ಸಿಬಿಐಗೆ ಶಿವಕುಮಾರ್ ಸವಾಲ್
ಬೆಂಗಳೂರು:ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೈಲು ಸೇರುವ ಭೀತಿಯಲ್ಲಿದ್ದಾರೆ.
ಸರ್ಕಾರದ ಅನುಮತಿ ಇಲ್ಲದೆ, ಸಿಬಿಐ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ ಎಂದು ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಂಡು ಆದೇಶ ಹೊರಡಿಸಿದ್ದರೂ, ಹೂಡಿಕೆಗೆ ಸಂಬಂಧಿಸಿದಂತೆ ಶಿವಕುಮಾರ್ ಮತ್ತು ಅವರ ಕುಟುಂಬ ವರ್ಗದವರ ವಿಚಾರಣೆಯನ್ನು ಕೇಂದ್ರ ತನಿಖಾ ದಳ ಮುಂದುವರೆಸಿದೆ.
ಕೇರಳ ಮೂಲದ ಚಾನೆಲ್ನಲ್ಲಿ ಹೂಡಿಕೆ
ಕೇರಳ ಮೂಲದ ಜೈಹಿಂದ್ ಚಾನೆಲ್ನಲ್ಲಿ ಶಿವಕುಮಾರ್ ಅವರು ಮಾಡಿರುವ ಹೂಡಿಕೆ ವಿವರವನ್ನು ಸಲ್ಲಿಸುವಂತೆ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ನೋಟಿಸ್ ಜಾರಿಯಾಗಿ ಜನವರಿ 11 ರಂದು ವಿಚಾರಣೆಗೆ ಹಾಜರಾಗುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದೆ.
ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಅವರು ಚಾನೆಲ್ನಲ್ಲಿ ಮಾಡಿರುವ ಹೂಡಿಕೆ, ಪ್ರತಿಯಾಗಿ ಪಡೆದಿರುವ ಲಾಭಾಂಶ, ಷೇರು ವಹಿವಾಟು, ಹೊಂದಿರುವ ಆಸ್ತಿ ವಿವರಗಳು, ಇದಕ್ಕೆ ಸಂಬಂಧಪಟ್ಟಂತೆ ಸಂಪರ್ಕದಲ್ಲಿರುವವರ ವಿವರಗಳನ್ನು ನೀಡುವಂತೆ ಸೂಚಿಸಿದೆ.
ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು
ಈ ಸಂಸ್ಥೆಯನ್ನು ಕೇರಳ ಮೂಲದ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದು, ಶಿವಕುಮಾರ್ ವಿರುದ್ಧದ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಹಿಂದಿನ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು.
ಹಿಂದಿನ ಸರ್ಕಾರ ಕಾನೂನು ರೀತ್ಯಾ ಸಿಬಿಐಗೆ ವಹಿಸಿಲ್ಲ ಎಂಬ ಕಾರಣ ನೀಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಕರಣವನ್ನು ಹಿಂದಕ್ಕೆ ಪಡೆದಿತ್ತು.
ಬಲೆಗೆ ಕೆಡವಲು ಸಿಬಿಐ ಯತ್ನ
ಇದೀಗ ಸಿಬಿಐ ಕೇರಳ ಕಂಪನಿಯ ಮೂಲಕ ಶಿವಕುಮಾರ್ ಅವರನ್ನು ಬಲೆಗೆ ಕೆಡವಲು ಮುಂದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ನನ್ನ ಗಳಿಕೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ನೀಡಿದ್ದರೂ ಸಿಬಿಐ ಮತ್ತೆ ನೋಟಿಸ್ ಜಾರಿ ಮಾಡುತ್ತಿರುವುದು ರಾಜಕೀಯ ಷಡ್ಯಂತ್ರ ಎಂದಿದ್ದಾರೆ.
ರಾಜಕೀಯವಾಗಿ ಕಟ್ಟಿಹಾಕುವ ಪ್ರಯತ್ನ
ಕೆಲವು ಕಾಣದ ಕೈಗಳು ಈ ಷಡ್ಯಂತ್ರದ ಹಿಂದಿದ್ದು, ತಮ್ಮನ್ನು ರಾಜಕೀಯವಾಗಿ ಕಟ್ಟಿಹಾಕುವ ಪ್ರಯತ್ನ ನಡೆಸಿದ್ದಾರೆ.
ಸಿಬಿಐ ತನಿಖೆ ಪೂರ್ಣಗೊಳಿಸುವ ಹಂತದಲ್ಲಿದೆ ಎಂದುಕೊಂಡು ನನ್ನನ್ನು ವಿಚಾರಣೆಗೆ ಕರೆಸಬೇಕಿತ್ತು, ಈ ಹಂತದಲ್ಲಿ ದುರುದ್ದೇಶದ ರಾಜಕೀಯ ಮನಗಂಡು ಸಿಬಿಐ ತನಿಖೆಗೆ ನೀಡಿದ್ದ ಪ್ರಕರಣವನ್ನು ಕರ್ನಾಟಕ ಸರ್ಕಾರ ಹಿಂದಕ್ಕೆ ಪಡೆದಿದೆ.
ಸಿಬಿಐ ನೋಟಿಸ್ ಪ್ರಶ್ನಿಸಿದ್ದೇನೆ
ಇಷ್ಟಾದರೂ ನನ್ನನ್ನು ಸಿಬಿಐ ಕರೆಯುತ್ತಿದ್ದಾರೆ, ಅವರ ನೋಟಿಸ್ ಅನ್ನು ಪ್ರಶ್ನಿಸಿದ್ದೇನೆ, ನಾನು ಹೋಗುತ್ತಿಲ್ಲ, ಅವರು ನನ್ನನ್ನು ಒಳಕ್ಕೆ ಹಾಕಿಕೊಳ್ಳಬೇಕು ಎಂದಿದ್ದರೆ, ಹಾಕಿಕೊಳ್ಳಲಿ ನಾನೇನು ಹೆದರುವುದಿಲ್ಲ, ನೋಡೋಣ, ಅವರೇನು ಮಾಡುತ್ತಾರೋ ಮಾಡಿಕೊಳ್ಳಲಿ.
ಅಕ್ರಮ ಆದಾಯ ಸಂಪಾದನೆ ಪ್ರಕರಣದಲ್ಲಿ ನನಗೆ ಕಿರುಕುಳ ಮುಂದುವರೆಸಿದ್ದಾರೆ, ಸರ್ಕಾರ ಅನುಮತಿಯನ್ನು ಹಿಂದಕ್ಕೆ ಪಡೆದಿದ್ದರೂ ಸಿಬಿಐನವರು ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ಕಾರಿ ಕಚೇರಿ, ಸಹಕಾರಿ ಸೊಸೈಟಿ, ನಾನು ಅಧ್ಯಕ್ಷನಾಗಿರುವ ಸಂಸ್ಥೆ ಸೇರಿದಂತೆ ಅನೇಕರಿಗೆ ನೋಟಿಸ್ ಕೊಟ್ಟಿದ್ದಾರೆ.
ಯಾವ ಲೆಕ್ಕಾಚಾರದ ಮೇಲೆ ಈ ನೋಟಿಸ್ ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಅವರ ಉದ್ದೇಶ ಏನೆಂಬುದೂ ತಿಳಿದಿಲ್ಲ. ಆದರೆ ಮೇಲ್ನೋಟಕ್ಕೆ ಅವರು ನನಗೆ ಹಾಗೂ ಪಕ್ಷಕ್ಕೆ ತೊಂದರೆ ನೀಡಲು ದೊಡ್ಡ ಷಡ್ಯಂತ್ರ ರೂಪಿಸುತ್ತಿದ್ದಾರೆ.
ಸಿಬಿಐ ತನಿಖೆಯನ್ನು ರಾಜ್ಯ ಸರ್ಕಾರ ಲೋಕಾಯಕ್ತಕ್ಕೆ ಹಸ್ತಾಂತರ ಮಾಡಿದೆ, ಕರ್ನಾಟಕ ಸರ್ಕಾರ ಸಿಬಿಐ ಪ್ರಕರಣವನ್ನು ಹಿಂಪಡೆದಿರುವುದನ್ನು ಹೈಕೋರ್ಟ್ ಒಪ್ಪಿದ್ದರೂ, ಸಿಬಿಐ ಯಾಕೆ ನೋಟಿಸ್ ನೀಡುತ್ತಿದೆ ಎಂಬುದು ಗೊತ್ತಿಲ್ಲ.
ಅವರ ಬಳಿ ನನ್ನ ಎಲ್ಲಾ ದಾಖಲೆಗಳು ಇವೆ, ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ದಾಖಲೆಗಳನ್ನು ಸಿಬಿಐ ಲೋಕಾಯುಕ್ತಕ್ಕೆ ನೀಡಬೇಕಾಗಿದೆ.
ನನ್ನ ಸಂಸ್ಥೆ, ಹೆಂಡತಿ, ಮಕ್ಕಳು, ಕುಟುಂಬ ಸದಸ್ಯರಿಗೆ ಕಿರುಕುಳ
ನನ್ನ ಸಂಸ್ಥೆ, ನನ್ನ ಹೆಂಡತಿ, ಮಕ್ಕಳು, ಕುಟುಂಬ ಸದಸ್ಯರು ಸೇರಿದಂತೆ ಹಲವರಿಂದ ಮಾಹಿತಿ ಕೇಳುತ್ತಿದ್ದಾರೆ.
ಮೊದಲು ಈ ರೀತಿ ಮಾಡಿ ನಂತರ ಸಿಬಿಐ ನನಗೆ ನೋಟಿಸ್ ನೀಡುತ್ತಾರೆ. ಬಿಜೆಪಿಯವರು ನನ್ನನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಮೊದಲೇ ಹೇಳಿಕೊಳ್ಳುತ್ತಿದ್ದರು, ಇದೀಗ ಅದು ಸಾಭೀತಾಗುವ ಸಮಯ ಬಂದಿದೆ.
ಅವರ ಆಸೆಗಳನ್ನು ಈಡೇರಿಸಿಕೊಳ್ಳಲಿ ನಾನು ಸಿದ್ಧನಿದ್ದೇನೆ. ಅಹಮದ್ ಪಟೇಲ್ ಇಂದಿಲ್ಲ, ಆದರೂ ನನಗೆ ರಾಜಕೀಯ ಕಿರುಕುಳ ಕೊಡುವುದನ್ನು ಮುಂದುವರೆಸಿದ್ದಾರೆ.
ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಗೊತ್ತು, ಕಾನೂನು ಇದೆ, ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ ಎಂದರು.


