ಬೆಳಗಾವಿ:ಜನವರಿ ನಂತರ ನಿಮ್ಮ ಗ್ರಹಗತಿ ಸರಿಯಿಲ್ಲ, ಒದ್ದು ಮುಖ್ಯಮಂತ್ರಿ ಸ್ಥಾನ ಕಿತ್ತುಕೊಳ್ಳಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನಸಭೆಯಲ್ಲೇ ಹೇಳಿದ ಪ್ರಸಂಗ ಇಂದು ಜರುಗಿತು.
ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಅಗಲಿದ ಮಾಜಿ ಶಾಸಕರಿಗೆ ಸಂತಾಪ ಸೂಚನೆ ಕಲಾಪದಲ್ಲಿ ಮಾತನಾಡಿದ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಗುಣಗಾನ ಮಾಡುತ್ತಾ, ಅವರ ಆಡಳಿತಾವಧಿಯಲ್ಲಿ ಧಮ್ಕಿ ಹಾಕಿ ಮಂತ್ರಿ ಸ್ಥಾನ ಪಡೆದುಕೊಂಡೆ.
ಸರ್ಕಾರ ರಚನೆ ಸಂದರ್ಭದಲ್ಲಿ ಕೇವಲ ಎಂಟು ಮಂದಿಯನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ವರಿಷ್ಠರು ಅವಕಾಶ ನೀಡಿದ್ದರು, ಆ ಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ.
ಮುಂದೆ ಅವಕಾಶ ಸಿಗದು
ಆ ಸಂದರ್ಭದಲ್ಲಿ ನನ್ನ ಗುರುಗಳಾದ ಜ್ಯೋತಿಷಿ ದ್ವಾರಕನಾಥ್ ಅವರ ಬಳಿ ವಿಷಯ ಹಂಚಿಕೊಂಡಾಗ, ’ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕು, ಇಲ್ಲವಾದರೆ ಮುಂದೆ ಅವಕಾಶ ಸಿಗದು ಎಂದು ಸಲಹೆ ಮಾಡಿದರು.
ಗುರುಗಳ ಮಾತಿನಂತೆ ಜಯಚಂದ್ರ ಅವರೊಂದಿಗೆ ಕೃಷ್ಣ ಅವರನ್ನು ತಡರಾತ್ರಿ ಭೇಟಿ ಮಾಡಿ ನಮ್ಮನ್ನು ಮಂತ್ರಿಮಂಡಲದಿಂದ ಏಕೆ ಬಿಟ್ಟಿದ್ದೀರಿ, ನಿಮ್ಮನ್ನು ರಾಜ್ಯಸಭಾ ಸದಸ್ಯರನ್ನಾಗಿ, ಕೆಪಿಸಿಸಿ ಅಧ್ಯಕ್ಷರನ್ನಾಗಿಸಲು ಹೆಗಲಿಗೆ-ಹೆಗಲು ಕೊಟ್ಟು ದುಡಿದೆ, ಸರ್ಕಾರ ರಚನೆಯಲ್ಲಿ ನನಗೆ ಅವಕಾಶ ನೀಡಲಿಲ್ಲವೆಂದರೆ ಜನ ಏನೆಂದುಕೊಳ್ಳುತ್ತಾರೆ.
ನಾನೂ ಜೊತೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಸರ್ಕಾರ, ಇಲ್ಲವಾದರೆ ಸರ್ಕಾರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ರುದ್ರ ತಾಂಡವ ಮಾಡುತ್ತಿದ್ದೀಯಾ
ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ, ಏನು ರುದ್ರ ತಾಂಡವ ಮಾಡುತ್ತಿದ್ದೀಯಾ, ಬೆಳಗ್ಗೆ ನೋಡೋಣ ಎಂದರು.
ಪ್ರಮಾಣವಚನಕ್ಕೆ ಸಮಯ ನಿಗದಿಯಾಗಿತ್ತು, ಮತ್ತೆ ಬೆಳಗ್ಗೆ ಹೋದಾಗ ನಿನಗೆ ಗ್ರಹಗತಿ ಸರಿಯಿಲ್ಲ, ಮುಂದೆ ಅಕವಾಶ ಸಿಗಲಿದೆ ಎಂದರು.
ನಾನು ಜ್ಯೋತಿಷ್ಯ ಕೇಳಿದ್ದೇನೆ, ನನಗೆ ಈ ರೀತಿ ಹೇಳಿದ್ದಾರೆ, ಬೇಕಾದರೆ, ಅವರನ್ನೇ ಕೇಳಿ, ನಾನು ಮಂತ್ರಿಯಾಗಬೇಕು ಅಷ್ಟೆ ಎಂದು ಪಟ್ಟು ಹಿಡಿದೆ.
ಮಂತ್ರಿಮಂಡಲಕ್ಕೆ ಸೇರ್ಪಡೆ
ನಂತರ ಕೃಷ್ಣ ಅವರು, ಪ್ರಮಾಣವಚನ ಸಮಯನ್ನೇ ಮುಂದೂಡಿ ವರಿಷ್ಠರ ಮನವೊಲಿಸಿ, ನಮ್ಮನ್ನೂ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡರು ಎಂದರು.
ಶಿವಕುಮಾರ್ ಅವರ ಹೇಳಿಕೆ ವೇಳೆ ಮಧ್ಯೆ ಪ್ರವೇಶಿಸಿದ ಅಶೋಕ್, ಈಗಲೂ ಅದೇ ಪರಿಸ್ಥಿತಿ ಇದೆ, ಯಾವಾಗ ಒದ್ದು ಮುಖ್ಯಮಂತ್ರಿ ಹುದ್ದೆ ಕಿತ್ತುಕೊಳ್ಳುತ್ತೀರಾ ಎಂದು ಮುಖ್ಯಮಂತ್ರಿ ಆಸನ ತೋರಿಸಿ ಕೇಳಿದರು.
ನಿಮಗೆ ಯಾರು ಭವಿಷ್ಯ ಹೇಳಿದ್ದಾರೋ, ಅವರು ನನಗೂ ನಿಮಗೆ ಹೇಳಿದ್ದನ್ನೇ ಹೇಳಿದ್ದಾರೆ, ನನಗೂ ವಿಷಯ ಗೊತ್ತು.
ಗ್ರಹಗತಿ ಸರಿಯಿಲ್ಲ
ಜನವರಿ ನಂತರ ನಿಮ್ಮ ಗ್ರಹಗತಿ ಸರಿಯಿಲ್ಲ, ಅದಕ್ಕೂ ಮೊದಲು ಅಧಿಕಾರ ಪಡೆಯಬೇಕು ಎಂದಿದ್ದಾರೆ, ನಿಮ್ಮ ಹಿಂದಿನ ರೌದ್ರಾವತಾರವನ್ನು ಯಾವಾಗ ತಳೆದು ಅಧಿಕಾರ ಕಿತ್ತುಕೊಳ್ಳುತ್ತೀರಾ ಎಂದರು.
ಇಷ್ಟೆಲ್ಲಾ ಚರ್ಚೆ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ಆಸೀನರಾಗಿರಲಿಲ್ಲ.
ಸಭಾಧ್ಯಕ್ಷರು, ಅಶೋಕ್ ಮತ್ತು ಶಿವಕುಮಾರ್ ನಡುವಿನ ಸಂವಾದದಲ್ಲಿ ಮಧ್ಯೆ ಪ್ರವೇಶಿಸಿ, ಅಶೋಕ್ ಕೇಳಿದ ಎರಡು-ಮೂರು ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡಬೇಡಿ, ನಿಮ್ಮ ಕಚೇರಿಗೆ ಕರೆದು ಮಾತನಾಡಿ ಎಂದು ರೂಲಿಂಗ್ ನೀಡುವುದಾಗಿ ತಿಳಿಸಿದರು.
ನಾಲ್ಕು ದಶಕಗಳ ಒಡನಾಟ
ಈ ಸಂದರ್ಭದಲ್ಲಿ ಮಾತು ಮುಂದುವರೆಸಿದ ಶಿವಕುಮಾರ್, ಕಳೆದ ನಾಲ್ಕು ದಶಕಗಳ ಕೃಷ್ಣ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿ, ’ಅವರು ಏನೇನು ಹೇಳಿದ್ದರೂ ಅವೆಲ್ಲವೂ ಇದುವರೆಗೆ ಆಗಿದೆ’.
’ಮುಂದೇನು ಆಗುತ್ತೇನೆ ಎಂದೂ ಹೇಳಿದ್ದಾರೆ, ಅದೂ ಆಗುತ್ತೆ, ಆದರೆ, ಅದೆಲ್ಲವನ್ನೂ ಇಲ್ಲಿ ತಿಳಿಸಲು ಹೋಗುವುದಿಲ್ಲ, ನನ್ನ ಕೊಠಡಿಯಲ್ಲಿ ಮಾತನಾಡೋಣ ಬನ್ನಿ’ ಎಂದು ವಿಷಯಕ್ಕೆ ತೆರೆ ಎಳೆದರು.


