ಬೆಂಗಳೂರು:ಭ್ರಷ್ಟಾಚಾರಕ್ಕೆ ಕಡಿವಾಣ, ಮಾದಕದ್ರವ್ಯಗಳ ದಂಧೆಗೆ ತಡೆ ಹಾಗೂ ಗೂಂಡಾಗಿರಿ ಹಾವಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಪ್ರಧಾನಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಹಿರಿಯ ಪೋಲಿಸ್ ಮತ್ತು ಐಎಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೂತನ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಕೈಗೊಂಡ 6 ಯೋಜನೆಗಳ ಕಟ್ಟುನಿಟ್ಟಿನ ಅನುಷ್ಟಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.
ಪ್ರಮುಖ ಯೋಜನೆಗಳ ಜಾರಿ
ಆಡಳಿತಯಂತ್ರ ಚುರುಕಾಗಬೇಕು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿದಂತೆ ಎಲ್ಲಾ 6 ಪ್ರಮುಖ ಯೋಜನೆಗಳು ತಕ್ಷಣದಿಂದ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು.
ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬಾಗಿದ್ದು, ಯಾವುದೇ ಕಾರಣಕ್ಕೂ ಗುರಿ ತಪ್ಪಬಾರದು.
ರಾಜ್ಯದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು, ಅಮಾಯಕ ಜನರನ್ನು ಪೀಡಿಸುವ ರೌಡಿಗಳ ಹೆಡೆಮುರಿ ಕಟ್ಟಿ, ಜೂಜು, ಡ್ರಗ್ಸ್ ದಂಧೆ ಸೇರಿದಂತೆ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳನ್ನು ಪೊಲೀಸ್ ಇಲಾಖೆ ಹತ್ತಿಕ್ಕಬೇಕು.
ನಿಧಿ ದುರ್ಬಳಕೆ ನಿಲ್ಲಬೇಕು
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ದುರ್ಬಳಕೆ ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಇದು ತಕ್ಷಣವೇ ನಿಲ್ಲಬೇಕು, ಸಿಎಸ್ಆರ್ ಫಂಡ್ ದುರ್ಬಳಕೆ ಆಗಬಾರದು, ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು.
ಪ್ರತಿಯೊಬ್ಬ ಅಧಿಕಾರಿ ತಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಪ್ರಾಮಾಣಿಕ ಕೆಲಸ ಮಾಡಬೇಕು, ಸಾರ್ವಜನಿಕರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಿ, ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಿ.
ಅಭಿವೃದ್ಧಿಯ ಹಾದಿಗೆ ಮೆಟ್ಟಿಲಾಗಿ ಜನ ಮೆಚ್ಚುವಂತೆ ಅಧಿಕಾರಿಗಳು ಕೆಲಸ ನಿರ್ವಹಿಸುವ ಮೂಲಕ ಸರ್ಕಾರಕ್ಕೂ ಒಳ್ಳೆಯ ಹೆಸರು ತರುವುದಲ್ಲದೆ, ನೀವೂ ಉತ್ತಮ ಹೆಸರು ಗಳಿಸಿ ಎಂದರು.
ಒತ್ತಡಗಳಿಗೆ ಮಣಿಯಬೇಡಿ
ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ ಮುಕ್ತವಾಗಿ ಕೆಲಸ ನಿರ್ವಹಿಸಲು ನಿಮ್ಮಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದರು.
ಹಣಕಾಸಿನ ಕೊರತೆ ನೆಪ ಮಾಡಿ ಗ್ಯಾರಂಟಿ ಹಾಗೂ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪದಿದ್ದರೆ, ಜವಾಬ್ದಾರಿ ಹೊತ್ತ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು.
ದಿನದ 24 ಗಂಟೆ ಜನರ ಸೇವೆಗೆ ಅಧಿಕಾರಿಗಳು ಲಭ್ಯ ಇರಬೇಕು, ಕಾನೂನು ಹಾಗೂ ನಿಯಾಮಾವಳಿಗಳ ನೆಪ ಹೇಳಿ ಅನಗತ್ಯ ವಿಳಂಬ ಧೋರಣೆ ಅನುಸರಿಸಿದರೆ ಸಹಿಸುವುದಿಲ್ಲ.
ಜನಪರ ಆಡಳಿತ ನಿರ್ವಹಣೆ
ಹೆಚ್ಚು ಜನ ಸಂಪರ್ಕ ಹೊಂದಿರುವ ಕಂದಾಯ, ಗ್ರಾಮೀಣಾಭಿವೃದ್ಧಿ, ಸಾರಿಗೆ, ಆರೋಗ್ಯ, ಶಿಕ್ಷಣ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ಕಾಲಮಿತಿ ಹಾಗೂ ಕಡತಗಳಿಗೆ ಜೋತು ಬೀಳದೇ ಜನಪರ ಆಡಳಿತ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ, ಇದರಲ್ಲಿ ದುರುಪಯೋಗ ಕಂಡುಬಂದಿದೆ, ಸುಮಾರು 100 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಅನರ್ಹರ ಪಾಲಾಗಿದೆ, ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು.
ಸರ್ಕಾರದ ಯೋಜನೆಗಳಿಗೆ ಹಣಕಾಸಿನ ಕೊರತೆ ಇಲ್ಲ, ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡದೆ ಹಣಕಾಸಿನ ಸಮಸ್ಯೆ ಇದೆ ಎಂಬುದಾಗಿ ಬಿಂಬಿಸಿದರೆ, ಕಠಿಣಕ್ರಮ ಕೈಗೊಳ್ಳಲಾಗುವುದು.
ಉದ್ಯೋಗ ಸೃಷ್ಟಿ
ಉದ್ಯಮ, ಕೃಷಿ, ಶಿಕ್ಷಣ, ವ್ಯಾಪಾರ ಕ್ಷೇತ್ರಗಳಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಸಬೇಕು, ಉದ್ಯೋಗ ಸೃಷ್ಟಿಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು.
ಇದುವರೆಗಿನದು ಒಂದು ಲೆಕ್ಕ, ಇನ್ನು ಮುಂದೆ ಬೇರೆಯದೇ ಲೆಕ್ಕ, ಆಡಳಿತದಲ್ಲಿ ಜಡತ್ವ ಯಾವ ಕಾರಣಕ್ಕೂ ಸಹಿಸುವುದಿಲ್ಲ, ಹಾಗೆಯೇ ಭ್ರಷ್ಟಾಚಾರಕ್ಕೂ ಆಸ್ಪದ ನೀಡುವುದಿಲ್ಲ ಎಂದರು.
ಮಳೆಗಾಲ ಆರಂಭವಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯ ರಸಗೊಬ್ಬರ, ಬಿತ್ತನೆ ಬೀಜ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು.
ಎಸ್ಐಆರ್ ಗಮನಹರಿಸಿ
ರಾಜ್ಯದಲ್ಲಿ ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದೆ, ಈ ಬಗ್ಗೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು, ಯಾವುದೇ ಪ್ರಜೆ ತನ್ನ ಅಮೂಲ್ಯ ಮತದಾನದ ಹಕ್ಕು ಕಳೆದುಕೊಳ್ಳಬಾರದು, ಪ್ರಕ್ರಿಯೆ ವೇಳೆ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯದೆ ಅತ್ಯಂತ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಎಸ್ಐಆರ್ ಬಗ್ಗೆ ಎಲ್ಲಾ ಮತದಾರರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು, ಸಾರ್ವಜನಿಕರಿಗೆ ನೆರವಾಗಲು ಅಗತ್ಯ ಕಡೆಗಳಲ್ಲಿ ತತ್ಕ್ಷಣ ’ಹೆಲ್ಪ್ ಡೆಸ್ಕ್’ ಸ್ಥಾಪಿಸಬೇಕು.
ಎಸ್ಐಆರ್ ನಡೆದ ಕೆಲವು ರಾಜ್ಯಗಳಲ್ಲಿ ಲಕ್ಷಾಂತರ ಜನ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ, ಕೇರಳಂ ರಾಜ್ಯದಲ್ಲಿ ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿದ್ದು, ನಮ್ಮ ರಾಜ್ಯದಲ್ಲೂ ಯಾರೊಬ್ಬರ ಹೆಸರು ಬಿಟ್ಟು ಹೋಗಬಾರದು ಎಂದರು.
ಕುಂದುಕೊರತೆ ಪರಿಶೀಲನೆ ವಿಭಾಗ
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾರ್ವಜನಿಕರ ಕುಂದುಕೊರತೆ ಪರಿಶೀಲಿಸಲು ಪ್ರತ್ಯೇಕ ವಿಭಾಗ ಆರಂಭಿಸಲಾಗುವುದು, ಉನ್ನತ ಅಧಿಕಾರಿಯೊಬ್ಬರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಲಾಗುವುದು ಮತ್ತು ಸಚಿವರಿಗೆ ಜವಾಬ್ದಾರಿಯನ್ನೂ ನೀಡಲಾಗುವುದು ಎಂದರು.
ಪ್ರತ್ಯೇಕ ಸಚಿವಾಲಯವನ್ನು ರಚಿಸಲು ಯಾವೆಲ್ಲಾ ಅಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ವರದಿ ನೀಡಿದ ತಕ್ಷಣ ಪ್ರತ್ಯೇಕ ವಿಭಾಗ ಆರಂಭಿಸುತ್ತೇನೆ.
ವಿವಿಧ ಅಭಿವೃದ್ಧಿ ಯೋಜನೆ ಮತ್ತು ಇಲಾಖಾ ಪ್ರಗತಿ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ೧೫ ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.
ಉದ್ಯೋಗ ವಿನಿಮಯ ಕೇಂದ್ರ
ಖಾಸಗಿ ಉದ್ಯೋಗದಾತರು ಮತ್ತು ಇತರರಿಗೆ ಅನುಕೂಲವಾಗುವಂತೆ ಉದ್ಯೋಗ ವಿನಿಮಯ ಕೇಂದ್ರ ರಚಿಸಲಾಗುವುದು.
ಚುನಾವಣೆ ದೃಷ್ಟಿಯಿಂದ ನೋಡುತ್ತಿಲ್ಲ, ಜನರ ಜೀವನ ಗುಣಮಟ್ಟ ಮುಖ್ಯ, ಗ್ಯಾರಂಟಿಗಳ ಮೂಲಕ ಕನಿಷ್ಠ ಸುರಕ್ಷಿತ ಜೀವನ ನೀಡಲು ಬಯಸುತ್ತೇವೆ ಎಂದರು.


