಯಕರ್ತರಿದ್ದರೆ ನಾವು, ಯಾವುದೇ ಕಾರಣಕ್ಕೂ ಪಕ್ಷವನ್ನು ದುರ್ಬಲಗೊಳಿಸಲು ಅವಕಾಶ ನೀಡುವುದಿಲ್ಲ ಎನ್ನುವ ಮೂಲಕ ಅಧಿಕಾರ ಹಸ್ತಾಂತರ ಮಾತುಕತೆ ನಡೆದಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.
ಏಳೂವರೆ ವರ್ಷ ಮುಖ್ಯಮಂತ್ರಿ
ಸಿದ್ದರಾಮಯ್ಯ ನಮ್ಮ ನಾಯಕರು, ಏಳೂವರೆ ವರ್ಷ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ, ಎರಡು ಬಾರಿ ಪ್ರತಿಪಕ್ಷ ನಾಯಕರೂ ಆಗಿದ್ದಾರೆ, ಮುಂದಿನ ಮುಂಗಡಪತ್ರವನ್ನೂ ಮಂಡಿಸುವುದಾಗಿ ಹೇಳಿದ್ದಾರೆ, ಬಹಳ ಸಂತೋಷ.
ಅವರು ದುಡಿದಿದ್ದಾರೆ, ಪಕ್ಷ ಕಟ್ಟಿದ್ದಾರೆ ಮುಂದಿನ 2028ರ ಚುನಾವಣೆ ನಮ್ಮ ಗುರಿ, ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದಾಗಿ ತಿಳಿಸಿದ್ದಲ್ಲದೆ, ಪಕ್ಷ ಸಿದ್ದರಾಮಯ್ಯ ಅವರಿಗೆ ಏನೆಲ್ಲಾ ಅಧಿಕಾರ ನೀಡಿದೆ ಎಂಬುದನ್ನು ಜನರ ಮುಂದೆ ಹೇಳಿದರು.

