ಬೆಂಗಳೂರು:ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿರುವ ಆರ್ಎಸ್ಎಸ್ ತನ್ನ ಪ್ರಮುಖ ಸ್ವಯಂ ಸೇವಕರ ಸಭೆಯನ್ನು ಜುಲೈ 6 ರಿಂದ 10 ದಿನಗಳ ಕಾಲ ಆಯೋಜಿಸಿದೆ.
ಸರ ಸಂಘ ಸಂಚಾಲಕ ಮೋಹನ್ ಭಾಗವತ್ ಸಭೆ ನೇತೃತ್ವ ವಹಿಸಲಿದ್ದು, ಇತರ ಪ್ರಮುಖರಾದ ಸರ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ, ಸಹ ಕಾರ್ಯವಾಹಕರಾದ ಡಾ.ಕೃಷ್ಣಗೋಪಾಲ್, ಸಿ.ಆರ್.ಮುಕುಂದ್, ಅರುಣ್ ಕುಮಾರ್, ರಾಮದತ್ತ, ಅಲೋಕ್ ಕುಮಾರ್, ಅತುಲ್ ಲಿಮಯೇ ಜೊತೆಗೆ ಅಖಿಲ ಭಾರತೀಯ ಕಾರ್ಯವಿಭಾಗದ ಪ್ರಮುಖರು, ಕಾರ್ಯಕಾರಿ ಮಂಡಳಿ ಸದಸ್ಯರು, ಸ್ಥಳೀಯ ಕಾರ್ಯಕರ್ತರೊಂದಿಗೆ ನಿರಂತರ ಸಭೆಗಳನ್ನು ನಡೆಸಲಿದ್ದಾರೆ.
ನಾಯಕರಿಗೆ ಆಹ್ವಾನ ಇಲ್ಲ
ಕುಂದಾನಗರಿ ಬೆಳಗಾವಿಯಲ್ಲಿ ಸಭೆ ಆಯೋಜಿಸಿದ್ದು, ಇದರಲ್ಲಿ ಬಿಜೆಪಿ ರಾಜ್ಯ ನಾಯಕರಾರಿಗೂ ಆಹ್ವಾನ ಇಲ್ಲ.
ಕರ್ನಾಟಕ ಬಿಜೆಪಿ ನಾಯಕರ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಆಶಾಭಾವನೆ ಇಲ್ಲದ ಕಾರಣದಿಂದಲೇ ಕಳೆದ ಮೂರು ತಿಂಗಳಿಂದ ಆರ್ಎಸ್ಎಸ್ ನಿರಂತರ ಸಭೆಗಳನ್ನು ನಡೆಸುತ್ತದೆ.
ಈ ಮಧ್ಯೆ, ಆರ್ಎಸ್ಎಸ್ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳು ನಡೆಸುತ್ತಿರುವ ವಾಗ್ದಾಳಿಗೆ ತಕ್ಕ ಉತ್ತರ ನೀಡುವುದೂ ಸಭೆಯ ಕಾರ್ಯಕ್ರಮಗಳ ಉದ್ದೇಶವಾಗಿದೆ.
ಗಂಭೀರ ಪರಿಗಣನೆ
ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ಎಸ್ಎಸ್ ಇದೀಗ ಕರ್ನಾಟಕವನ್ನು ಗಂಭೀರವಾಗಿ ಪರಿಗಣಿಸಿದೆ.
ಜಾತ್ಯತೀತವಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಮುಂದಿನ ಎರಡು ವರ್ಷ ಕರ್ನಾಟಕದಾದ್ಯಂತ ಆರ್ಎಸ್ಎಸ್ ಕಾರ್ಯಕರ್ತರು ಸಮಾಜದ ಕೆಳಹಂತದಲ್ಲಿ ಸಂಘಟನೆಗೆ ಮುಂದಾಗಲಿದ್ದಾರೆ.
ಯುವಜನರ ಪಡೆ ರಚನೆ
ತುಳಿತಕ್ಕೆ ಒಳಗಾಗಿರುವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಯುವಜನರ ಪಡೆ ರಚಿಸುವುದು ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಈ ಸಿದ್ಧಾಂತದ ಆಧಾರದ ಮೇಲೆ ಕುಂದಾನಗರಿಯಲ್ಲಿ ಸಭೆಗಳು ನಡೆಯಲಿವೆ, ಸಭೆಯ ಎಲ್ಲಾ ದಿನಗಳಲ್ಲೂ ಭಾಗವತ್ ಮತ್ತು ಇತರ ಪ್ರಮುಖರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ.


