ಬೆಂಗಳೂರು : ಸಂಪುಟ ಸೇರ್ಪಡೆಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಸೂಲಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಗುರುತರ ಆರೋಪ ಮಾಡಿದ್ದಾರೆ.
ಶಿವಕುಮಾರ್ ಸಂಪುಟದಲ್ಲಿ ಮಂತ್ರಿಯಾಗಲು ಮ್ಯಾನೇಜ್ಮೆಂಟ್ ಇಲ್ಲವೆ ಪೇಮೆಂಟ್ ಕೋಟಾದಲ್ಲಿ ಸಚಿವರಾಗಲು ಲಾಭಿ ನಡೆದಿದೆ ಎಂದು ದೂರಿದರು.
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವರು, ಮ್ಯಾನೆಜ್ಮೆಂಟ್ ಕೋಟಾಕ್ಕೆ ಶೇಕಡ 5 ರಷ್ಟು, ಪೇಮೆಂಟ್ ಕೋಟಾಕ್ಕೆ ಶೇಕಡ 95 ರಷ್ಟು ಸೀಟ್ಗಳನ್ನು ನಿಗದಿಪಡಿಸಲಾಗಿದೆ. ಈ ಸೀಟುಪಡೆಯಲು ಯಾರು ಅರ್ಹರಿರುತ್ತಾರೋ ಅಂಥವರು ಮಾತ್ರ ಮಂತ್ರಿಯಾಗಲು ಸಾಧ್ಯ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕೋಟಾ ತುಂಬಲು ಶಾಸಕರುಗಳು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಮಂತ್ರಿಮಂಡಲ ವಿಸ್ತರಣೆ ವಿಳಂಬವಾಗುತ್ತಿದೆ ಎಂದು ದೂರಿದರು. ಸರ್ಕಾರಿ ಹಾಗೂ ಆಡಳಿತ ಮಂಡಳಿ ಕೋಟಾ ಎಂದು ನಾವು ವೃತ್ತಿ ಶಿಕ್ಷಣ ಪ್ರವೇಶ ಕಾಲೇಜುಗಳಲ್ಲಿ ಕೇಳಿದ್ದೆವು. ಆದರೆ ಸಂಪುಟ ಸೇರ್ಪಡೆಗೂ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.
ರಿಯಲ್ ಎಸ್ಟೇಟ್ ದಂಧೆಗಾಗಿ ಬಿಡದಿ ಟೌನ್ ಶಿಪ್ ಕೈಗೆತ್ತಿಕೊಂಡಿರುವ ಮುಖ್ಯಮಂತ್ರಿ ಶಿವಕುಮಾರ್ ರೈತರಿಂದ ಭೂಮಿ ಪಡೆಯಲು ಮಾಡಲು ಗೂಂಡಾಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟರ್ಗಳನ್ನು ನೇಮಕ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಬೇಕಾದ ಎಲ್ಲಾ ವ್ಯವಹಾರಗಳು, ನಾಗರಭಾವಿಯಲ್ಲಿರುವ ಮನೆಯೊಂದರಲ್ಲಿ ನಡೆಯುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿದಾರರು ಹಾಗೂ ಗೂಂಡಾಗಳು ರೈತರನ್ನು ಎದುರಿಸಿ, ಬೆದರಿಸಿ, ಅವರ ಜಮೀನುಗಳನ್ನು ಬರೆಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರಿಗೆ ತಾಕತ್ತಿದ್ದರೆ, ಬೈರಮಂಗಲ ಜನರ ಬಳಿಯೇ ಹೋಗೋಣ ಬನ್ನಿ, ಅಲ್ಲಿಯೇ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ, ಶಿವಕುಮಾರ್ಗೆ ಆಹ್ವಾನ ನೀಡಿದ್ದಾರೆ.
2007 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಕೈಗೆತ್ತಿಕೊಳ್ಳಬೇಕೆಂಬ ನಿರ್ಧಾರ ಕೈಗೊಂಡಿದ್ದೆ, ಅಂತಹ ಸಮಯದಲ್ಲಿ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಅಲ್ಲಿನ ರೈತರು ಜಮೀನು ಕಳೆದುಕೊಳ್ಳುವ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟು, ಈ ಯೋಜನೆ ಕೈಬಿಡುವಂತೆ ವಿಧಾನಸಭೆಯಲ್ಲೇ ಒತ್ತಾಯಿಸಿದ್ದರು.
ರೈತರ ಮಾತಿಗೆ ಮಣಿದು, ನಾನು ಯೋಜನೆಯನ್ನು ಕೈಬಿಡುವುದಾಗಿ ಅಂದು ವಿಧಾನಸಭೆಯಲ್ಲಿ ಘೋಷಣೆ ಮಾಡಿದೆ ಎಂಬ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಿದರು. ರಿಯಲ್ ಎಸ್ಟೇಟ್ಗಾಗಿ ಶಿವಕುಮಾರ್ ನನ್ನ ಮೇಲೆ ಗೂಬೆ ಕೂರಿಸಿ, ಯೋಜನೆ ಕೈಗೆತ್ತಿಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು.


