ಬೆಂಗಳೂರು: ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವ ಬಿ. ನಾಗೇಂದ್ರ ಅವರ ತಲೆದಂಡವಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಮಗದ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಸಿಬಿಐ ಆರೋಪಟ್ಟಿ ಸಲ್ಲಿಸುತ್ತಿದ್ದಂತೆ ನಾಗೇಂದ್ರ ಮುಖ್ಯಮಂತ್ರಿ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.
ಅವರ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಅವರು ರಾಜಭವನಕ್ಕೆ ರವಾನೆ ಮಾಡಿದ್ದಾರೆಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಜನಪ್ರತಿನಿಧಿಗಳ ಮೇಲೆ ಎಫ್ಐಆರ್
ಯೂನಿಯನ್ ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ, ಬ್ಯಾಂಕ್ನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಎಫ್ಐಆರ್ ದಾಖಲು ಮಾಡಿಕೊಂಡಿತ್ತು.
ಎಫ್ಐಆರ್ ದಾಖಲು ಮಾಡಿಕೊಂಡು ಇಲಾಖಾ ಹೊಣೆ ಹೊತ್ತ ಸಚಿವರಿಗೆ ನೋಟಿಸ್ ನೀಡಿ ವಶಕ್ಕೆ ಪಡೆಯುತ್ತಾರೆ ಎಂಬ ಮಾಹಿತಿ ಬರುತ್ತಿದ್ದಂತೆ ಮುಖ್ಯಮಂತ್ರಿ ಅವರು ನಿನ್ನೆ ರಾತ್ರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಸರ್ಕಾರಿ ನಿವಾಸ ಕಾವೇರಿಗೆ ಕರೆಸಿಕೊಂಡು ಈ ಸಂಬಂಧ ಚರ್ಚೆ ಮಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಮತ್ತು ವಿವರಣೆ ಪಡೆದ ನಂತರ ಸಚಿವರ ರಾಜೀನಾಮೆ ಪಡೆಯುವ ನಿರ್ಧಾರಕ್ಕೆ ಬಂದರು.
ತನಿಖೆ ಹಿನ್ನೆಲೆ ಸಂಪುಟದಿಂದ ಹೊರಗೆ
ತಕ್ಷಣವೇ ನಾಗೇಂದ್ರ ಅವರನ್ನು ಕರೆಸಿಕೊಂಡ ಮುಖ್ಯಮಂತ್ರಿಗಳು, ನಿಗಮದ ಹಣ ವರ್ಗಾವಣೆ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿರುವುದರಿಂದ ನೀವು ತಾತ್ಕಾಲಿಕವಾಗಿ ಸಂಪುಟದಿಂದ ಹೊರಗಿರಿ.
ತನಿಖೆ ಪೂರ್ಣಗೊಂಡು ಸತ್ಯಾಸತ್ಯತೆ ಹೊರಬಂದ ನಂತರ ನಿಮ್ಮನ್ನು ಮತ್ತೆ ಮಂತ್ರಿ ಮಾಡುತ್ತೇವೆ, ಅಲ್ಲಿಯವರೆಗೂ ರಾಜೀನಾಮೆ ನೀಡಿ ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಲಹೆ ಮಾಡಿದರು.
ಹಗರಣದಲ್ಲಿ ನನ್ನ ಪಾತ್ರವಿಲ್ಲ, ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ನಾಗೇಂದ್ರ ಸಮಜಾಯಿಷಿ ನೀಡಿದರಾದರೂ, ಇಲಾಖೆ ಹೊಣೆ ನಿನ್ನ ಜವಾಬ್ದಾರಿ, ಸಿಬಿಐ ಆರೋಪಟ್ಟಿ ಸಲ್ಲಿಸಿರುವುದರಿಂದ ನೀನು ಅಧಿಕಾರದಲ್ಲಿ ಮುಂದುವರೆಯುವುದು ಸರಿಯಲ್ಲ, ನಾಳೆ ನೀನೇ ಸ್ವಪ್ರೇರಿತನಾಗಿ ರಾಜೀನಾಮೆ ಕೊಟ್ಟುಬಿಡು ಎಂದು ಹೇಳಿ ಕಳುಹಿಸಿದರು.
ರಾಜೀನಾಮೆ ಸಲ್ಲಿಕೆ
ನಾಗೇಂದ್ರ, ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿ, ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ನಾಗೇಂದ್ರ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪಕ್ಷ ಹಾಗೂ ಸರ್ಕಾರದ ಘನತೆಗೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಅವರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ.
ಅವರ ರಾಜೀನಾಮೆ ಸ್ವೀಕರಿಸುವುದು, ಬಿಡುವುದು ಮುಖ್ಯಮಂತ್ರಿ ಅವರಿಗೆ ಸೇರಿದ ವಿಷಯ, ವರಿಷ್ಠರೊಂದಿಗೆ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.


