20 ಮಂದಿ ಕೈಬಿಟ್ಟು ಅಷ್ಟೇ ಪ್ರಮಾಣದಲ್ಲಿ ಹೊಸಬರ ಸೇರ್ಪಡೆ: ಸಿದ್ದರಾಮಯ್ಯ
ಬೆಂಗಳೂರು:ಸಂಪುಟದಲ್ಲಿ 20 ಮಂದಿಯನ್ನು ಕೈಬಿಟ್ಟು ಅಷ್ಟೇ ಪ್ರಮಾಣದಲ್ಲಿ ಹೊಸಬರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹಿರಿಯ ಶಾಸಕರಿಗೆ ಭರವಸೆ ನೀಡಿದ್ದಾರೆ.
ವಿಧಾನಸೌಧದ ಮೊಗಸಾಲೆಯಲ್ಲಿರುವ ಮುಖ್ಯಮಂತ್ರಿ ಕೊಠಡಿಯಲ್ಲಿ ಮಂಗಳವಾರ ಹಿರಿಯ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆ ಮಾಡುವಂತೆ ಮನವಿ ಮಾಡಿದ್ದರು.
ಅಧಿಕಾರ ಹಸ್ತಾಂತರಕ್ಕೆ ತೆರೆ
ಪುನರ್ ರಚನೆ ಅಲ್ಲದೆ, ಅಧಿಕಾರ ಹಸ್ತಾಂತರಕ್ಕೆ ತೆರೆ ಎಳೆಯಬೇಕು, ಇದೇ ಗೊಂದಲ ಮುಂದುವರೆದರೆ, ಅಧಿಕಾರಿಗಳ ಮುಷ್ಠಿಯಲ್ಲಿ ಇಡೀ ಆಡಳಿತ ನಡೆಯುತ್ತದೆ.
ಇದಕ್ಕೆ ಕೊನೆ ಹಾಡಿ ಎಂದು ಶಾಸಕರು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಬಜೆಟ್ ಅಧಿವೇಶನ ಮುಗಿದ ಮರುದಿನವೇ ನಾನು ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡುತ್ತೇನೆ.
ಸಂಪುಟ ಪುನರ್ ರಚನೆಗೆ ಅವಕಾಶ ಕೋರುತ್ತೇನೆ, ಅವಕಾಶ ನೀಡದಿದ್ದರೆ, ನೀವು ಕರ್ನಾಟಕ ಕಾಂಗ್ರೆಸ್ ಗೊಂದಲ ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡುತ್ತೇನೆ.
ಒಂದಿಬ್ಬರು ಹೊಸಬರಿಗೆ ಅವಕಾಶ
ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಮೊದಲ ಬಾರಿ ಆಯ್ಕೆಗೊಂಡ ಒಂದಿಬ್ಬರಿಗೆ ಅವಕಾಶ ನೀಡಬೇಕಾಗಬಹುದು, ಉಳಿದೆಲ್ಲವೂ ಮೂರು, ನಾಲ್ಕಕ್ಕಿಂತ ಹೆಚ್ಚು ಬಾರಿ ಆಯ್ಕೆ ಆದವರಿಗೆ ಅವಕಾಶ ನೀಡುತ್ತೇನೆ ಎಂದರು.
ನೀವುಗಳು ಬೇಕಾದರೆ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆಗೆ ಒತ್ತಾಯ ಮಾಡಿ, ಕರ್ನಾಟಕದಲ್ಲಿ ಉಂಟಾಗಿರುವ ಗೊಂದಲದಿಂದ ಅಭಿವೃದ್ಧಿ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅವರ ಗಮನಕ್ಕೆ ತನ್ನಿ ಎಂದಿದ್ದಾರೆ.
ಮತ್ತೊಂದೆಡೆ ಶಾಸಕ ಷರತ್ ಬಚ್ಚೇಗೌಡ ನಗರದ ಪಂಚತಾರಾ ಹೋಟೆಲ್ ಒಂದರಲ್ಲಿ ಆಯೋಜಿಸಿದ್ದ ಔತಣಕೂಟದ ಸಭೆಯಲ್ಲಿ 50ಕ್ಕೂ ಹೆಚ್ಚು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿತ ಶಾಸಕರು ಸಭೆ ನಡೆಸಿದ್ದಾರೆ.
ನಾಯಕತ್ವ ಗೊಂದಲ ಬಗೆಹರಿಸಬೇಕು
ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ವರಿಷ್ಠರು ತಕ್ಷಣವೇ ಮಧ್ಯೆಪ್ರವೇಶಿಸಿ, ರಾಜ್ಯದಲ್ಲಿ ನಾಯಕತ್ವ ಗೊಂದಲ ಬಗೆಹರಿಸಬೇಕು.
ಕರ್ನಾಟಕದಲ್ಲಿ ಸರ್ಕಾರ ರಚನೆಗೂ ಮುನ್ನ ಪಕ್ಷದ ವರಿಷ್ಠರು ಶಿವಕುಮಾರ್ ಅವರಿಗೆ ನೀಡಿರುವ ಭರವಸೆ ಈಡೇರಿಸುವಂತೆ ಒತ್ತಾಯಿಸಲು ತೀರ್ಮಾನಿಸಿದ್ದಾರೆ.
ಪ್ರಸಕ್ತ ಬಜೆಟ್ ಅಧಿವೇಶನದ ನಂತರ ಶಿವಕುಮಾರ್ ಬೆಂಬಲಿತ ಶಾಸಕರ ನಿಯೋಗ ವರಿಷ್ಠರನ್ನು ಭೇಟಿ ಮಾಡಲು ತೀರ್ಮಾನಿಸಿದೆ.
ಇಫ್ತಿಹಾರ್ ಕೂಟ
ಇದರ ಮಧ್ಯೆ, ಶಿವಕುಮಾರ್ ಸಂಬಂಧಿ ಹಾಗೂ ಶಾಸಕ ಕುಣಿಗಲ್ ರಂಗನಾಥ್ ತಮ್ಮ ನಿವಾಸದಲ್ಲಿ ಮಂಗಳವಾರ ಸಂಜೆ ಅಲ್ಪಸಂಖ್ಯಾತರಿಗಾಗಿಯೇ ಇಫ್ತಿಹಾರ್ ಕೂಟ ಏರ್ಪಡಿಸಿದ್ದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸೇರಿದಂತೆ ಕಾಂಗ್ರೆಸ್ನ ಸಚಿವರು, ಶಾಸಕರು ಇಫ್ತಿಹಾರ್ನಲ್ಲಿ ಭಾಗವಹಿಸಿದ್ದರು, ಅಲ್ಪಸಂಖ್ಯಾತ ಶಾಸಕರನ್ನು ಶಿವಕುಮಾರ್ ಕಡೆ ಸೆಳೆಯುವುದೇ ಔತಣಕೂಟದ ಮುಖ್ಯ ಗುರಿ ಎನ್ನಲಾಗಿದೆ.

