ಬೆಂಗಳೂರು:ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಸೌಲಭ್ಯ ಕಡಿವಾಣಕ್ಕೆ ರಾಜ್ಯ ಸರ್ಕಾರ ಇಂದಿನಿಂದ ಚಾಲನೆ ನೀಡಿದೆ.
ಈಗಾಗಲೇ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಗ್ಯಾರಂಟಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕಡಿವಾಣ ಹಾಕಿರುವ ಸರ್ಕಾರ ಇದೀಗ 200 ಯೂನಿಟ್ಗಳವರೆಗೆ ನೀಡುತ್ತಿದ್ದ ಉಚಿತ ವಿದ್ಯುತ್ಗೂ ಕೊಕ್ಕೆ ಹಾಕಿದೆ.
ಉಳ್ಳವರಿಗೆ ಯೋಜನೆ ಸ್ಥಗಿತ
ಹೊರರಾಜ್ಯದವರು, ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಹಾಗೂ ಎಪಿಎಲ್ ಪಡಿತರಚೀಟಿ ಹೊಂದಿರುವವರಿಗೆ ಗೃಹಲಕ್ಷ್ಮೀ ಯೋಜನೆ ಸ್ಥಗಿತಗೊಳಿಸಲು ಮುಂದಾಗಿದೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಣಿ ಹಿಡಿದ ಸಂದರ್ಭದಲ್ಲಿ, ವಿಧಾನಸಭಾ ಚುನಾವಣೆ ವೇಳೆ ಮತದಾರರಿಗೆ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತರಲಾಗಿತ್ತು.
ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆ ಅನುಷ್ಟಾನ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಹಾಗೂ ಸಚಿವ ಮಹದೇವಪ್ಪ ಕುಟುಂಬ ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಉಚಿತ ಪ್ರಯಾಣ ಹಾಗೂ ಗೃಹಜ್ಯೋತಿ ಗ್ಯಾರಂಟಿ ಅಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂಬ ಘೋಷಣೆ ಮಾಡಿದ್ದರು.
ವಾಗ್ದಾನ ಮಾಡಿದ್ದರು
ಘೋಷಣೆ ವೇಳೆ ಇಂದಿನ ಮುಖ್ಯಮಂತ್ರಿ ಹಾಗೂ ಅಂದಿನ ಉಪಮುಖ್ಯಮಂತ್ರಿ ಆಗಿದ್ದ ಡಿ.ಕೆ.ಶಿವಕುಮಾರ್ ಸಹಾ ವೇದಿಕೆ ಹಂಚಿಕೊಂಡು ಗ್ಯಾರಂಟಿಗಳ ವಾಗ್ದಾನ ಮಾಡಿದ್ದರು.
ಇದೀಗ ಕೊಟ್ಟ ಮಾತಿಗೆ ತಪ್ಪಿ, ಶಕ್ತಿ ಯೋಜನೆ ಸೌಲಭ್ಯ ಪಡೆಯುವವರಿಗೆ ಗುರುತಿನ ಚೀಟಿ ನೀಡುವುದಾಗಿ ತಿಳಿಸಿದ ಬೆನ್ನಲ್ಲೇ, ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿರುವ ಉಳ್ಳವರನ್ನು ಪತ್ತೆ ಹಚ್ಚಲು ಇಂದಿನಿಂದ ರಾಜ್ಯಾದ್ಯಂತ ಪುನರ್ ಪರಿಶೀಲನಾ ಕಾರ್ಯ ಕೈಗೆತ್ತಿಕೊಂಡಿದೆ.
ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್ಗಳು ಹಾಗೂ ಸಿಬ್ಬಂದಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ ಫಲಾನುಭವಿಗಳ ದಾಖಲೆ ಪರಿಶೀಲಿಸಲಿದ್ದಾರೆ.
ಅರ್ಜಿ ಭರ್ತಿ ಪ್ರಕ್ರಿಯೆ
ಮೊಬೈಲ್ ಆಪ್ ಹಾಗೂ ಘೋಷಣಾಪತ್ರದ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ.
ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ಪೋರ್ಟ್ ಅಳತೆ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಹಾಗೂ ಜಾತಿ ಪ್ರಮಾಣಪತ್ರ ತೋರಿಸುವುದು ಕಡ್ಡಾಯ.
ಬಾಡಿಗೆದಾರರು ಒಪ್ಪಂದ ಪತ್ರದ ನಕಲು ಪ್ರತಿಯನ್ನು ನೀಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಎರಡು ತಿಂಗಳು ಪುನರ್ ಪರಿಶೀಲನಾ ಕಾರ್ಯ ನಡೆಯಲಿದ್ದು, ನಂತರ ಉಚಿತ ವಿದ್ಯುತ್ ಸೌಲಭ್ಯವನ್ನು ಅರ್ಹ ಬಿಪಿಎಲ್ ಪಡಿತರದಾರರಿಗೆ ಸೀಮಿತಗೊಳಿಸಲು ಸರ್ಕಾರ ಮುಂದಾಗಿದೆ.


