ಬೆಂಗಳೂರು:ಪಕ್ಷದ ವರಿಷ್ಠರು ತಮಗೆ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಅಧಿಕಾರ ಹಂಚಿಕೆ ವಿಷಯದಲ್ಲಿ ನಮ್ಮಲ್ಲಿ ಗೊಂದಲವೂ ಇಲ್ಲ, ಭಿನ್ನಾಭಿಪ್ರಾಯಗಳೂ ಇಲ್ಲ, ವರಿಷ್ಠರು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಂಡು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ.
ನಿಷ್ಠಾವಂತರನ್ನು ಎಂದೂ ಕೈಬಿಟ್ಟಿಲ್ಲ
ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಎಂದೂ ಕೈಬಿಟ್ಟಿಲ್ಲ, ಆದರೆ, ಎಲ್ಲರಿಗೂ ಅಧಿಕಾರ ನೀಡಲಾಗದಿದ್ದರೂ ಯಾರಿಗೆ ಯಾವ ಸ್ಥಾನ ಕೊಡಬೇಕೆಂಬುದು ಅವರಿಗೆ ತಿಳಿದಿರುತ್ತದೆ.
ಕರ್ನಾಟಕ ನಾಯಕತ್ವ ವಿಚಾರದಲ್ಲೂ ವರಿಷ್ಠರು ಯಾವುದೇ ಸಂದರ್ಭದಲ್ಲಿ ಮಧ್ಯೆಪ್ರವೇಶ ಮಾಡಿ ನ್ಯಾಯ ಒದಗಿಸುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ತಡರಾತ್ರಿ ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ನಾಯಕತ್ವ ಗೊಂದಲ ಬಿಜೆಪಿ ಸೃಷ್ಟಿಯೇ ಹೊರತು ನಮ್ಮ ಪಕ್ಷದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯಾರೇ ಒಬ್ಬರಿಂದ ಸರ್ಕಾರ ಇಲ್ಲ
ನನ್ನೊಬ್ಬನಿಂದಾಗಲೀ ಅಥವಾ ಸಿದ್ದರಾಮಯ್ಯ ಅವರೊಬ್ಬರಿಂದಾಗಲೀ ರಾಜ್ಯ ಸರ್ಕಾರ ನಡೆಯುತ್ತಿಲ್ಲ, ಇಬ್ಬರೂ ಒಟ್ಟಿಗೆ ಶ್ರಮಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದೇವೆ.
ಉಪಚುನಾವಣೆಯಲ್ಲಿ ಕೂಡ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ, ನಮ್ಮ ಕಾರ್ಯಕರ್ತರು, ಶಾಸಕರು, ಸಚಿವರು ಹಗಲೂ ರಾತ್ರಿ ಎರಡೂ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ.
ನಾವು ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ, ನೀತಿಯ ಮೇಲೆ ರಾಜಕಾರಣ ಮಾಡುತ್ತೇವೆ ಎಂದರು.
ಬಿಜೆಪಿ ಜನರನ್ನು ಮರಳು ಮಾಡುತ್ತಿದೆ
ಬಿಜೆಪಿ ಖಾಲಿ ಮಾತುಗಳ ಮೂಲಕ ಜನರನ್ನು ಮರಳು ಮಾಡುತ್ತಿದೆ, ಅಕ್ಕಿಗೆ ಅರಿಶಿನ ಬೆರೆಸಿ ಅಯೋಧ್ಯೆಯಿಂದ ತಂದಿದ್ದೆಂದು ಬಿಂಬಿಸುತ್ತಿದೆ, ಅಕ್ಷತೆಯನ್ನು ಮನೆ-ಮನೆಗೆ ತಲುಪಿಸುತ್ತಿದ್ದಾರೆ.
ಅಕ್ಷತೆ ತಲುಪಿಸುವ ರೀತಿಯಲ್ಲೇ ಎಲ್ಪಿಜಿ ಸಿಲಿಂಡರ್ಗಳನ್ನು ತಲುಪಿಸಲಿ, ಇವರದು ಬರೀ ಬಣ್ಣದ ಮಾತು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.
ನಾನು ಅಸ್ಸಾಂ ಹಾಗೂ ಕೇರಳ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ, ಇಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ವರ್ಷ 60,000 ಕೋಟಿ ರೂ. ಜನರಿಗಾಗಿ ವಿನಿಯೋಗಿಸುತ್ತಿದೆ.
ಪಕ್ಷಭೇದ ಮರೆತು ಗ್ಯಾರಂಟಿ
ಅಸ್ಸಾಂನಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡಲಾಗುತ್ತಿದೆ, ನಾವು ಸಮಾಜದ ಎಲ್ಲಾ ವರ್ಗದವರಿಗೂ ಪಕ್ಷಭೇದ ಮರೆತು ನೀಡುತ್ತಿದ್ದೇವೆ.
ಇದೇ ಕಾರಣಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ಸಾಂನಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ಘೋಷಣೆ ಮಾಡಿದ್ದಾರೆ, ಭೂಮಿ ಹಕ್ಕು, ಪಿಂಚಣಿ ಸೇರಿದಂತೆ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ.
ದಾವಣಗೆರೆಯಲ್ಲಿ ಕೇವಲ ಒಂದು ಕುಟುಂಬ ರಾಜಕೀಯವಾಗಿ ಶಕ್ತಿಶಾಲಿಯಾಗಿದೆ ಎಂಬ ಪ್ರಶ್ನೆಗೆ, “ಶಿವಶಂಕರಪ್ಪ ಹಾಗೂ ಅವರ ಮಗ ಮಲ್ಲಿಕಾರ್ಜುನ್ ಅನೇಕ ವರ್ಷಗಳಿಂದ ರಾಜಕೀಯದಲ್ಲಿದ್ದಾರೆ, ಇದು ಎಲ್ಲಾ ಪಕ್ಷಗಳಲ್ಲೂ ಇದೆ, ಯಡಿಯೂರಪ್ಪ ಅವರ ಇಬ್ಬರು ಮಕ್ಕಳು ರಾಜಕೀಯದಲ್ಲಿ ಇಲ್ಲವೇ, ಜನತಾದಳದಲ್ಲಿ ಒಂದೇ ಕುಟುಂಬದ ಐದಾರು ಜನ ಇಲ್ಲವೇ ಎಂದು ಪ್ರಶ್ನಿಸಿದರು.


